ಪಾಕ್ ಗೆ ಹೋಗುವವರಿಗೆ ಫ್ರೀ ಟಿಕೆಟ್: ಶರಣ್ ಪಂಪ್ ವೆಲ್
2047 ರ ವೇಳೆಗೆ ಇಸ್ಲಾಂ ಆಡಳಿತಕ್ಕೆ ಸಂಚು
Team Udayavani, Feb 5, 2023, 10:14 PM IST
ಮಂಗಳೂರು: ಭಾರತದಲ್ಲಿ 2047 ರ ವೇಳೆಗೆ ಇಸ್ಲಾಂ ಆಡಳಿತಕ್ಕೆ ಸಂಚು ನಡೆಯುತ್ತಿದ್ದು ಅದಕ್ಕೆ ಅವಕಾಶ ನೀಡುವುದಿಲ್ಲ.ಇಸ್ಲಾಂ ಆಡಳಿತ ಬೇಕಾದವರು ಪಾಕಿಸ್ತಾನಕ್ಕೆ ಹೋಗಬಹುದು. ಅವರಿಗೆ ಟಿಕೆಟ್ ವ್ಯವಸ್ಥೆ ಉಚಿತವಾಗಿ ಮಾಡಿಕೊಡುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ನಗರದ ಕೊಟ್ಟಾರದಲ್ಲಿ ರವಿವಾರ ಜರಗಿದ ಹಿಂದೂ ಸಮಾಜೋತ್ಸವದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಇಸ್ಲಾಂ ಆಡಳಿತ ಆರಂಭವಾದ ದೇಶಗಳಲ್ಲಿ ಅಲ್ಲಿನ ನಾಗರಿಕತೆ, ಸಂಸ್ಕೃತಿ ನಾಶವಾಗಿದೆ. ಅದಕ್ಕೆ ಭಾರತದಲ್ಲಿ ಅವಕಾಶ ನೀಡಲಾಗದು. ಹಿಂದೂ ಧರ್ಮಕ್ಕೆ ಶತ್ರುವಾಗಿರುವ ಜಾತಿ ವ್ಯವಸ್ಥೆಯಿಂದ ಹಿಂದೂಗಳು ಹೊರಬರಬೇಕು. ರಾಷ್ಟ್ರಕ್ಕಾಗಿ ಪೂರ್ವಜರ ಹೋರಾಟ, ಬಲಿದಾನದಿಂದ ಸ್ಪೂರ್ತಿ ಪಡೆಯಬೇಕು. ಇನ್ನೊಮ್ಮೆ ಭಾರತ ವಿಭಜಿಸುವ ಷಡ್ಯಂತ್ರ ನಡೆಯುತ್ತಿದ್ದು ಅದನ್ನು ಹಿಮ್ಮೆಟ್ಟಿಸಬೇಕು. ಲವ್ ಜಿಹಾದ್, ಇಸ್ಲಾಂ ಆಡಳಿತ , ಸುರಕ್ಷತೆಗೆ ಆತಂಕ ಮೊದಲಾದ ಸವಾಲುಗಳನ್ಮು ಎದುರಿಸಬೇಕಾಗಿದೆ ಎಂದವರು ಹೇಳಿದರು.
ಹೇಳಿಕೆಗೆ ಬದ್ದ
ಇತ್ತೀಚೆಗೆ ಉಳ್ಳಾಲದಲ್ಲಿ ಶೌರ್ಯ ದಿನ ಕಾರ್ಯಕ್ರಮದಲ್ಲಿ ತಾನು ನೀಡಿದ್ದ ಹೇಳಿಕೆ ಸಮರ್ಥಿಸಿಕೊಂಡ ಶರಣ್, ಹಿಂದೂ ಅಮಾಯಕರ ಹತ್ಯೆಯಾದಾಗ ಯಾರು ಕೂಡ ದನಿ ಎತ್ತಲಿಲ್ಲ. ಹಿಂದೂಗಳಲ್ಲಿಯೀ ಆತ್ಮಸ್ಥೈರ್ಯ ಮೂಡಿಸಬೇಕೆಂಬುದು ನನ್ನ ಉದ್ದೇಶ ಎಂದರು.
ಲವ್ ಜಿಹಾದ್ ಬಗ್ಗೆ ಸಂಸದ ನಳಿನ್ ಹೇಳಿಕೆಯನ್ಮು ಕೂಡ ಶರಣ್ ಸಮರ್ಥಿಸಿಕೊಂಡಿದ್ದು ಅಭಿವೃದ್ದಿ ಕೆಲಸಗಳ ಜತೆಗೆ ಹಿಂದೂಗಳ ಸುರಕ್ಷತೆಯೂ ಮುಖ್ಯ ಎಂದು ಹೇಳಿದರು.
ಗರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಮಾತನಾಡಿ, ಹಿಂದೂ ಸಮಾಜ ಎಚ್ಚರವಾಗಬೇಕಾದ ಕಾಲ ಇದು. ಹಿಂದೂಗಳ ತ್ಯಾಗದಿಂದ ಇಲ್ಲಿಗೆ ಎಲ್ಲರೂ ಬರಲು,ಇರಲು ಅವಕಾಶವಾಗಿದೆ. ಶರಣ್ ಅವರನ್ನು ಗಡಿಪಾರುಮಾಡಬೇಕೆಂದು ಹೇಳುವವರನ್ನೇ ಗಡಿಪಾರು ಮಾಡಬೇಕು. ಶರಣ್ ಅವರಿಗೆ ಭಯೋತ್ಪಾದಕರ ಸಂಪರ್ಕವಿಲ್ಲ ಎಂದು ಹೇಳಿದರು.