ತೆಂಗಿನ ಕಾಯಿ ನೀಡದೆ ಮಹಿಳೆಗೆ ವಂಚನೆ: ದೂರು ದಾಖಲು
Team Udayavani, Dec 21, 2021, 11:34 AM IST
ಬೆಂಗಳೂರು: ಆನ್ಲೈನ್ ಮೂಲಕ ತೆಂಗಿನ ಕಾಯಿಗಳನ್ನು ಖರೀದಿಸಲು ಮುಂದಾದ ಮಹಿಳೆಗೆ ಮುಂಗಡವಾಗಿ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವಿಮಾನಪುರದ ಮಹಿಳೆ ನೀಡಿದ ದೂರಿನ ಮೇರೆಗೆ ಮಲ್ಲಿಕಾರ್ಜುನ ಮತ್ತು ಮಹೇಶ್ ವಿರುದ್ಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮ್ಮ ಅಂಗಡಿಗೆ ತೆಂಗಿನ ಕಾಯಿಗಳು ಬೇಕಾಗಿತ್ತು. ಹೀಗಾಗಿ, ಅಂಗಡಿ ಮುಂದಕ್ಕೆ ತೆಂಗಿನ ಕಾಯಿಗಳನ್ನು ತಂದು ಹಾಕುವ ವ್ಯಾಪಾರಿಗಳನ್ನು ಹುಡುಕುತ್ತಿದ್ದರು. ಗೂಗಲ್ನಲ್ಲಿ ಈ ಬಗ್ಗೆ ಮಾಹಿತಿ ಹುಡುಕಿದಾಗ ಮೈಸೂರು ಆರ್ಎಂಸಿ ಯಾರ್ಡ್ ಮಲ್ಲಿಕಾರ್ಜುನ್ ಎಂಬಾತನ ಮೊಬೈಲ್ ನಂಬರ್ ದೊರಕಿದೆ. ಮಲ್ಲಿಕಾರ್ಜುನ್ಗೆ ಕರೆ ಮಾಡಿದ ಮಹಿಳೆ ತೆಂಗಿನಕಾಯಿ ಆರ್ಡರ್ ಮಾಡಿದ್ದಾರೆ. ಆದರೆ, ಮುಂಗಡವಾಗಿ ಹಣ ಪಾವತಿಸಿದರೆ ಮಾತ್ರ ತೆಂಗಿನಕಾಯಿ ಕಳುಹಿಸುವುದಾಗಿ ಮಲ್ಲಿಕಾರ್ಜುನ್ ತಿಳಿಸಿದ್ದಾನೆ. ಅದನ್ನು ನಂಬಿದ ಮಹಿಳೆ, ಗೂಗಲ್ ಪೇ ಮೂಲಕ ಆತ ಕೊಟ್ಟ ಬ್ಯಾಂಕ್ ಖಾತೆಗೆ 45 ಸಾವಿರ ರೂ. ವರ್ಗಾವಣೆ ಮಾಡಿದ್ದಾರೆ.
ಹಣ ಪಡೆದ ಆರೋಪಿ, ಬಳಿಕ ಮಹಿಳೆಯ ವಿಳಾಸ ಪಡೆದು ಕೊಂಡಿದ್ದಾನೆ. ಎಷ್ಟು ದಿನವಾದರೂ ತೆಂಗಿನ ಕಾಯಿ ಕಳುಹಿಸರಲಿಲ್ಲ. ಕೊನೆಗೆ ಅಂಗಡಿ ವಿಳಾಸಕ್ಕೆ ಹೋಗಿ ನೋಡಿದಾಗ ಅಂಥ ವ್ಯಕ್ತಿ ಯಾರೂ ಇಲ್ಲವೆಂದು ಗೊತ್ತಾಗಿದೆ. ಮತ್ತೆ ಕರೆ ಮಾಡಿದಾಗ ಮೈಸೂರು ಆರ್ಎಂಸಿ ಯಾರ್ಡ್ ಅಲ್ಲ. ಪಾಂಡವಪುರದಲ್ಲಿ ಅಂಗಡಿ ಇರುವುದಾಗಿ ಆತ ಹೇಳಿದ್ದಾನೆ. ಅಲ್ಲಿಗೆ ಹೋದಾಗ ಅಲ್ಲಿಯೂ ಆರೋಪಿಯ ಭೇಟಿ ಸಾಧ್ಯವಾಗಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಆ ಮಹಿಳೆ ಠಾಣೆಗೆ ದೂರು ನೀಡಿದ್ದಾರೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.