ಬಾಯಿಯ ಕ್ಯಾನ್ಸರ್ ಮತ್ತು ರೇಡಿಯೇಶನ್ ಥೆರಪಿ
Team Udayavani, Apr 30, 2023, 2:00 PM IST
ಕ್ಯಾನ್ಸರ್ ಒಂದು ಸಾಂಕ್ರಾಮಿಕ ರೋಗವಲ್ಲ. ಕ್ಯಾನ್ಸರ್ ಯಾವಾಗಲೂ ಒಂದು ಪ್ರಾಣಾಂತಿಕ ಕಾಯಿಲೆಯಲ್ಲ…
ಜಗತ್ತಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ಗಳಲ್ಲಿ ಬಾಯಿಯ ಕ್ಯಾನ್ಸರ್ ಕೂಡ ಒಂದು. ಪ್ರತೀ ವರ್ಷ ಸುಮಾರು 54,540 ಬಾಯಿಯ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತವೆ. ನಮ್ಮಲ್ಲಿ ಅನೇಕರು ಈ ಅಂಕಿಅಂಶಗಳನ್ನು ಕಂಡ ಬಳಿಕ ನಮಗೂ ಇದೇ ಸ್ಥಿತಿ ಬರಬಹುದೇನೋ ಎಂದು ಹೆದರಿ ಮುಂದೆ ಓದುವುದನ್ನು ನಿಲ್ಲಿಸಿಬಿಡಬಹುದು. ಬಾಯಿಯ ಕ್ಯಾನ್ಸರ್ನ ಕೌಟುಂಬಿಕ ಇತಿಹಾಸ ಇಲ್ಲದವರಿಗೆ ಈ ಕಾಯಿಲೆ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಹಾಗಾಗಿ ನನ್ನ ಕುಟುಂಬದಲ್ಲಿ ಯಾರಿಗೂ ಈ ತೊಂದರೆ ಇರಲಿಲ್ಲ; ಹಾಗಾಗಿ ನನಗೆ ಬಾಯಿಯ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಶೇ. 99ರಷ್ಟು ಇಲ್ಲ ಎಂಬುದಾಗಿಯೂ ಕೆಲವು ಓದುಗರು ಭಾವಿಸುವ ಸಾಧ್ಯತೆ ಇದೆ. ಇವೆರಡೂ ತಪ್ಪಾಗಬಹುದು.
ಬಾಯಿಯ ಕ್ಯಾನ್ಸರ್ ಉಂಟಾಗುವುದಕ್ಕೂ ವ್ಯಕ್ತಿಯೊಬ್ಬ ಸೇದುವ ಸಿಗರೇಟು-ಬೀಡಿಗಳ ಸಂಖ್ಯೆಗೂ ನಿಕಟವಾದ ಸಂಬಂಧವಿದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ಸಿಗರೇಟಿನ ಹೊಗೆಯಲ್ಲಿ 72 ವಿವಿಧ ಬಗೆಯ ಕ್ಯಾನ್ಸರ್ಕಾರಕ ರಾಸಾಯನಿಕ ವಿಷಗಳಿವೆ ಎಂಬ ಅಂಶ ನಿಮಗೆ ಗೊತ್ತಿದೆಯೇ? ನೀವು ನಿಮ್ಮ ಎರಡು ಬೆರಳುಗಳ ನಡುವೆ ಹಿಡಿದು ಸಲೀಸಾಗಿ ಹೊಗೆಯೆಳೆದು ಬಿಡುವ ಕಾಗದದಲ್ಲಿ ಸುತ್ತಿದ ತಂಬಾಕಿನ ತುಂಡು ಇನ್ನಿತರ ಯಾವುದೇ ಬಾಯಿಯ ಕ್ಯಾನ್ಸರ್ ಮತ್ತು ರೇಡಿಯೇಶನ್ ಥೆರಪಿ ಕಾಯಿಲೆಗಳಿಗಿಂತ ಹೆಚ್ಚು ನಿಧಾನವಾಗಿ, ಅತೀವ ಯಾತನಾದಾಯಕವಾಗಿ ನಿಮ್ಮನ್ನು ಕೊಲ್ಲುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ಸಿಗರೇಟು/ ಬೀಡಿ ಪ್ಯಾಕೆಟ್ಗಳ ಮೇಲೆ ಮುದ್ರಿಸಿರುವ ಎಚ್ಚರಿಕೆಯ ಚಿತ್ರ ಮತ್ತು ಸಂದೇಶವನ್ನು ನಿರ್ಲಕ್ಷಿಸಬೇಡಿ, ಅದಕ್ಕೆ ನಿಜವಾಗಿಯೂ ಕಾರಣವಿದ್ದೇ ಇದೆ.
