Kundapura ವನವಾಸ: ಯುವಕ ಚೇತರಿಕೆ: ಫಲ ನೀಡಿತು ಮನೆಯವರ ಪ್ರಾರ್ಥನೆ
Team Udayavani, Sep 25, 2023, 12:29 AM IST
ಕುಂದಾಪುರ: ಕಾಡಿಗೆ ತೆರಳಿ ನಾಪತ್ತೆಯಾಗಿ 8 ದಿನಗಳ ಬಳಿಕ ಶನಿವಾರ ಕಾಣಿಸಿಕೊಂಡಿದ್ದ ಮಚ್ಚಟ್ಟು ಗ್ರಾಮದ ತೊಂಬಟ್ಟುವಿನ ಇರ್ಕಿಗದ್ದೆ ಶೀನ ನಾಯ್ಕ ಅವರ ಪುತ್ರ ವಿವೇಕಾನಂದ ಚೇತರಿಸಿಕೊಳ್ಳುತ್ತಿರುವುದಾಗಿ ಮನೆಯವರು ತಿಳಿಸಿದ್ದಾರೆ.
ಇಷ್ಟು ದಿನ ಎಲ್ಲಿದ್ದೆ? ಹೇಗೆ ನಾಪತ್ತೆಯಾದೆ? ಎನ್ನುವ ಮನೆಯವರ, ಸಂಬಂಧಿಕರ ಪ್ರಶ್ನೆಗೆ ವಿವೇಕಾನಂದ, ಮನೆಯ ಪಕ್ಕದ ಗದ್ದೆಯ ಬಳಿಯಿರುವ ಕಲ್ಲಿನ ಮೇಲೆ ಕುಳಿತಿದ್ದ ನಾನು ಆ ಬಳಿಕ ಕಾಡಿನಾಚೆಗೆ ತೆರಳಿದೆ. ಅನಂತರ ಮರಳಿ ಬರುವವರೆಗೂ ಏನೇನಾಯಿತು ಎಂಬ ವಿಚಾರ ಗೊತ್ತಾಗುತ್ತಿಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ವಿವೇಕಾನಂದ ಕಳೆದ ಸೆ. 16ರ ಮಧ್ಯಾಹ್ನ ಮನೆಯಿಂದ ಕಾಡಿಗೆ ತೆರಳಿ ನಾಪತ್ತೆಯಾಗಿದ್ದು ಸೆ. 23ರ ಬೆಳಗ್ಗೆ ಕಾಣಿಸಿಕೊಂಡಿದ್ದರು. ಕಾಡಿಗೆ ತೆರಳುವಾಗ ಅವರ ಜತೆಗೇ ಹೋಗಿದ್ದ ಅವರ ಸಾಕುನಾಯಿ ಅನುಕ್ಷಣವೂ ಅವರ ಜತೆಗೇ ಇದ್ದು ಕಾವಲಾಗಿದ್ದು. 8 ದಿನಗಳ ಬಳಿಕ ಅವರ ಜತೆಗೇ ಮರಳಿತ್ತು. ನಾಪತ್ತೆಯಾದ ಬಳಿಕ ಮನೆಯವರು, ಪೊಲೀಸರು, ಅರಣ್ಯ ಇಲಾಖೆಯವರು, ಊರವರು ವಾರ ಕಾಲ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.
ಅಭಯ ನೀಡಿದ್ದ ದೈವ
ವಿವೇಕಾನಂದ ನಾಪತ್ತೆಯಾಗಿ 2-3 ದಿನಗಳು ಕಳೆದರೂ ಪತ್ತೆಯಾಗದಿದ್ದಾಗ ಮನೆಯವರು ಮನೆ ದೈವವಾದ ಪಂಜುರ್ಲಿಯ ಬಳಿ ಹಾಗೂ ಕಟಪಾಡಿಯ ಕೊರಗಜ್ಜನ ಸನ್ನಿಧಿಯಲ್ಲಿ ಪ್ರಶ್ನೆ ಕೇಳಿದ್ದರು. ವಿವೇಕಾನಂದ ಬದುಕಿರುವುದಾಗಿ ಅಭಯ ದೊರಕಿತ್ತು. ಬಳಿಕ ಪಂಜುರ್ಲಿ ಮತ್ತು ಕೊರಗಜ್ಜನ ಆಣತಿಯಂತೆ ಮನೆಯವರು ಗದ್ದೆಯಲ್ಲಿದ್ದ ಪಂಜುರ್ಲಿ ದೈವದ್ದು ಎಂದು ಹೇಳಲಾಗುವ ಕಲ್ಲಿಗೆ ಕೈ ಮುಗಿದು, ದೀಪವಿಟ್ಟು ಪೂಜೆ ಮಾಡಿ, ಪ್ರಾರ್ಥಿಸುತ್ತಿದ್ದರು. ಅದರ ಫಲವಾಗಿಯೇ 8 ದಿನಗಳ ಬಳಿಕ ವಿವೇಕಾನಂದ ಸುರಕ್ಷಿತವಾಗಿ ಮರಳಿದ್ದಾನೆ ಎಂದು ಮನೆಯವರು ನಂಬಿದ್ದಾರೆ.