Indo-Pak Cricket: ರಿಮೋಟ್ಗಾಗಿ ಮಕ್ಕಳ ಕಿತ್ತಾಟ: ತಂದೆ ಎಸೆದ ಕತ್ತರಿಗೆ ಮಗ ಸಾವು
ಭಾರತ-ಪಾಕ್ ಮ್ಯಾಚ್ ನೋಡುತ್ತಿದ್ದಾಗ ಘಟನೆ
Team Udayavani, Oct 16, 2023, 12:30 AM IST
ಮೊಳಕಾಲ್ಮೂರು: ಕ್ರಿಕೆಟ್ ಪಂದ್ಯ ನೋಡುತ್ತಿದ್ದ ಅಣ್ಣ-ತಮ್ಮ ರಿಮೋಟ್ಗಾಗಿ ಜಗಳವಾಡುತ್ತಿದ್ದಾಗ ಕೋಪಗೊಂಡ ಅನಾರೋಗ್ಯಪೀಡಿತ ತಂದೆ ಎಸೆದ ಕತ್ತರಿ ಏಟಿಗೆ ಮಗನೊಬ್ಬ ಬಲಿಯಾದ ಘಟನೆ ಪಟ್ಟಣದ ಎನ್ಎಂಎಸ್ ಬಡಾವಣೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಲಕ್ಷ್ಮಣಬಾಬು ಎಂಬವರ ಪುತ್ರ ಚಂದ್ರಶೇಖರ (16) ಮೃತ ಬಾಲಕ.
ಭಾರತ-ಪಾಕಿಸ್ಥಾನ ನಡುವಿನ ಪಂದ್ಯ ವನ್ನು ವೀಕ್ಷಿಸುತ್ತಿದ್ದ ಚಂದ್ರಶೇಖರ ಮತ್ತು 9ನೇ ತರಗತಿ ಓದುತ್ತಿದ್ದ ಆತನ ತಮ್ಮ ಪವನ್ ರಿಮೋಟ್ಗಾಗಿ ಜಗಳವಾಡಿದ್ದರು. ಇದರಿಂದ ಕೋಪಗೊಂಡ ಲಕ್ಷ್ಮಣಬಾಬು, ಮಲಗಿದ್ದಲ್ಲಿಂದಲೇ ಕತ್ತರಿಯನ್ನು ಮಕ್ಕಳತ್ತ ಎಸೆದಿದ್ದಾನೆ. ಇದು ಚಂದ್ರಶೇಖರನ ಕತ್ತಿಗೆ ತಾಗಿ ತೀವ್ರ ಗಾಯಗೊಂಡಿದ್ದಾನೆ. ಕೂಡಲೇ ಆತನ ತಾಯಿ ಲಕ್ಷ್ಮಿ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.