ಕಾರ್ಮಿಕರು ಲಾರಿಯಲ್ಲಿ ಗುಂಪಾಗಿ ಕುಳಿತು ಪ್ರಯಾಣಿಸಿದ ವೀಡಿಯೋ ವೈರಲ್
Team Udayavani, May 27, 2020, 9:55 AM IST
ಚಿತ್ರದುರ್ಗ: ಉತ್ತರಪ್ರದೇಶ ಮೂಲದ ವಲಸೆ ಕಾರ್ಮಿಕರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟ ನಂತರ ಅವರು ಈಚರ್ ಲಾರಿಯೊಂದರಲ್ಲಿ ಪ್ರಯಾಣಿಸಿದ ವೀಡಿಯೋ ವೈರಲ್ ಆಗಿದೆ.
ಚೆನ್ನೈನಿಂದ ಉತ್ತರ ಪ್ರದೇಶಕ್ಕೆ ಸರಕು ಸಾಗಾಣೆ ಮಾಡುವ ಲಾರಿಯಲ್ಲಿ ಪ್ರಯಾಣಿಸುವ ವೇಳೆ ಅದರಲ್ಲಿದ್ದ ಓರ್ವ ಯುವಕ
ವಿಡಿಯೋ ಮಾಡಿದ್ದು, ಅದರಲ್ಲಿ ತಾವು ಅನುಭವಿಸುತ್ತಿರುವ ಕಷ್ಟವನ್ನು ವಿವರಿಸಿದ್ದಾನೆ. ಗೂಡ್ಸ್ ಗಾಡಿಯಲ್ಲಿ ಬರೋಬ್ಬರಿ 58 ಜನ ಒಬ್ಬರಿಗೊಬ್ಬರು ತಾಗಿಕೊಂಡು ಕುಳಿತಿದ್ದು, ಕಾಲು ಚಾಚಲು ಕೂಡಾ ತಾವಿಲ್ಲದ ಸ್ಥಿತಿಯಲ್ಲಿದ್ದಾರೆ. ಹೇಗಾದರೂ ಮಾಡಿ
ಊರು ಸೇರಬೇಕೆಂಬ ಕಾರಣಕ್ಕೆ ಹೀಗೆ ಕಷ್ಟಪಟ್ಟು ತೆರಳುತ್ತಿದ್ದರು. ಆದರೆ ಕ್ರಮೇಣ ಈ ಯಾತ್ರೆ ಯಾತನಮಯವಾಗಿದೆ. ಈ ವೇಳೆ
ವಿಡಿಯೋ ಮಾಡಿರುವ ಯುವಕ ನಾವು ಕರ್ನಾಟಕದಲ್ಲಿದ್ದೇವೆ, ಟ್ರಕ್ನಲ್ಲಿ ಯಾವ ಸ್ಥಿತಿಯಲ್ಲಿದ್ದೇವೆ ನೋಡಿ ಸರ್, ಕೆಳಗಿಳಿಯುವಂತಿಲ್ಲ. ಜನ ಅನುಮಾನದಲ್ಲಿ ನೋಡಿ ಒದೆಯಲು ಬರುತ್ತಾರೆ. ಪೊಲೀಸರ ಭಯವಿದೆ. ನೀರು, ಊಟ ಏನು ಸಿಗುತ್ತಿಲ್ಲ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಪರಿಸ್ಥಿತಿಯನ್ನು ವಿವರಿಸಿದ್ದಾನೆ.
ಈ ವೀಡಿಯೋ ಉತ್ತರಪ್ರದೇಶಕ್ಕೂ ತಲುಪಿ ಅಲ್ಲಿಂದ ಕರ್ನಾಟಕ ಪೊಲೀಸರ ಗಮನಕ್ಕೂ ಬಂದಿದೆ. ಅದೃಷ್ಟ ಎಂಬಂತೆ
ಚಿತ್ರದುರ್ಗ ಪೊಲೀಸರು ಅದೇ ಲಾರಿಯನ್ನು ತಡೆದು ಅದರಲ್ಲಿದ್ದ ಕಾರ್ಮಿಕರನ್ನು ಕ್ವಾರಂಟೈನ್ ಮಾಡಿದ್ದಾರೆ. ಒಂದು ವೇಳೆ ಇಲ್ಲಿಯೂ ಸಿಗದೆ ಮುಂದೆ ಹೋಗಿದ್ದರೆ ಅವರ ಪರಿಸ್ಥಿತಿ ಏನಾಗಿರುತ್ತಿತ್ತೂ ಎನ್ನುವ ಪ್ರಶ್ನೆ ಮೂಡುತ್ತಿದೆ. ಇನ್ನೂ ಒಂದು ಹೆಜ್ಜೆ
ಮುಂದೆ ಹೋಗಿ ಅವರು ಯಾರಿಗೂ ಗೊತ್ತಾಗದೆ ಉತ್ತರಪ್ರದೇಶ ಸೇರಿದ್ದರೆ ಸಮುದಾಯಕ್ಕೆ ಸೋಂಕು ಹರಡುವ ಸಾಧ್ಯತೆಯೂ ಇತ್ತು ಎನ್ನಲಾಗುತ್ತಿದೆ.