ಹದಗೆಟ್ಟ ರಸ್ತೆಯನ್ನು ದುರಸ್ತಿಮಾಡಿ, ಬೀದಿ ದೀಪ ಅಳವಡಿಸಿ ;ಪುರಸಭೆ ಮಾಜಿ ಅಧ್ಯಕ್ಷೆ ಒತ್ತಾಯ
Team Udayavani, Jan 31, 2022, 12:07 PM IST
ಜೇವರ್ಗಿ: ಪಟ್ಟಣದ ಬಸವೇಶ್ವರ ವೃತ್ತದಿಂದ ವಿಜಯಪುರ ರಸ್ತೆಯ ಅಖಂಡೇಶ್ವರ ಕಾಲೋನಿ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಸಂಬಂಧಪಟ್ಟವರು ರಸ್ತೆ ದುರಸ್ತಿ ಮಾಡಿ, ಬೀದಿ ದೀಪ ಅಳವಡಿಸಬೇಕು ಎಂದು ಪುರಸಭೆ ಮಾಜಿ ಅದ್ಯಕ್ಷೆ ಕಸ್ತೂರಿಬಾಯಿ ಸಾಹೇಬಗೌಡ ಕಲ್ಲಾ ಆಗ್ರಹಿಸಿದ್ದಾರೆ.
ಕಳೆದ ಗುರುವಾರ ಶಾಸಕ ಡಾ| ಅಜಯಸಿಂಗ್ ಪಟ್ಟಣದ ಮುಖ್ಯ ರಸ್ತೆ ಅಭಿವೃದ್ಧಿಗೆ 17.6 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದ್ದು ಸಂತಸದ ವಿಷಯ. ಆದರೆ ಈ
ಕಾಮಗಾರಿಯಲ್ಲಿ ಬಸವೇಶ್ವರ ವೃತ್ತದಿಂದ ಚಿಕ್ಕಜೇವರ್ಗಿ ವರೆಗೆ ಮಾತ್ರ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಜೇವರ್ಗಿ ಪಟ್ಟಣ ದಿನೇ ದಿನೇ ಬೆಳೆಯುತ್ತಿದ್ದು, ಶಿಕ್ಷಕರ ಕಾಲೋನಿ, ದತ್ತನಗರ, ಓಂ ನಗರ ಮೂಲಕ ಅಖಂಡೇಶ್ವರ ನಗರದ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಡಾಂಬರ್ ಕಿತ್ತು ಹೋಗಿ, ತಗ್ಗುಗಳು ಬಿದ್ದಿವೆ. ರಾತ್ರಿ ವೇಳೆ ಬೀದಿ ದೀಪಗಳ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಪರದಾಡುವಂತೆ ಆಗಿದೆ.
ಡಿಪ್ಲೋಮಾ ಕಾಲೇಜು, ಮಹಾ ವಿದ್ಯಾಲಯ, ಮೊರಾರ್ಜಿ ವಸತಿ ಶಾಲೆ, ಲೋಕೋಪಯೋಗಿ ಕಚೇರಿಗೆ ತೆರಳುವ ಈ ಮಾರ್ಗದ ದುರಸ್ತಿಗೆ ಹಲವಾರು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿ ಅಖಂಡೇಶ್ವರ ನಗರ (ಷಣ್ಮುಖ ಶಿವಯೋಗಿ ಡಿಪ್ಲೋಮಾ ಕಾಲೇಜಿನ)ದ
ವರೆಗೆ ರಸ್ತೆ ಡಾಂಬರೀಕರಣ, ಚರಂಡಿ, ಬೀದಿ ದೀಪ, ಡಿವೈಡರ್ ಅಳವಡಿಕೆಗೆ ಕ್ರಮ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ನಿರ್ಮಾಣವಾಗಿ ವರ್ಷ ಕಳೆದರೂ ಫುಡ್ ಝೋನ್ ನಿರುಪಯುಕ್ತ
ಬೇಡಿಕೆ ಈಡೇರಿಕೆಗೆ ನಿರ್ಲಕ್ಷ್ಯ ವಹಿಸಿದರೇ ಓಂ ನಗರ, ಅಖಂಡೇಶ್ವರ ನಗರ, ದತ್ತನಗರ, ಶಿಕ್ಷಕರ ಕಾಲೋನಿ ಬಡಾವಣೆ ಜನರೊಂದಿಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.