6 ದಿನಗಳ ಚಿರತೆ ಸೆರೆ ಕಾರ್ಯಾಚರಣೆ ವಿಫಲ : ಸಕ್ರೆಬೈಲಿಗೆ ಗಜಪಡೆ ಪಯಣ
Team Udayavani, Jan 9, 2021, 4:01 PM IST
ಗಂಗಾವತಿ: ತಾಲೂಕಿನ ಆನೆಗೊಂದಿ ಕಿಷ್ಕಿಂದೆ, ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ಚಿರೆತೆಗಳನ್ನು ಸೆರೆ ಹಿಡಿಯಲು ಕಳೆದ 6
ದಿನಗಳಿಂದ ನಡೆಸಿದ್ದ ಗಜಪಡೆ ಕಾರ್ಯಾಚರಣೆ ವಿಫಲವಾದ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಕ್ರಿಬೈಲು ಆನೆ ಶಿಬಿರಕ್ಕೆ ಶುಕ್ರವಾರ ಆನೆಗಳನ್ನು ವಾಪಸ್ ಕಳುಹಿಸಲಾಗಿದೆ.
ವಿರೂಪಾಪುರಗಡ್ಡಿಯ ಒರ್ವ ಯುವಕನನ್ನು ಚಿರತೆದಾಳಿ ನಡೆಸಿ ಕೊಂದು ಹಾಕಿದ ನಂತರ ಸಾರ್ವಜನಿಕರ ವಲಯದಲ್ಲಿ
ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಕ್ರೆಬೈಲು ಆನೆ ಶಿಬಿರದಿಂದ ಎರಡು ಆನೆಗಳು ಎಂಟು ಜನ ಮಾವುತರ ತಂಡ ಹಾಗೂ ಒರ್ವ ವೈದ್ಯಾಧಿಕಾರಿಯನ್ನು ಕರೆಸಿ ವಿರೂಪಾಪುರಗಡ್ಡಿ, ಸಾಣಾಪುರ ಜಂಗ್ಲಿ, ಅಂಜನಾದ್ರಿ ಬೆಟ್ಟಗಳ ಸುತ್ತ ಆನೆಗಳ ಪಹರೆ ನಡೆಸಲಾಗಿತ್ತು.
ಚಿರತೆಗಳಿರುವ ಸ್ಥಳವನ್ನು ಆನೆಗಳು ವಾಸನೆ ಮೂಲಕ ಪತ್ತೆ ಮಾಡಿ ಗೀಳಿಡುತ್ತವೆ. ಇದರಿಂದ ಚಿರತೆಗಳು ಗುಹೆಯಿಂದ ಹೊರಗೆ ಆಗಮಿಸುತ್ತವೆ. ಆ ಸಂದರ್ಭದಲ್ಲಿ ಅರವಳಿಕೆ ಬಳಸಿ ಶೂಟ್ ಮಾಡಲು ನಿರ್ಧರಿಸಲಾಗಿತ್ತು. ಕಳೆದ 6 ದಿನಗಳಿಂದ ಅಂಜನಾದ್ರಿ ಸುತ್ತಲಿನ ಬೆಟ್ಟ ಪ್ರದೇಶದ ಸುತ್ತಲೂ ಆನೆಗಳನ್ನು ಸುತ್ತಾಡಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಆದ್ದರಿಂದ ವಾಪಸ್ ಆನೆಗಳನ್ನು ಕಳುಹಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಚಿರತೆಗಳ ಮಲ ಮೂತ್ರದ ಜಾಗ ಪತ್ತೆ: ಈ ಮಧ್ಯೆ ಅರಣ್ಯ ಇಲಾಖೆ ರಚನೆ ಮಾಡಿದ ತಂಡ ಅಂಜನಾದ್ರಿ ಬೆಟ್ಟದ ಸುತ್ತಲಿನ
ಬೆಟ್ಟಗುಡ್ಡಗಳಲ್ಲಿ ಸಂಚಾರ ಮಾಡಿ ಚಿರತೆಗಳಿರುವ ಜಾಗವನ್ನು ವೈಜ್ಞಾನಿಕವಾಗಿ ಪತ್ತೆ ಮಾಡುವ ಕಾರ್ಯ ನಡೆಸುತ್ತಿದೆ.
ಗುಹೆಗಳು ಮತ್ತು ಬೆಟ್ಟದ ಮೇಲಿನ ಖಾಲಿ ಜಾಗದಲ್ಲಿರುವ ಚಿರತೆಗಳ ಮಲಮೂತ್ರಗಳನ್ನು ಸಂಗ್ರಹ ಮಾಡಿ ಕಳೆದ ಎಷ್ಟು ದಿನಗಳಿಂದ ಚಿರತೆಗಳು ವಾಸ ಮಾಡುತ್ತಿರುವ ಕುರಿತು ವೈಜ್ಞಾನಿಕ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.
ಹೆಚ್ಚುವರಿಯಾಗಿ ಸಿಸಿ ಕ್ಯಾಮರಾ ಮತ್ತು ಬೋನ್ಗಳನ್ನು ಇರಿಸಲಾಗಿದೆ.