ಬಾವಿಯಲ್ಲಿ ಮೀನು ಹಿಡಿದುಕೊಡುವ ಆಸೆ ತೋರಿಸಿ ಬಾಲಕಿಯ ಹತ್ಯೆ!
Team Udayavani, Dec 5, 2020, 11:31 AM IST
ಮಂಡ್ಯ: ಮದ್ದೂರು ತಾಲೂಕಿನ ಹುರುಗಲವಾಡಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬಾಲಕಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ 17 ವರ್ಷದ ಬಾಲಕನನ್ನು ಬಂಧಿಸಿ ಮೈಸೂರಿನ ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿ ರಿಮೆಂಡ್ ರೂಂಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಹೇಳಿದರು.
ಬಳ್ಳಾರಿಯಿಂದ ಕಬ್ಬು ಕಟಾವು ಮಾಡಲು ಬಂದಿದ್ದ ಕಾರ್ಮಿಕ ಕುಟುಂಬಸ್ಥರೊಂದಿಗೆ ಬಾಲಕಿ ಬಂದಿದ್ದಳು. ಆರೋಪಿ ಮನೆ
ಪಕ್ಕದಲ್ಲಿಯೇ ಇವರು ಗುಡಿಸಲು ಹಾಕಿಕೊಂಡು ವಾಸವಾಗಿದ್ದರು. ಇದರಿಂದ ಆರೋಪಿಇವರಿಗೆತುಂಬಾ ಪರಿಚಿತನಾಗಿದ್ದ.
ಬಾಲಕಿಯ ಜತೆಗೂ ಸಲುಗೆಯಿಂದ ಇದ್ದ.
ಇದರಿಂದ ಆ ಕುಟುಂಬಸ್ಥರು ಈತನನ್ನು ಒಳ್ಳೆಯವನೆಂದು ನಂಬಿದ್ದರು. ಡಿ.2ರಂದು ಕಬ್ಬು ಕಟಾವು ಮಾಡುವಾಗ ಈತನು ಆ ಬಾಲಕಿಗೆ ಪಕ್ಕದ ಬಾವಿಯಲ್ಲಿ ಮೀನು ಹಿಡಿದುಕೊಡುವ ಆಸೆ ತೋರಿಸಿ, ಪುಸಲಾಯಿಸಿಕೊಂಡು ಕರೆದುಕೊಂಡು ಹೋಗಿದ್ದಾನೆ.
ಅದನ್ನು ಕುಟುಂಬಸ್ಥರು ನೋಡಿದ್ದಾರೆ. ಪರಿಚಯಸ್ಥ ಎಂದು ಕಬ್ಬು ಕಟಾವಿನಲ್ಲಿ ನಿರತರಾಗಿದ್ದಾರೆ. ಆತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ತಕ್ಷಣ ಬಾಲಕಿ ಕಿರುಚಿಕೊಂಡಾಗ ಮಚ್ಚಿನಿಂದ ಆಕೆಯ ಕತ್ತು ಕುಯ್ದು ಕೊಲೆ ಮಾಡಿದ್ದಾನೆ. ಬಾಲಕಿ ಕಿರುಚಿಕೊಂಡ ಶಬ್ಧ ಕೇಳಿ ಆಕೆಯ ಪೋಷಕರು ಸ್ಥಳಕ್ಕೆ ಓಡಿ ಬಂದಾಗ ಕೊಲೆಯಾಗಿರುವುದುಕಂಡು ಬಂದಿದೆ.
ಇದನ್ನೂ ಓದಿ:ಚಾರ್ಮಾಡಿ ಘಾಟ್ ನಲ್ಲಿ ಪ್ರಪಾತಕ್ಕೆ ಉರುಳಿಬಿದ್ದ ಕಾರು: ನಾಲ್ವರಿಗೆ ಗಾಯ
ಕಥೆ ಕಟ್ಟಿದ್ದ ಆರೋಪಿ: ಪೋಷಕರು ಬರುತ್ತಿದ್ದಂತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತನ ಗಾಬರಿ ಕಂಡ ಪೋಷಕರು ವಿಚಾರಿಸಿದಾಗ ಯಾರೋ ಇಬ್ಬರು ಬಂದುಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದುಕಥೆ ಕಟ್ಟಿದ್ದ. ನಂತರ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ನನ್ನೊಂದಿಗೆ ಮತ್ತಿಬ್ಬರು ಇದ್ದರು ಎಂದು ಹೆಸರು ಹೇಳಿದ್ದ. ಅವರನ್ನು ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ಅವರದ್ದು ಏನೂ ಇರಲಿಲ್ಲ ಎಂದು ತಿಳಿದು ಬಂದಿದೆ ಎಂದು ಹೇಳಿದರು.
ಗ್ರಾಮದಿಂದ ದೂರ: ಆರೋಪಿ ಕುಟುಂಬಸ್ಥರಿಗೆ ಗ್ರಾಮದಲ್ಲಿ ಒಳ್ಳೆಯ ಹೆಸರು ಇರಲಿಲ್ಲ. ಆದ್ದರಿಂದ ಗ್ರಾಮಸ್ಥರು ಆರೋಪಿ
ಕುಟುಂಬಸ್ಥರನ್ನು ಗ್ರಾಮದ ಹೊರಗಿಟ್ಟಿದ್ದರು. ಆರೋಪಿ ಪ್ರಸ್ತುತ ವರ್ಷ ಎಸ್ಸೆಸ್ಸೆಲ್ಸಿ ಪಾಸಾಗಿದ್ದನು. ಕಾಲೇಜುಗಳು ಆರಂಭವಾಗದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇದ್ದ. ಜತೆಗೆ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ಆದರೆ, ನಮ್ಮ ಇಲಾಖೆಯಲ್ಲಿ ಆತನ ವಿರುದ್ಧ ಯಾವುದೇ ದೂರು ಇರಲಿಲ್ಲ. ಇದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.