ಅಂದುಕೊಂಡಿದ್ದೇ ಒಂದು, ಆಗಿದ್ದು ಇನ್ನೊಂದು…
Team Udayavani, Jun 30, 2020, 4:56 AM IST
ನಾನು ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದಾಗ ಅಪ್ಪನಿಗೆ ನನ್ನ ಕುರಿತು ಯೋಚನೆ ಶುರು ವಾಯಿತು. ವಿದ್ಯೆಯಂತೂ ತಲೆಗೆ ಹತ್ತುವುದಿಲ್ಲ. ಇವನಿಗೆ ಮದುವೆ ಮಾಡಿಬಿಡೋಣ ಅಂತಲೂ ಯೋಚನೆ ಮಾಡಿದ್ದರು. ಅದರೆ, ಕೂತು ತಿನ್ನುವಷ್ಟು ಆಸ್ತಿ ಇರಲಿಲ್ಲ. ಹಾಗಾಗಿ ಆ ಯೋಚನೆಯನ್ನು ಕೈಬಿಟ್ಟರು. ಅಪ್ಪ ಪೋಸ್ಟ್ಮನ್. ನಾನು ಫೇಲ್ ಆಗಿದ್ದೇ ತಡ, ಅಂಚೆ ಕಚೇರಿಗೆ ಬಂದ ಪೋಸ್ಟ್ಗಳನ್ನು ಹಂಚಲು, ಅವರ ಬದಲಿ ಸಹಾಯಕನಾಗಿ ನನ್ನನ್ನು ಬಳಸಿಕೊಂಡರು.
ಈ ಕೆಲಸ ಮಾಡಿದ್ದಕ್ಕೆ, ತಿಂಗಳಿಗೆ 20ರೂ. ಕೊಡೋರು. ಅದೇ ನನ್ನ ಮೊದಲ ಪ್ರೊಫೇಷನ್. ಇದಾದ ನಂತರ ಮಧ್ಯ ಹ್ನದ ಹೊತ್ತು ಹೋಟೆಲ್ನಲ್ಲಿ ಸಪ್ಲೇಯರ್ ಆದೆ, ಅಪ್ಪನಿಗೆ ಹೇಳದೆ. ಒಳ್ಳೆಯ ಉದ್ಯೋಗ ಹಿಡಿಯ ಬೇಕು. ಕೂತು ತಿನ್ನುವಷ್ಟು ಹಣ ಮಾಡಿಟ್ಟು ಕೊಳ್ಳಬೇಕು. ಇವೆರಡೇ ನನ್ನ ಮುಂದೆ ಇದ್ದ ಗುರಿಗಳು. ಹಾಗಾಗಿ, ಹೋಟೆಲ್ಗೆ ಸೇರಿದೆ. ಪ್ರಸ್ಟೀಜ್ ಇಷ್ಟೂ ಆಗುತ್ತದೆ ಅಂತ ತಿಳಿದಾಗ, ಲಾಯರ್ ಆಫೀಸಲ್ಲಿ ಕೆಲಸಕ್ಕೆ ಸೇರಿದೆ.
ಅಲ್ಲಿ ಕಸ ಗುಡಿಸುವುದು, ಕಾಫಿ ತಂದು ಕೊಡುವುದೇ ಮುಖ್ಯ ವೃತ್ತಿಯಾಗಿತ್ತು. ನನ್ನ ಪರಿಸ್ಥಿತಿ ತಿಳಿದ ಬಾಸ್, ಪರೀಕ್ಷೆ ಕಟ್ಟಿಸಿದರು. ಹೇಗೋ ಮಾಡಿ, ಆ ವರ್ಷ ಪಾಸು ಮಾಡಿದೆ. ಸಂಜೆ ಕಾಲೇಜಿನಲ್ಲಿ ಪಿಯುಸಿಗೆ ಸೇರಿಕೊಂಡೆ. ಹೀಗಿದ್ದಾಗಲೇ, ಪೋಸ್ಟ್ಮನ್ ಕೆಲಸವೇ ನನಗೂ ಸಿಕ್ಕಿತು. ಬಂದ ಕಾಗದ, ಗಿಫ್ಟ್ಗಳನ್ನು ನಿಯತ್ತಾಗಿ ವಾರಸುದಾರರಿಗೆ ತಲುಪಿಸುತ್ತಿದ್ದೆ. ಒಂದು ದಿನ ಬೀಟ್ ಬದಲಾಯಿತು. ಆ ಬೀಟ್ನಲ್ಲಿದ್ದವರು ಯಾರಿಗೋ ಪಾರ್ಸೆಲ್ಗಳನ್ನು ಕೊಡಲಿಲ್ಲವೆಂದು ದೂರು ದಾಖಲಾಯಿತು.
ವಿಚಾರಣೆಯಾಗಿ, ನಾನೂ ಕೆಲಸ ಕಳೆದುಕೊಂಡೆ. ಬಹಳ ಬೇಜಾರಾಗಿ, ಸಂಬಂಧಿಗಳ ಮುಂದೆ ತಲೆ ಎತ್ತದಂ ತಾಗಿ ಬೆಂಗಳೂರೇ ಬೇಡ ಅಂತ ಸೋದರಮಾವನ ಊರಿಗೆ ಹೋಗಿ, ಅವರ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿದೆ. ನಿಯತ್ತಾಗಿ ದ್ದರೆ ಬದುಕಬಹುದು ಅಂತ ತಿಳಿದದ್ದೇ ಅಲ್ಲಿ. ಸಪ್ಲೈಯರ್, ಮಧ್ಯೆಮಧ್ಯೆ ಕ್ಯಾಷಿಯರ್ ಆದೆ. ಗ್ರಾಹಕರ ಮನಃಸ್ಥಿತಿಗೆ ತಕ್ಕಂತೆ ಸಪ್ಲೈ ಮಾಡುವುದನ್ನು, ಪ್ರೀತಿಯಿಂದ ಮಾತನಾಡುವುದನ್ನು ಕಲಿತೆ.
ನನ್ನ ಸಪ್ಲೈ ಇಷ್ಟಪಡುವವರ ಸಂಖ್ಯೆ ಹೆಚ್ಚಿತು. ಸೋದರಮಾವನಿಗೆ ವಯಸ್ಸಾದ ಕಾರಣ, ಹೋಟೆಲ್ ನಡೆಸುವ ಉಸಾಬರಿ ನನ್ನ ಮೇಲೆ ಬಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿ ಈಗ ನಾನೂ ನಿವೃತ್ತನಾಗಿದ್ದೇನೆ. ಒಂದು ನೌಕರಿ ಹೋದಮೇಲೂ, ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಸಂತೃಪ್ತ ಜೀವನ ನಡೆ ಸಿದ ಖುಷಿ ನನಗಿದೆ.
* ಪುರುಷೋತ್ತಮ