ಯಾದಗಿರಿಯಲ್ಲಿ ಔಷಧ ಪಾರ್ಕ್ಗೆ ಅಪಸ್ವರ; ತೆಲಂಗಾಣದಲ್ಲೂ ಇಂಥದೇ ಸಮಸ್ಯೆ
ಜನ-ಜಾನುವಾರುಗಳು ರೋಗಕ್ಕೆ ತುತ್ತಾಗುವ ಅಪಾಯವಿದೆ.
Team Udayavani, Sep 25, 2021, 11:05 AM IST
ಯಾದಗಿರಿ: ಕಡೇಚೂರು ಮತ್ತು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ರಾಜ್ಯ ಸರ್ಕಾರ 2478 ಕೋಟಿ ರೂ. ವೆಚ್ಚದಲ್ಲಿ ವಿಶ್ವದರ್ಜೆಯ ಬೃಹತ್ ಔಷಧ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವ ಬೆನ್ನಲ್ಲೇ ಅಪಸ್ವರ ಕೇಳಿಬಂದಿದೆ. ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯಕ್ಕೆ ಈ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಿದೆ. ಕೇಂದ್ರ ಸರ್ಕಾರದ 1000 ಕೋಟಿ ರೂ. ಹಾಗೂ ರಾಜ್ಯದ 1478 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪಾರ್ಕ್ ನಿರ್ಮಾಣವಾಗಲಿದೆ. ಇದರಿಂದ 10 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿದೆ.ಕಡೇಚೂರು ಬಾಡಿಯಾಳ ಭಾಗದಲ್ಲಿ ಗುಣಮಟ್ಟದ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಾಗಲಿವೆ ಎನ್ನಲಾಗಿದೆ.
ಶುರುವಾಗಿದೆ ವಿರೋಧ: ಆದರೆ ಔಷಧ ಪಾರ್ಕ್ ನಿರ್ಮಾಣ ವಾಗುವುದರಿಂದ ಕೆಮಿಕಲ್ ತ್ಯಾಜ್ಯದಿಂದ ಪರಿಸರ ಹಾಳಾಗುವುದಲ್ಲದೇ ಕುಡಿಯುವ ನೀರು ಕಲುಷಿತಗೊಂಡು ಜನ-ಜಾನುವಾರುಗಳು ರೋಗಕ್ಕೆ ತುತ್ತಾಗುವ ಅಪಾಯವಿದೆ. ಕೆಮಿಕಲ್ ತ್ಯಾಜ್ಯ ನದಿಗೆ ಹರಿಯುವುದರಿಂದ ಜಲಚರಗಳಿಗೂ ಮಾರಕವಾಗಲಿದೆ. ಹೀಗಾಗಿ ಈ ಪಾರ್ಕ್ ನಿರ್ಮಾಣದಿಂದ ಲಾಭಕ್ಕಿಂತ ಅಪಾಯವೇ ಹೆಚ್ಚು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಈ ನಡುವೆ ಥರ್ಮಲ್ ಮತ್ತು ಜವಳಿ ಪಾರ್ಕ್ ನಿರ್ಮಿಸಿ ಲಕ್ಷಾಂತರ ಉದ್ಯೋಗ ನೀಡಲಾಗುವುದೆಂದು ಮೊದಲು ತಿಳಿಸಿ ರೈತರಿಂದ ಭೂಮಿ ಪಡೆದ ಸರ್ಕಾರ ಈಗ ಏಕಾಏಕಿ ಔಷಧ ಪಾರ್ಕ್ ಸ್ಥಾಪಿಸಲು ಹೊರಟಿರುವುದು ಈ ಭಾಗದ ರೈತರು ಮತ್ತು ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಜವಳಿ ಪಾರ್ಕ್ ನಿರ್ಮಾಣದಿಂದ ತಮ್ಮ ಮಕ್ಕಳ ನಿರುದ್ಯೋಗ ನಿವಾರಣೆಯಾಗಲಿದೆ ಎಂದು ನಂಬಿ ಭೂಮಿ ಕೊಟ್ಟ ರೈತ ಕುಟುಂಬಗಳ ಮಕ್ಕಳಿಗೆ ಉದ್ಯೋಗವಿಲ್ಲ. ಅಲ್ಲದೇ ರೈತರ ಭೂಮಿಗೆ ನಿಗದಿತ ಹಣ ನೀಡಿಲ್ಲವಾದ್ದರಿಂದ ಕೈಯಲ್ಲಿ ಹಣವಿಲ್ಲದೆ ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಮಹಾನಗರಗಳಿಗೆ
ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ತೆಲಂಗಾಣದಲ್ಲೂ ಇಂಥದೇ ಸಮಸ್ಯೆ!
ತೆಲಂಗಾಣ ರಾಜ್ಯದ ಪಟಾಂಚೇರು-ಬೋಳಾರಂ ವ್ಯಾಪ್ತಿಯ ಪಟಾಂಚೆರು, ಬಡ್ಡಿ, ಕಡಲೂರು ಮತ್ತು ಇತರೆ ಸ್ಥಳಗಳಲ್ಲಿ ಬೃಹತ್ ಔಷಧ ತಯಾರಿಕಾ ಘಟಕಗಳಿದ್ದು, ಔಷಧ ತಯಾರಿಸಲು ರಾಸಾಯನಿಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದರಿಂದ ಹೊರ ಸೂಸಿದ ವಿಷಗಾಳಿ ಮತ್ತು ತ್ಯಾಜ್ಯ ನೀರಿನಿಂದ ಸುತ್ತಮುತ್ತಲಿನ ಗಾಳಿ, ನೀರು ಮತ್ತು ಮಣ್ಣು ಕಲುಷಿತಗೊಂಡಿರುವ ಕುರಿತು ಹಲವು ಬಾರಿ ವರದಿಯಾಗಿದೆ.