ಕೆಲವು ಚಿಹ್ನೆಗಳು, ಲಕ್ಷಣ
ಬಾಯಿಯಲ್ಲಿ ಉಂಟಾಗಿ ದೀರ್ಘಕಾಲದಿಂದ ಗುಣವಾಗದೆ ಉಳಿದಿರುವ ಗಾಯ/ ಹುಣ್ಣು, ಬಾಯಿ ತೆರೆಯಲು ಕಷ್ಟವಾಗುವುದು, ನಾಲಗೆಯನ್ನು ಚಲಿಸಲು ತೊಂದರೆ, ಕಷ್ಟವಾಗುವುದು, ಕೆಲವೊಮ್ಮೆ ಕಿವಿಯವರೆಗೂ ಕಂಡುಬರುವ ನೋವು (ಚುಚ್ಚಿದ ಅಥವಾ ಇರಿದಂತಹ ನೋವು), ಕೆಟ್ಟ ಅಥವಾ ದುರ್ವಾಸನೆಯುಕ್ತ ಉಸಿರು, ಹಲ್ಲು ಕಿತ್ತುಹೋಗುವುದು, ಆರಂಭಿಕವಾಗಿ ನೋವು ಸಹಿತವಾಗಿರುವ ಮತ್ತು ಆ ಬಳಿಕ ನೋವು ಕಡಿಮೆಯಾಗುವ ಕುತ್ತಿಗೆ ಭಾಗದಲ್ಲಿ ಗಟ್ಟಿಯಾದ ಗಡ್ಡೆ. ಈ ಚಿಹ್ನೆಗಳ ಜತೆಗೆ ತೂಕ ನಷ್ಟ, ಹಸಿವು ನಷ್ಟ ಮತ್ತು ಸಾಮಾನ್ಯ ದಣಿವು ಕೂಡ ಕಂಡುಬರಬಹುದು.
