“ಅನ್ನದ ಬಟ್ಟಲು ರಕ್ಷಣೆಗೆ ಮಹತ್ವದ ಯೋಜನೆ’
ಶ್ರೀ ಕ್ಷೇತ್ರ ಧ.ಗ್ರಾ.ಯೋ. ಯಾಂತ್ರೀಕೃತ ಭತ್ತ ಬೇಸಾಯ ಪ್ರಾತ್ಯಕ್ಷಿಕೆ
Team Udayavani, Jun 23, 2020, 6:17 AM IST
ಬೆಳ್ತಂಗಡಿ: ಕೂಲಿ ಕಾರ್ಮಿಕರ ಕೊರತೆ ಹಾಗೂ ಭತ್ತದ ಬೇಸಾಯದಲ್ಲಿ ಲಾಭವಿಲ್ಲ ಎಂಬ ಭಾವನೆಯಿಂದ ರೈತರು ಭತ್ತ ಕೃಷಿ ಬೆಳೆಯದೆ ತೋಟಗಾರಿಕೆ ಬೆಳೆಗಳತ್ತ ಮನಸ್ಸು ಮಾಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಅತ್ಯಂತ ಹೆಚ್ಚು ಉತ್ಪಾದನೆಯಾಗುತ್ತಿರುವುದು ಭತ್ತ. ಅನ್ನದ ಬಟ್ಟಲು ಭತ್ತವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾದ್ದರಿಂದ ರಾಜ್ಯಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯು ಯಾಂತ್ರೀಕೃತ ಭತ್ತ ಬೇಸಾಯ ಪದ್ಧತಿಗೆ ಹೆಚ್ಚು ಒತ್ತು ನೀಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಧರ್ಮಸ್ಥಳದಲ್ಲಿ 10 ಎಕ್ರೆ ಭತ್ತದ ಗದ್ದೆಯಲ್ಲಿ ಸೋಮವಾರ ಯಾಂತ್ರೀಕೃತ ಭತ್ತ ಬೇಸಾಯ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೂಲಿ ಕಾರ್ಮಿಕರ ಕೊರತೆ, ಅಧಿಕ ವೆಚ್ಚದಿಂದಾಗಿ ರೈತರು ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದ್ದರಿಂದ ಯಾಂತ್ರೀಕೃತ ಕೃಷಿಯಿಂದ ಅಧಿಕ ಇಳುವರಿ ಪಡೆಯಬಹುದಾಗಿದೆ ಎಂದರು.
ಭತ್ತ ಬೇಸಾಯವನ್ನು
ಲಾಭದಾಯಕ ಮಾಡುವ ಗುರಿ
ಶ್ರೀ ಕ್ಷೇ.ಧ.ಗ್ರಾ.ಯೋ. ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್.ಮಂಜುನಾಥ್ ವಿವರ ನೀಡಿ, ಕೂಲಿ ಆಳುಗಳ ಅವಲಂಬನೆ ಕಡಿಮೆ ಮಾಡಿ, ಭತ್ತ ಬೇಸಾಯ ಲಾಭದಾಯಕವಾಗಿ ಮಾಡುವ ಪ್ರಯತ್ನ ಧರ್ಮಸ್ಥಳ ಗ್ರಾ.ಯೋಜನೆಯ ಯಂತ್ರಶ್ರೀಯಿಂದಾಗಿದೆ ಎಂದರು.
ಪ್ರಸಕ್ತ ವರ್ಷ ಮುಂಗಾರು ಹಂಗಾಮಿ ನಲ್ಲಿ ರಾಜ್ಯದಲ್ಲಿ 30 ಸಾವಿರ ಎಕ್ರೆ (15ಸಾವಿರ ಹೆಕ್ಟೇರ್) ಸಂಪೂರ್ಣ ಯಾಂತ್ರೀಕೃತ ಭತ್ತ ಬೇಸಾಯ ಕೈಗೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಯೋಜನೆಯ 154 (ಸಿಎಚ್ಸಿ) ಬಾಡಿಗೆ ಕೇಂದ್ರಗಳಲ್ಲಿ ನಾಟಿ, ಭೂಮಿ ಹದ ಮಾಡುವ ಟ್ರ್ಯಾಕ್ಟರ್ಗಳು, ಕಳೆ ಕೀಳುವ ಯಂತ್ರಗಳನ್ನು ನಿಯೋಜಿಸ
ಲಾಗಿದೆ. ಬೀಜದಿಂದ ಭತ್ತದವರೆಗೆ ವೈಜ್ಞಾನಿಕವಾಗಿ ಸಂಪೂರ್ಣ ಯಾಂತ್ರೀಕೃತ ವಾಗಲಿದೆ. ಕೃಷಿಕರಿಗೆ ಕಡಿಮೆ ಬೆಲೆಯಲ್ಲಿ ಬಳಸಿಕೊಳ್ಳಲು ಯೋಗ್ಯವಾಗಲಿದೆ ಎಂದರು.
ಯಂತ್ರಶ್ರೀ ತಜ್ಞರ ನೇಮಕ
ಇದಕ್ಕೆಂದೇ ರಾಜ್ಯದಲ್ಲಿ 98 ತಾಲೂಕು ಗಳನ್ನು ಈ ವರ್ಷ ಗುರುತಿಸಿಕೊಂಡು ಪ್ರತಿ ತಾ|ನಲ್ಲಿ ಯಂತ್ರಶ್ರೀ ತಜ್ಞರನ್ನು ನೇಮಿಸ ಲಾಗಿದೆ. ವಿಶೇಷವಾಗಿ ಯೋಜನೆ ಯಿಂದ ರೈತರದೇ ಒಕ್ಕೂಟ ರಚನೆ ಮಾಡಿ ಒಂದು ಎಕ್ರೆ ಕೃಷಿ ನಡೆಸಲು 20,000 ರೂ.ಗಳಂತೆ ಸಾಲವನ್ನು ನೀಡಲಿದ್ದೇವೆ ಎಂದರು.
ಇದಕ್ಕೆ ಪೂರಕವಾಗಿ ಗದ್ದೆಯಲ್ಲಿ ಸೆಣಬು ಬೆಳೆದು ಗೊಬ್ಬರ ತಯಾರಿಗೂ ಅನುಕೂಲ ಮಾಡಿಕೊಡಲಿದ್ದೇವೆ. ರೈತರು ಭತ್ತ ಮಾರಾಟ ಮಾಡಿದ ಬಳಿಕ ಸಾಲ ಮರು ಪಾವತಿಸಬಹುದಾಗಿದ್ದು, ಸಂಪೂರ್ಣ ರೈತರಿಗೆ ಸುಲಭದಾಯಕವಾಗಿಸಿದ್ದೇವೆ ಎಂದರು. ಇದಕ್ಕೆ ಪೂರಕವಾಗಿ ಡಾ| ಹೆಗ್ಗಡೆ ಅವರು 50 ಕಟಾವು ಯಂತ್ರ ಖರೀದಿಗೆ ಅನುಮತಿ ನೀಡಿದ್ದು, ಈಗಾಗಲೇ 40 ಯಂತ್ರಗಳು ಕೈಸೇರಿವೆ. 20 ದಾವಣಗೆರೆ, 20 ಮೈಸೂರಿನಲ್ಲಿ ಹಾರೆÌಸ್ಟ್ ಬ್ಯಾಂಕ್ನಲ್ಲಿ ಇರಿಸಲಾಗಿದೆ. ಕರ್ನಾಟಕದಲ್ಲಿ ಮೊದಲು ಹಾರೆÌಸ್ಟ್ ಬ್ಯಾಂಕ್ ತಯಾರಿಸಿದ ಸಂಸ್ಥೆಯಾಗಿ ಧರ್ಮಸ್ಥಳ ಮೂಡಿಬಂದಿದೆ. ಈ ಯಂತ್ರಗಳು ನವೆಂಬರ್ನಿಂದ ಈ ವರೆಗೆ 30 ಸಾವಿರ ಗಂಟೆಗಳ ಕೆಲಸ ನಿರ್ವಹಿಸುವ ಮೂಲಕ ರೈತರ ಜತೆಯಲ್ಲಿ ರೈತರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ವಿಪತ್ತು ನಿರ್ವಹಣೆ ಪ್ರಾತ್ಯಕ್ಷಿಕೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜ ನೆಯ ಆಶ್ರಯ ದಲ್ಲಿ ಸರಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಘಟಕದ ಸಹಭಾಗಿತ್ವದಲ್ಲಿ ಧರ್ಮಸ್ಥಳದಲ್ಲಿ ಸೋಮವಾರ ಆಯೋಜಿಸಿದ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಲೋಕಾರ್ಪಣೆ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ರಕ್ಷಣಾ ಪರಿಕರ ವೀಕ್ಷಿಸಿದರು. ಬಳಿಕ ನೇತ್ರಾವತಿ ಸ್ನಾನಘಟ್ಟದಲ್ಲಿ ವಿಪತ್ತು ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ಈ ವೇಳೆ ಎಂ.ಎಲ್.ಸಿ. ಹರೀಶ್ ಕುಮಾರ್, ಎನ್ಡಿಆರ್ಎಫ್ ಘಟಕದ ಮುಖ್ಯಸ್ಥ ಗೋಪಾಲ್ಲಾಲ್ ಮೀನಾ ಮತ್ತಿತರರಿದ್ದರು.
200 ಕೋ.ರೂ. ಸಾಲ
ರಾಜ್ಯದಲ್ಲಿ ಶ್ರೀ ಕ್ಷೇತ್ರ ಧ.ಗ್ರಾ.ಯೋ. ಪ್ರಗತಿ ನಿಧಿಯಲ್ಲಿ ರೈತರಿಗೆ 200 ಕೋಟಿ ರೂ. ಸಾಲ ಒದಗಿಸಲಿದೆ. ಯಂತ್ರ ಖರೀದಿಗೆ 25 ಕೋಟಿ ರೂ. ಖರ್ಚಾಗಲಿದ್ದು, ಸದ್ಯ ಯೋಜನೆ ರೈತರಿಗೆ ಸಾಲ ಒದಗಿಸಲಾಗುತ್ತಿದೆ. ಇತರ ರೈತರನ್ನೂ ಜತೆ ಸೇರಿಸಿ ಸಂಘ ರಚನೆ ಮಾಡಿ ಸಾಲ ಒದಗಿಸಲು ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು
ಡಾ| ಎಲ್.ಎಚ್.ಮಂಜುನಾಥ್ ತಿಳಿಸಿದರು.