ಗುಣಮುಖರಾಗುವ ಸಂಖ್ಯೆಯೂ ಏರಿಕೆ
ಆರು ತಿಂಗಳಿನಿಂದ ಕೊರೊನಾ ಇಳಿಮುಖ
Team Udayavani, Nov 20, 2021, 5:00 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ತಿಂಗಳಿನಿಂದ ಕೊರೊನಾ ದಿನದ ಪ್ರಕರಣ ಇಳಿಮುಖಗೊಳ್ಳುತ್ತಿರುವ ಜತೆಗೆ ಗುಣಮುಖರಾಗುವ ಸಂಖ್ಯೆಯೂ ಏರಿಕೆ ಕಾಣುತ್ತಿದೆ.
ಕೊರೊನಾ ಎರಡನೇ ಅಲೆಯಲ್ಲಿ ಜೂನ್ನಲ್ಲಿ 16,653 ಮಂದಿಗೆ ಕೊರೊನಾ ದೃಢಪಟ್ಟು 20,842 ಮಂದಿ ಗುಣಮುಖರಾಗಿದ್ದಾರೆ. ಜುಲೈಯಲ್ಲಿ 7,518 ಮಂದಿಗೆ ಸೋಂಕು, 9,148 ಮಂದಿ ಗುಣಮುಖ, ಆಗಸ್ಟ್ನಲ್ಲಿ 9,656 ಮಂದಿಗೆ ಸೋಂಕು, 9,987 ಮಂದಿ ಗುಣಮುಖ, ಸೆಪ್ಟಂಬರ್ನಲ್ಲಿ 4,276 ಮಂದಿಗೆ ಸೋಂಕು, 5,576 ಮಂದಿ ಗುಣಮುಖ, ಅಕ್ಟೋಬರ್ನಲ್ಲಿ 1,176 ಮಂದಿಗೆ ಸೋಂಕು, 1,809 ಮಂದಿ ಗುಣಮುಖ ಮತ್ತು ನವೆಂಬರ್ನಲ್ಲಿ 15ರ ವರೆಗೆ 200 ಮಂದಿಗೆ ಸೋಂಕು ದೃಢಪಟ್ಟಿದ್ದರೂ 348 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.
ದ.ಕ.ದಲ್ಲಿ ಸದ್ಯ 123 ಮಂದಿ ಕೊರೊನಾ ಸಕ್ರಿಯ ಪ್ರಕರಣ ಇದ್ದು, ಇದರಲ್ಲಿ 80 ಮಂದಿ (ಶೇ. 65.94) ಗೃಹ ನಿಗಾದಲ್ಲಿದ್ದಾರೆ. 39 ಮಂದಿ (ಶೇ. 31.71) ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ನಾಲ್ವರು (ಶೇ. 3.25) ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಶೇ. 0.28 ಪಾಸಿಟಿವಿಟಿ ದರ ಇದೆ.
ಇದನ್ನೂ ಓದಿ:ಬೆಳೆ ಹಾನಿ ವರದಿಗೆ ಸೂಚನೆ: ಶೋಭಾ ಕರಂದ್ಲಾಜೆ
ಜಿಲ್ಲೆಯಲ್ಲಿ ಸದ್ಯ ಇರುವ 123 ಸಕ್ರಿಯ ಪ್ರಕರಣಗಳಲ್ಲಿ ಮಂಗಳೂರು ನಗರದಲ್ಲಿ ಸದ್ಯ ಅತೀ ಹೆಚ್ಚು ಪ್ರಕರಣ ಇದೆ. ಮಂಗಳೂರು ನಗರದಲ್ಲಿ ಸದ್ಯ 58, ಮಂಗಳೂರು ತಾಲೂಕಿನಲ್ಲಿ 22,ಬಂಟ್ವಾಳ ತಾಲೂಕಿನಲ್ಲಿ 18, ಪುತ್ತೂರಿನಲ್ಲಿ 2, ಬೆಳ್ತಂಗಡಿಯಲ್ಲಿ 5, ಸುಳ್ಯ ದಲ್ಲಿ 6 ಮತ್ತು ಹೊರ ಜಿಲ್ಲೆಯ 12 ಮಂದಿ ಯಲ್ಲಿ ಸಕ್ರಿಯ ಪ್ರಕರಣಗಳಿವೆ.
34,035 ಮಂದಿಗೆ ಟೆಸ್ಟ್,
96 ಮಂದಿಗೆ ಪಾಸಿಟಿವ್
ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ 34,035 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. 96 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, ಶೇ. 0.28ರಷ್ಟು ಪಾಸಿಟಿವಿಟಿ ದರ ಹೊಂದಿದೆ. ಪ್ರತೀ ದಿನವೂ ನಾಲ್ಕು ಸಾವಿರದಷ್ಟು ಮಂದಿಯ ತಪಾಸಣೆ ನಡೆಸಲಾಗುತ್ತಿದ್ದರೂ ಕೊರೊನಾ ದೃಢಪಟ್ಟವರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಎರಡಂಕೆಯಿಂದ ಒಂದಂಕಿಗೆ ಇಳಿದಿದೆ.
ದ.ಕ.ದಲ್ಲಿ ಕೆಲವು ವಾರಗಳಿಂದ ಕೊರೊನಾ ದೈನಂದಿನ ಪ್ರಕರಣ ಇಳಿಮುಖವಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸಂಘಟಿತ ಪ್ರಯತ್ನವೂ ಇಳಿಕೆಗೆ ಕಾರಣ. ಕೊರೊನಾ ಇಳಿಮುಖಗೊಂಡರೂ ಕೊರೊನಾ ಮಾರ್ಗಸೂಚಿ ಪಾಲಿಸಿ. ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕದಿರಿ.
– ಡಾ| ಕಿಶೋರ್ ಕುಮಾರ್,
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