ಪ್ರಸ್ತುತ ಬಾಯಿಯ ಕ್ಯಾನ್ಸರ್ಗೆ ಹಲವು ವಿಧವಾದ ಚಿಕಿತ್ಸೆಯ ಆಯ್ಕೆಗಳಿವೆ. ಅವುಗಳೆಂದರೆ, ಶಸ್ತ್ರಚಿಕಿತ್ಸೆ, ರೇಡಿಯೇಶನ್ ಮತ್ತು ಕಿಮೋಥೆರಪಿ (ಇಮ್ಯುನೋಥೆರಪಿ ಸಹಿತ); ಈ ಆಯ್ಕೆಗಳೆಲ್ಲವೂ ರೋಗಿ ಕ್ಯಾನ್ಸರ್ನ ಯಾವ ಹಂತದಲ್ಲಿ ಚಿಕಿತ್ಸೆಗೆ ದಾಖಲಾಗುತ್ತಾನೆ ಎಂಬುದನ್ನು ಅವಲಂಬಿಸಿದೆ. ಸ್ಥೂಲವಾಗಿ ಹೇಳುವುದಾದರೆ, ಆರಂಭಿಕ ಹಂತದಲ್ಲಿರುವ ಬಾಯಿಯ ಕ್ಯಾನ್ಸರ್ ಪ್ರಕರಣಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ನಿರ್ವಹಿಸಲಾಗುತ್ತದೆ. ಶಸ್ತ್ರಚಿಕಿತ್ಸೆಯ ಬಳಿಕ ಅದರ ವರದಿಯಲ್ಲಿ ಗೊತ್ತು ಮಾಡಲಾದ ಕೆಲವು ಅಪಾಯ ಅಂಶಗಳನ್ನು ಆಧರಿಸಿ ರೇಡಿಯೇಶನ್ ಥೆರಪಿಯನ್ನು ಸಲಹೆ ಮಾಡಲಾಗುತ್ತದೆ. ಇತರ ಪ್ರಕರಣಗಳಲ್ಲಿ, ಶಸ್ತ್ರಚಿಕಿತ್ಸೆ ಉತ್ತಮ ಆಯ್ಕೆ ಅಲ್ಲದೆ ಇದ್ದಲ್ಲಿ ಮುಂದಿನ ಆಯ್ಕೆ ರೇಡಿಯೇಶನ್ ಮತ್ತು ಕಿಮೋಥೆರಪಿ ಆಗಿರುತ್ತದೆ.
ರೇಡಿಯೇಶನ್ ಹೇಗೆ ಕೆಲಸ ಮಾಡುತ್ತದೆ?
ನಿರ್ದಿಷ್ಟ ಸ್ಥಳದಲ್ಲಿರುವ ಕ್ಯಾನ್ಸರ್ ಅಂಗಾಂಶಗಳನ್ನು ಮಾತ್ರ ಗುರಿಪಡಿಸಿ ನಿರ್ಮೂಲನಗೊಳಿಸುವ ಅತ್ಯಧಿಕ ಶಕ್ತಿಯ ಎಕ್ಸ್-ರೇಗಳು ಇದರಲ್ಲಿ ಬಳಕೆಯಾಗುತ್ತವೆ. ಉದಾಹರಣೆಗೆ, ಬಾಯಿಯ ಕುಹರದ ಕ್ಯಾನ್ಸರ್ ಗಳಲ್ಲಿ ಚಿಕಿತ್ಸೆಗೆ ಒಳಪಡುವ ಭಾಗ ಬಾಯಿಯ ಕುಹರ ಮತ್ತು ಕುತ್ತಿಗೆ ಮಾತ್ರ ಆಗಿರುತ್ತದೆ. ಈ ರೇಡಿಯೇಶನನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ 10ರಿಂದ 20 ನಿಮಿಷಗಳ ಅವಧಿಯಲ್ಲಿ; ವಾರಕ್ಕೆ ಐದು ದಿನ, 6ರಿಂದ 8 ವಾರಗಳ ಕೋರ್ಸ್ ಆಗಿ ನೀಡಲಾಗುತ್ತದೆ.
ರೇಡಿಯೇಶನ್ ಚಿಕಿತ್ಸೆಯನ್ನು ಆರಂಭಿಸುವುದಕ್ಕೆ ಮುನ್ನ ಸಡಿಲವಾದ ಹಲ್ಲುಗಳನ್ನು ತೆಗೆದು ಹಾಕಲು, ದಂತ ಕುಳಿಗಳನ್ನು ಮುಚ್ಚಲು ಮತ್ತು ಉತ್ತಮ ಬಾಯಿಯ ನೈರ್ಮಲ್ಯವನ್ನು ಒದಗಿಸುವುದಕ್ಕಾಗಿ ದಂತ ಪರೀಕ್ಷಣೆಯನ್ನು ನಡೆಸಲಾಗುತ್ತದೆ. ರೇಡಿಯೇಶನ್ ಚಿಕಿತ್ಸೆಯುದ್ದಕ್ಕೂ ರೋಗಿಗಳು ಉತ್ತಮ ಬಾಯಿಯ ನೈರ್ಮಲ್ಯವನ್ನು ಕಾಪಾಡಲು ಹೇಳಲಾಗುತ್ತದೆ.
