ನಾನಿನ್ನೂ ಜೆಡಿಎಸ್ ಶಾಸಕನಾಗಿಯೇ ಇದ್ದೇನೆ: ಜಿ.ಟಿ.ದೇವೇಗೌಡ
Team Udayavani, Jan 29, 2022, 5:00 AM IST
ಮೈಸೂರು: ನಾನಿನ್ನೂ ಜೆಡಿಎಸ್ ಶಾಸಕನಾಗಿಯೇ ಇದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ. ನಾನೇ ದಳದಲ್ಲಿರುವಾಗ ಮತ್ತೊಬ್ಬರನ್ನು ಸೇರಿಸಲು ಸಾಧ್ಯವೇ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲೂ ನಾನು ಜೆಡಿಎಸ್ ಶಾಸಕನಾಗಿರುವ ಕಾರಣ ಮುಂದಿನ ಯಾವುದೇ ತೀರ್ಮಾನ ಮಾಡಿಲ್ಲ.
ಶಾಸಕ ಸಿ.ಎಸ್.ಪುಟ್ಟರಾಜು ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದರ ಕುರಿತು ಹೆಚ್ಚು ಮಾಹಿತಿ ಇಲ್ಲ. ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಪುಟ್ಟರಾಜು ಕ್ಷೇತ್ರದ ಕನಕ ಭವನ ಉದ್ಘಾಟನೆ ವಿಚಾರವಾಗಿ ಭೇಟಿ ಮಾಡಲು ತೆರಳಿದ್ದರು. ಇದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ವಿಚಾರವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.
ಅಲ್ಪಸಂಖ್ಯಾಕರ ನಾಯಕ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಪಕ್ಷ ತೊರೆಯುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಸಿ.ಎಂ.ಇಬ್ರಾಹಿಂ ಹಿರಿಯ ನಾಯಕರು. ಇನ್ನೂ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿಲ್ಲ. ಕಾಂಗ್ರೆಸ್ ಪಕ್ಷದ ಕುರಿತು ಅವರಿಗೆ ಅಸಮಾಧಾನವಿದೆ. ಈ ಕುರಿತಂತೆ ಸಾಕಷ್ಟು ನಾಯಕರು ಚರ್ಚೆ ಮಾಡುತ್ತಿದ್ದಾರೆ. ಎಲ್ಲವೂ ಸರಿಹೋಗುವ ಸಾಧ್ಯತೆ ಇದೆ ಎಂದರು.