ಹೆಮ್ಮಾಡಿ-ವಂಡ್ಸೆ ರಾಜ್ಯ ಹೆದ್ದಾರಿ ವಿಸ್ತರಣೆ ಪೂರ್ಣ
Team Udayavani, Jun 14, 2020, 5:02 AM IST
ವಂಡ್ಸೆ: ಲಾಕ್ಡೌನ್ನಿಂದಾಗಿ ಹೆಮ್ಮಾಡಿ-ವಂಡ್ಸೆ ಮುಖ್ಯ ರಸ್ತೆಯ ವಿಸ್ತರಣೆ ಹಾಗೂ ಡಾಮರು ಪ್ರಕ್ರಿಯೆ ಸ್ವಲ್ಪ ಕಾಲ ನಿಲ್ಲಿಸಲಾಗಿದ್ದರೂ ಮಳೆಯ ಮೊದಲು ಪೂರ್ಣಗೊಳಿಸಲಾಗಿದ್ದು, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ.
ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರ ಶಿಫಾರಸಿನಂತೆ ಹೆಮ್ಮಾಡಿ-ಕೊಲ್ಲೂರು ಮುಖ್ಯ ರಸ್ತೆಯ ವಿಸ್ತರಣೆ ಹಾಗೂ ಡಾಮರಿಗೆ ಸುಮಾರು 20 ಕೋ.ರೂ. ಅನುದಾನ ಬಿಡುಗಡೆ ಗೊಳಿಸಲಾಗಿತ್ತು. ಕಟ್ ಬೇಲ್ತೂರು, ದೇವಲ್ಕುಂದ ಪರಿಸರದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.
ತಿರುವಿನ ಅಪಘಾತ ವಲಯ ಈಗ ಬಹುತೇಕ ವಿಸ್ತರಣೆಯಾಗಿ ಡಾಮರುಗೊಂಡಿದೆ. ಅವುಗಳಲ್ಲಿ ನೆಂಪು ವೃತ್ತ, ಚಿತ್ತೂರು-ಮಾರಣಕಟ್ಟೆ ವೃತ್ತ, ಹಾಲ್ಕಲ್-ಬೈಂದೂರು-ಕೊಲ್ಲೂರು ವೃತ್ತ ವಿಸ್ತರಣೆಗೊಂಡಿದ್ದು ಈ ಭಾಗದ ಗ್ರಾಮಸ್ಥರ ಬಹುಕಾಲದ ಬೇಡಿಕೆ ಈಡೇರಿಸಿದಂತಾಗಿದೆ.
ರಸ್ತೆ ನಿರ್ಮಾಣ ಕಾಮಗಾರಿ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಗೆ ವಾಹನ ಸಂಚಾರಕ್ಕೆ ಅಡ್ಡಿ, ಆತಂಕ ಎದುರಾಗಬಾರದು ಎಂಬ ಉದ್ದೇಶದಿಂದ ಸರಕಾರಕ್ಕೆ ಮನವರಿಕೆ ಮಾಡಿದ್ದರಿಂದ ಉತ್ತಮ ರಸ್ತೆ ನಿರ್ಮಾಣ ಕಾಮಗಾರಿ ನಡೆಯುವಂತಾಗಿದೆ.
-ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು