ಷೇರು ಮಾರುಕಟ್ಟೆ ಹೆಸರಲ್ಲಿ ವಂಚನೆ: ಮೂವರ ಬಂಧನ
Team Udayavani, May 7, 2022, 11:44 PM IST
ಬೆಂಗಳೂರು: ಯೂಟ್ಯೂಬ್ ನೋಡಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಹಾಗೂ ಅದರ ಕುರಿತು ಕೆಲವು ಸಲಹೆಗಳನ್ನು ನೀಡುವುದಾಗಿ ಸಾರ್ವಜನಿಕರಿಗೆ ಲಕ್ಷಾಂತರ ರೂ. ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ರೆಹಮತುಲ್ಲಾ (29), ಎಂ.ಸಿ. ಮಲ್ಲಯ್ಯ ಸ್ವಾಮಿ (29) ಮತ್ತು ಸಿ. ದುರ್ಗಪ್ಪ (28) ಬಂಧಿತರು. ಆರೋಪಿಗಳಿಂದ 3 ಮೊಬೈಲ್ಗಳು, 6 ಸಿಮ್ಕಾರ್ಡ್ಗಳು ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಒಂದೇ ಊರಿನವರಾಗಿದ್ದು, ಪಿಯುಸಿವರೆಗೆ ವ್ಯಾಸಂಗ ಮಾಡಿದ್ದಾರೆ. ಯೂಟ್ಯೂಬ್ ನೋಡಿಕೊಂಡು ಆನ್ಲೈನ್ ವಂಚನೆ ಮಾಡುವುದೇ ಇವರ ವೃತ್ತಿ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಮೇಕ್ ಇನ್ ಪ್ರಾಫಿಟ್ ಎಂಬ ಕಂಪೆನಿ ತೆರೆದಿದ್ದು, ವಿವಿಧ ಮೂಲಗಳಿಂದ ಸಿಗುವ ಮೊಬೈಲ್ ನಂಬರ್ಗಳಿಗೆ ಕರೆ ಮಾಡಿ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತೇವೆ ಎಂದು ನಂಬಿಸಿ ವಂಚಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.
ನಕಲಿ ಖಾತೆಗಳಿಗೆ ಹಣ
ಆರೋಪಿಗಳು ತಮ್ಮ ಊರಿನ ಅಮಾಯಕ ಜನರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಮಾಡಿ, ಆ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಜತೆಗೆ ಅವರ ಹೆಸರಿನಲ್ಲಿಯೇ ಸಿಮ್ಕಾರ್ಡ್ಗಳನ್ನು ಖರೀದಿಸಿ ಅವುಗಳಿಂದ ಹಣದ ವ್ಯವಹಾರ ನಡೆಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೆಲವರಿಂದ ಲಕ್ಷಾಂತರ ರೂ. ಅನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.