ಅಯೋಧ್ಯೆ ಮಂದಿರ ಸಮೀಪದ ನಿವಾಸಗಳ ಮೇಲೆ ಕೆಫೆಟೇರಿಯಾ !
Team Udayavani, Aug 4, 2023, 7:30 AM IST
ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಜತೆಗೆ ಇಡೀ ನಗರದ ವೈಭವವನ್ನೇ ಮತ್ತೆ ಮರುಕಳಿಸುವಂತೆ ಮಾಡಲು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಮಂದಿರ ಸಮೀಪದ ನಗರಗಳಲ್ಲಿರುವ ನಿವಾಸಗಳ ಮೇಲೆ ಕೆಫೆಟೇರಿಯಾಗಳನ್ನು ನಿರ್ಮಿಸಲು ಪ್ರಸ್ತಾಪಿಸಿದೆ. ಈ ಮೂಲಕ ಭವ್ಯ ರಾಮ ಮಂದಿರದ ಸಂಪೂರ್ಣ ನೋಟವನ್ನು ನಿವಾಸಗಳ ಮೇಲಿಂದಲೂ ಪ್ರವಾಸಿಗರು ವೀಕ್ಷಿಸಲು ಯೋಜಿಸಲಾಗುತ್ತಿದೆ.
ಈ ಕುರಿತಂತೆ ಅಯೋಧ್ಯೆ ಆಯುಕ್ತ ಗೌರವ್ ದಯಾಳ್ ಮಾಹಿತಿ ನೀಡಿದ್ದು, ಅಯೋಧ್ಯೆಯನ್ನು ಸಂಪೂರ್ಣ ಕಲಾನಗರಿಯನ್ನಾಗಿಸಲು ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಜನ್ಮಭೂಮಿ ಪಥ ಹಾಗೂ ಭಕ್ತಿ ಪಥಗಳಲ್ಲಿರುವ ನಿವಾಸಗಳನ್ನು ಕಲಾ ಕುಸುರಿಗಳಿಂದ ಅಲಂಕರಿಸುವುದು ಹಾಗೂ ಕೆಲವು ನಿವಾಸಗಳ ಮೇಲೆ ಕೆಫೆಟೇರಿಯಾಗಳನ್ನು ನಿರ್ಮಿಸಲು ಚಿಂತಿಸಲಾಗಿದೆ.
ಯಾವ ನಿವಾಸಗಳ ಮಾಲೀಕರು ಆಸಕ್ತಿ ತೋರುವರೋ ಅಂಥವರಿಗೆ ಪ್ರಾಧಿಕಾರವೇ ಸಹಾಯ ಮಾಡಲಿದ್ದು, ಅವರ ನಿವಾಸಗಳನ್ನು ಸರ್ವೆ ಮಾಡಿ, ಕೆಫೆಟೇರಿಯಾ ನಿರ್ಮಿಸಲು ಸಂಪೂರ್ಣ ಯೋಜನೆ ರೂಪಿಸಲಾಗುತ್ತದೆ. ಪ್ರವಾಸಿಗರು ಆ ಕೆಫೆಟೇರಿಯಾಗಳಲ್ಲಿ ಉಳಿಯುವಂಥ ವ್ಯವಸ್ಥೆಗಳನ್ನು ಮಾಡುವುದರಿಂದ ವಾಣಿಜ್ಯ ಉದ್ದೇಶವೂ ನೆರವೇರುತ್ತದೆ. ಜತೆಗೆ ಮಂದಿರದ ಸಂಪೂರ್ಣ ನೋಟವನ್ನು ವೀಕ್ಷಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.
ರೈಲ್ವೆ ನಿಲ್ದಾಣ ನವೀಕರಣಕ್ಕೆ ಮೋದಿ ಶಂಕು ಸ್ಥಾಪನೆ:
ರಾಮ ಜನ್ಮಭೂಮಿಗೆ ಪ್ರಯಾಣ ಸುಗಮಗೊಳಿಸುವ ನಿಟ್ಟಿನಲ್ಲಿ ದರ್ಶನ್ ನಗರ್ ಹಾಗೂ ಭಾರತ್ ಕುಂಡ್ ರೈಲು ನಿಲ್ದಾಣಗಳನ್ನು ನವೀಕರಿಸಲು ಉದ್ದೇಶಿಸಲಾಗಿದ್ದು, ಇದು ಕಾಮಗಾರಿ ಆರಂಭಕ್ಕೆ ಆಗಸ್ಟ್ 6ರ ಭಾನುವಾರ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.