ಶಿರಾಡಿ ಘಾಟಿ ಬಂದ್: ಜ. 20ರಂದು ನಿರ್ಧಾರ
Team Udayavani, Jan 18, 2022, 6:50 AM IST
ಬೆಳ್ತಂಗಡಿ/ಹಾಸನ: ಸಕಲೇಶಪುರದಿಂದ ಮಾರನಹಳ್ಳಿವರೆಗೆ 10 ಕಿ.ಮೀ. ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಿರಾಡಿ ಘಾಟಿಯಲ್ಲಿ ಸಂಚಾರ ಬಂದ್ ಮಾಡುವ ಬಗ್ಗೆ ಜ. 20ರಂದು ಜನಪ್ರತಿನಿಧಿಗಳು, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆ ನಡೆಸಿದ ಅನಂತರ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.
ವಾಹನ ಸಂಚಾರ ನಿಷೇಧ ಮಾಡುವಂತೆ ರಾ.ಹೆ. ಪ್ರಾಧಿಕಾರವು ಮಾಡಿರುವ ಮನವಿಯ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆ ಹಾಗೂ ವೀಡಿಯೋ ಸಂವಾದದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇದೇ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಲೋಕೋಪಯೋಗಿ ಖಾತೆ ಸಚಿವ ಸಿ.ಸಿ. ಪಾಟೀಲ್, ಶಿರಾಡಿ ಘಾಟಿ ಅಭಿವೃದ್ಧಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಶೀಘ್ರ ಆರಂಭವಾಗಲಿದೆ. ಕಡಿಮೆ ಕಾಲಾವಕಾಶದಲ್ಲಿ ಮುಗಿಸಿ, ಸಾರ್ವಜನಿಕರ ಸಂಚಾರಕ್ಕೆ ಹೆಚ್ಚು ಸಮಯ ತೊಂದರೆಯಾಗದಂತೆ ಪರಿಶೀಲಿಸಲಾಗು ವುದು ಎಂದು ಹೇಳಿದರು.
ಸಾಯಿಲ್ ನೇಲಿಂಗ್ ತಂತ್ರಜ್ಞಾನ
ಭೂ ಕುಸಿತ ಪದೇಪದೆ ಸಂಭವಿಸುತ್ತಿರು ವುದರಿಂದ ಸಾಯಿಲ್ ನೇಲಿಂಗ್ ತಂತ್ರಜ್ಞಾನ ಅಳವಡಿಸಲು 32 ಕೋ.ರೂ.ನ ಟೆಂಡರ್ ಕರೆಯಲಾಗಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.
ಚಾರ್ಮಾಡಿ: 18 ಕೋಟಿ ರೂ.
ಕೇಂದ್ರ ಸಚಿವ ನಿತಿನ್ ಗಡ್ಕರಿ ರಸ್ತೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಿ ಕ್ರಾಂತಿ ಮಾಡಿ¨ªಾರೆ. ರಾಜ್ಯದಲ್ಲಿ ಹಲವಾರು ರಸ್ತೆಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು. ಚಾರ್ಮಾಡಿ ಘಾಟಿ ಪರಿಸರದಲ್ಲಿ ಸುಮಾರು 9 ಕಡೆ ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ.ಇಲ್ಲಿನ ಅಭಿವೃದ್ಧಿಗೆ 18 ಕೋಟಿ ರೂ. ಬಿಡುಗಡೆಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಶೀಘ್ರ ನಡೆದು ಕಾಮಗಾರಿ ಆರಂಭವಾಗಲಿದೆ ಎಂದು ಸಚಿವರು ಹೇಳಿದರು.