ಹೀಗಾಗಿ ಯಾದಗಿರಿ ಜಿಲ್ಲೆಯಲ್ಲೂ ಔಷಧ ಪಾರ್ಕ್ ಸ್ಥಾಪನೆಗೂ ಮುನ್ನ ತೆಲಂಗಾಣದ ಪಟಾಂಚೇರು-ಬೋಳಾರಂ ವ್ಯಾಪ್ತಿಯ ಈಗಿನ ಸ್ಥಿತಿ ಹೇಗಿದೆ ಎಂಬುದನ್ನು ಈ ಭಾಗದ ಜನಪ್ರತಿನಿಧಿಗಳ ನಿಯೋಗ ಒಮ್ಮೆ ನೋಡಿ ಬರುವುದು ಒಳಿತು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಯಾದಗಿರಿ ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ 125 ಕಂಪನಿಗಳಿಗೆ ಅನುಮತಿ ನೀಡಲಾಗಿದೆ. ಈ ಪೈಕಿ 25 ಕಂಪನಿಗಳಿಗೆ ಎನ್ಒಸಿ ಸಿಕ್ಕಿದ್ದು, ಇನ್ನುಳಿದವುಗಳಿಗೆ ಅನುಮತಿ ಸಿಗಬಹುದು. ಔಷಧ ಪಾರ್ಕ್ ಮತ್ತು ಜವಳಿ ಪಾರ್ಕ್ ಸ್ಥಾಪನೆಗಾಗಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇವುಗಳಲ್ಲಿ ಯಾವುದಾದರೊಂದು ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬಹುದೆನ್ನುವ ಭರವಸೆ ಇದೆ. ಕಡೇಚೂರಲ್ಲಿ ಔಷಧ ಪಾರ್ಕ್ ನಿರ್ಮಾಣ ಇನ್ನೂ ತಡವಾಗಲಿದೆ. ಕೇಂದ್ರ ಸರಕಾರ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಅನುಮತಿ ನೀಡುವುದರ ಜತೆಗೆ ಅನುದಾನ ಬಿಡುಗಡೆಗೊಂಡ ನಂತರ ಎಲ್ಲ ಕೆಲಸಗಳು ಆರಂಭವಾಗಲಿವೆ.
ಡಾ| ರಾಗಪ್ರಿಯಾ ಆರ್.,
ಜಿಲ್ಲಾಧಿಕಾರಿ, ಯಾದಗಿರಿ
ನಮ್ಮ ಜನರಿಗೆ ಉದ್ಯೋಗ ಸಿಗಬೇಕೆನ್ನುವ ಉದ್ದೇಶದಿಂದ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗೆ ನೀಡಿದ್ದೇವೆ. ಆದರೆ ಜನ-ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಹ ಕಾರ್ಖಾನೆಗಳ ಸ್ಥಾಪನೆ ಇಲ್ಲಿ ಬೇಡ. ಅಲ್ಲಿನ ಕಾರ್ಖಾನೆಗಳು ಬಿಡುತ್ತಿರುವ ಕಲುಷಿತ ನೀರಿನಿಂದ ಜನ-ಜಾನುವಾರುಗಳಿಗೆ ತೊಂದರೆಯಾಗಿದೆ ಎಂಬ ದೂರುಗಳಿಂದ ಶಾಸಕರು ಜಿಲ್ಲಾಡಳಿತದೊಂದಿಗೆ ಸಭೆ ಕೂಡ ನಡೆಸಿದ್ದಾರೆ. ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ. ಮತ್ತೆ ಈಗ ಔಷಧ ಪಾರ್ಕ್ ಸ್ಥಾಪಿಸಿ ಅಲ್ಲಿನ ವಾತಾವರಣ ಕಲುಷಿತಗೊಳಿಸುವುದು ಬೇಡ.
ಶರಣಗೌಡ ಕಂದಕೂರ, ರಾಜ್ಯ ಉಪಾಧ್ಯಕ್ಷ, ಜೆಡಿಎಸ್ ಯುವ ಘಟಕ
ಜವಳಿ ಪಾರ್ಕ್ ನಿರ್ಮಿಸುತ್ತೇವೆಂದು ರೈತರಿಗೆ ನಂಬಿಸಿ ಭೂಮಿ ಖರೀದಿಸಿರುವ ರಾಜ್ಯ ಸರ್ಕಾರ ಹಿಂದುಳಿದ ಜಿಲ್ಲೆಯೆಂದು ತಿಳಿದು ಬರೀ ಕೆಮಿಕಲ್ ಫ್ಯಾಕ್ಟರಿಗಳನ್ನು ಇಲ್ಲಿ ಸ್ಥಾಪಿಸಲು ಹೊರಟಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ನಡೆಯುವ ಬೃಹತ್ ಹೋರಾಟಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ.
ಟಿ.ಎನ್.ಭೀಮುನಾಯಕ, ಕರವೇ ಜಿಲ್ಲಾಧ್ಯಕ್ಷ, ಯಾದಗಿರಿ
*ಮಹೇಶ ಕಲಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