ರಾಜ್ಯದಲ್ಲಿ ಡಿಕೆಶಿ ನೇತೃತ್ವದಲ್ಲಿ ಹೊಸ ತಂಡ: ನಿಷ್ಕ್ರಿಯರಿಗೆ ಗೇಟ್ಪಾಸ್
Team Udayavani, Mar 21, 2020, 3:09 AM IST
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಗೊಂಡಿರುವ ಡಿ.ಕೆ.ಶಿವಕುಮಾರ್ ಪಕ್ಷವನ್ನು ಸಂಘ ಟಿಸಲು ಹೊಸ ತಂಡ ರಚನೆಗೆ ಕಾರ್ಯ ಪ್ರವೃತ್ತರಾ ಗಿದ್ದು, ನಿಷ್ಕ್ರಿಯ ಜಿಲ್ಲಾಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರಿಗೆ ಗೇಟ್ ಪಾಸ್ ನೀಡಲು ಮುಂದಾಗಿದ್ದಾರೆ.
ಲೋಕಸಭೆ ಚುನಾವಣೆ ಸೋಲು ಹಿನ್ನೆಲೆಯಲ್ಲಿ ಕೆಪಿಸಿಸಿಯನ್ನು ವಿಸರ್ಜಿಸಿದ್ದರಿಂದ 3 ತಿಂಗಳು ಪದಾಧಿ ಕಾರಿಗಳಿಲ್ಲದೆ ಕೇವಲ ಅಧ್ಯಕ್ಷ, ಕಾರ್ಯಾಧ್ಯಕ್ಷರು ಮಾತ್ರ ಕಾರ್ಯ ನಿರ್ವಹಿಸಿದ್ದರು. ಈಗ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಗೊಳಿಸಲು ತಮ್ಮದೇ ಆದ ಹೊಸ ತಂಡ ರಚನೆಗೆ ತೀರ್ಮಾನಿಸಿದ್ದಾರೆ.
ನಿಷ್ಕ್ರಿಯ ಘಟಕಗಳಿಗೆ ಕೊಕ್: ಕೆಪಿಸಿಸಿಯಲ್ಲಿ ಒಟ್ಟು 23 ವಿವಿಧ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಮು ಖವಾಗಿ ಮಹಿಳಾ ಘಟಕ, ಯುವ ಘಟಕ, ಎನ್ಎಸ್ಯುಐ ಘಟಕಗಳನ್ನು ಹೊರತು ಪಡಿಸಿ ಉಳಿದ ಬಹುತೇಕ ಘಟಕಗಳನ್ನು ವಿಸರ್ಜನೆ ಮಾಡಿ ಹೊಸ ಪದಾಧಿಕಾರಿಗಳ ನೇಮಕ ಮಾಡುವ ಸಾಧ್ಯತೆ ಇದೆ.
ಪಕ್ಷದಲ್ಲಿ ಮುಂಚೂಣಿ ಘಟಕಗಳನ್ನು ಹೊರತು ಪಡೆಸಿ ವೈದ್ಯಕೀಯ ಸೆಲ್, ವಕೀಲರ ಘಟಕ, ಕಾರ್ಮಿಕ ಘಟಕ, ಎಸ್ಸಿ ಎಸ್ಟಿ ಘಟಕ, ಹಿಂದುಳಿದ ವರ್ಗದ ಘಟಕ, ಇಂಟಕ್ ಸೇರಿ 18 ಘಟಕಗಳಲ್ಲಿ ಬಹುತೇಕ ಸೆಲ್ಗಳನ್ನು ಪುನಾರಚನೆ ಮಾಡಲು ಡಿಕೆಶಿ ನಿರ್ಧರಿಸಿ ದ್ದಾರೆ. ಈಗಾಗಲೇ ಎಲ್ಲ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಸಭೆ ನಡೆಸಿ, ನಿಷ್ಕ್ರಿಯರಾಗಿರುವವರು ಸ್ವಯಂಪ್ರೇರಿ ತರಾಗಿ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
ವಿಸಿಟಿಂಗ್ ಕಾರ್ಡ್ ಜಿಲ್ಲಾಧ್ಯಕ್ಷರಿಗೂ ಗೇಟ್ ಪಾಸ್: ರಾಜ್ಯ ಕಾಂಗ್ರೆಸ್ನ 37 ಜಿಲ್ಲಾಘಟಕಗಳಲ್ಲಿ ಬಹು ತೇಕ ಅಧ್ಯಕ್ಷರು ರಾಜ್ಯ ನಾಯಕರ ಶಿಫಾರಸಿನ ಮೇಲೆ ಜಿಲ್ಲಾಧ್ಯಕ್ಷರಾಗಿ ಕೇವಲ ವಿಸಿಟಿಂಗ್ ಕಾರ್ಡ್ಗಾಗಿ ಹುದ್ದೆಯಲ್ಲಿ ಮುಂದುವರಿಯುತ್ತಿದ್ದಾರೆಂಬ ಆರೋಪಗಳಿವೆ. ಅಂತಹವರಿಗೆ ಗೇಟ್ ಪಾಸ್ ನೀಡಿ, ಸಕ್ರಿಯರಾಗಿರುವ ಯುವ ನಾಯಕರನ್ನು ಗುರುತಿಸಿ ಜವಾಬ್ದಾರಿ ವಹಿಸುವ ಬಗ್ಗೆ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಸಕ್ರಿಯರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಕೆಲವು ಜಿಲ್ಲಾಧ್ಯಕ್ಷರಿಗೆ ಬಡ್ತಿ ನೀಡಿ, ರಾಜ್ಯ ಉಪಾಧ್ಯಕ್ಷ ಹಾಗೂ ಪ್ರಧಾನಕಾರ್ಯದರ್ಶಿ ಹುದ್ದೆ ನೀಡುವ ಬಗ್ಗೆಯೂ ಡಿಕೆಶಿ ಆಲೋಚನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಕ್ರಿಯ ಮಾಜಿ ಪದಾಧಿಕಾರಿಗಳಿಗೆ ಅವಕಾಶ: ಲೋಕಸಭೆ ಚುನಾವಣೆ ಸೋಲಿಗೆ ಕಾರಣ ನೀಡಿ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಿದ್ದು ಅನೇಕ ಸಕ್ರಿಯ ಪದಾಧಿಕಾರಿಗಳ ಅಸಮಾಧಾನಕ್ಕೆ ಕಾರಣ ವಾಗಿತ್ತು. ನಾಯಕರ ನಡುವಿನ ಭಿನ್ನಾಭಿಪ್ರಾಯ ಹಾಗೂ ಜೆಡಿಎಸ್ ಜೊತೆಗಿನ ಹೊಂದಾಣಿಕೆ ಯಿಂದ ಪಕ್ಷ ಹೀನಾಯ ಸೋಲು ಅನುಭವಿಸಿದ್ದರೂ ಪದಾಧಿ ಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಿದ್ದಕ್ಕೆ ಕಾರ್ಯ ಕರ್ತರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
ಈಗ ಡಿ.ಕೆ.ಶಿವಕುಮಾರ್ ಮಾಜಿ ಪದಾಧಿಕಾರಿಗಳಲ್ಲಿ ಸಕ್ರಿಯರಾಗಿ ದ್ದವರಿಗೆ ಮತ್ತೂಂದು ಅವಕಾಶ ಕಲ್ಪಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಶುಕ್ರವಾರ ನಡೆದ ಸಭೆಯಲ್ಲಿ ಮಾಜಿ ಪದಾಧಿ ಕಾರಿಗಳಿಗೆ ಅದೇ ಹುದ್ದೆಯಲ್ಲಿ ಮುಂದುವರಿಯುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಅವರ ಕಾರ್ಯ ವೈಖರಿಯನ್ನು ಪರಿಗಣಿಸಿ ಮುಂದೆ ಹೊಸ ತಂಡ ರಚನೆಯ ಸಂದರ್ಭದಲ್ಲಿ ಸಕ್ರಿಯರಾಗಿರುವವರನ್ನು ಪರಿಗಣಿಸಲು ಆಲೋಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೊರೊನಾ ಎಫೆಕ್ಟ್: ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲು ಕೊರೊನಾ ವೈರಸ್ ಭೀತಿ ಎದುರಾಗಿದೆ. ರಾಜ್ಯ ಸರ್ಕಾರ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು ಯಾವುದೇ ಸಭೆ, ಸಮಾರಂಭ ಮಾಡದಂತೆ ಆದೇಶ ಹೊರಡಿಸಿರುವುದರಿಂದ ಅಧಿಕಾರ ಸ್ವೀಕಾರ ಸಮಾರಂಭ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.
* ಶಂಕರ ಪಾಗೋಜಿ