ಕುಣಿಗಲ್: ಗಂಡನ ಕೊಲೆಗೆ ಸುಪಾರಿ ಕೊಟ್ಟ ಹೆಂಡತಿ; ಮೂರು ಮಂದಿ ಬಂಧನ
Team Udayavani, Feb 13, 2023, 12:40 PM IST
ಕುಣಿಗಲ್: ಗಂಡನ ಕೊಲೆಗೆ ಸುಪಾರಿ ನೀಡಿದ್ದಕ್ಕೆ ಓರ್ವ ಮಹಿಳೆ ಸೇರಿದಂತೆ ಮೂರು ಮಂದಿಯನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.
ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ್ ಎಂಬವರ ಕೊಲೆಗೆ ಸಂಬಂಧಿಸಿದಂತೆ ಅತನ ಹೆಂಡತಿ ಹರ್ಷಿತಾ (20) ಹಾಗೂ ಆಕೆಯ ಚಿಕ್ಕಮ್ಮನ ಮಗ ರಘು, ರವಿಕಿರಣ್ ಬಂಧಿತ ಆರೋಪಿಗಳು.
ಫೆ.3 ರಂದು ಕುಣಿಗಲ್ ಪಟ್ಟಣದಲ್ಲಿ ಮಂಜುನಾಥ್ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿ ಸೀನಪ್ಪಮಹಳ್ಳಿ ಗ್ರಾಮದ ತನ್ನ ಸ್ವಂತ ಮನೆಗೆ ಬಂದಿದ್ದಾನೆ. ನಂತರ ಮಧ್ಯರಾತ್ರಿ ಸುಮಾರು 12 ಗಂಟೆಗೆ ಆತನಿಗೆ ಕರೆ ಬಂದಿದ್ದಕ್ಕಾಗಿ ಎದ್ದು ಹೊರ ಹೋಗಿದ್ದು, ಮತ್ತೇ ಆತ ಮನೆಗೆ ವಾಪಸ್ಸಾಗಿಲ್ಲ.
ಊರಿನಿಂದ ಒಂದು ಕಿ.ಮೀ ದೂರದಲ್ಲಿ ಇರುವ ಕಿತ್ನಾಮಂಗಲ ಕೆರೆಯಲ್ಲಿ ಆತನ ಶವ ಪತ್ತೆಯಾಗಿದೆ.
ಅಕ್ರಮ ಸಂಬಂಧ; ಗಂಡನ ಕೊಲೆಗೆ ಸುಪಾರಿ
ಈ ಸಂಬಂಧ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ತಂಡ ರಚಿಸಿ, ತನಿಖೆ ಆರಂಭಿಸಿ ಆರೋಪಿಗಳ ಪೈಕಿ ಮೂವರನ್ನು ಬಂಧಿಸಿದ್ದಾರೆ. ಕೊಲೆಗೆ ಹೆಂಡತಿಯೇ ಸುಪಾರಿ ನೀಡಿರುವುದು ಆರೋಪಿಗಳನ್ನು ಪತ್ತೆ ಹಚ್ಚಿದ್ದಾಗ ತಿಳಿದು ಬಂದಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.