ಉಪ್ಪು ನೀರು ಅಥವಾ ಔಷಧಯುಕ್ತ ನೀರಿನಿಂದ ದಿನಕ್ಕೆ 8ರಷ್ಟು ಬಾರಿ ಬಾಯಿ ಮುಕ್ಕಳಿಸುವ ಮೂಲಕ ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಲಾಗುತ್ತದೆ. ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳದೆ ಇದ್ದರೆ ಅದರಿಂದ ಆಗಾಗ ಬಾಯಿಯ ಸೋಂಕು, ಬಾಯಿ ಹುಣ್ಣುಗಳು ಮತ್ತು ಚಿಕಿತ್ಸೆಯಲ್ಲಿ ವಿಳಂಬ ಆಗಬಹುದು. ಚಿಕಿತ್ಸೆಯ ಸ್ಥಳದಲ್ಲಿ ಕೂದಲು ಉದುರು ಸಾಧ್ಯತೆಯೂ ಇರುತ್ತದೆ. ಪುರುಷ ರೋಗಿಗಳಿಗೆ ಗಡ್ಡ-ಮೀಸೆ ತೆಗೆಯಲು ಅನುಮತಿ ನೀಡದೆ ಇದ್ದಲ್ಲಿ ಅಗತ್ಯ ಬಿದ್ದರೆ ಕತ್ತರಿಯಿಂದ ಅವುಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬಹುದು.
ಗಡ್ಡ -ಮೀಸೆ ತೆಗೆಯುವಾಗ ಸಣ್ಣ ಗಾಯಗಳಾಗಬಹುದಾಗಿದ್ದು, ಅವು ಸೋಂಕಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇರುತ್ತದೆ. ಚರ್ಮ ಕಪ್ಪಗಾಗುವುದು, ವಿಕಿರಣ ಚಿಕಿತ್ಸೆಗೆ ಒಳಗಾದ ಸ್ಥಳದಲ್ಲಿ ಹುಣ್ಣುಗಳು, ಆಹಾರ ನುಂಗಲು ಕಷ್ಟವಾಗುವುದು ಸಂಭಾವ್ಯ ಇತರ ಅಡ್ಡ ಪರಿಣಾಮಗಳಾಗಿವೆ. ಬೆರಳೆಣಿಕೆಯಷ್ಟು ರೋಗಿಗಳಿಗೆ ರುಚಿ ಗ್ರಹಣ ಶಕ್ತಿ ನಷ್ಟವಾಗಬಹುದು. ಆದರೆ ಗಾಬರಿ ಬೇಡ; ಆರು ತಿಂಗಳಿಂದ ಒಂದು ವರ್ಷದ ಅವಧಿಯಲ್ಲಿ ಇದು ಸರಿಹೋಗುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಬಾಯಿಯ ಕ್ಯಾನ್ಸರ್ ಉಂಟಾಯಿತು ಎಂದರೆ ಮರಣದಂಡನೆ ವಿಧಿಸಲ್ಪಟ್ಟಿತು ಎಂದೇನೂ ಅಲ್ಲ. ವೈದ್ಯಕೀಯ ವಿಜ್ಞಾನ ಸಾಕಷ್ಟು ಮುಂದುವರಿದಿರುವ ಪ್ರಸ್ತುತ ದಿನಗಳಲ್ಲಿ ಬಾಯಿಯ ಕ್ಯಾನ್ಸರನ್ನು ಗುಣಪಡಿಸಬಹುದಾಗಿದ್ದು, ರೇಡಿಯೇಶನ್ ಓಂಕಾಲಜಿ ಇದರಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇದರ ಚಿಕಿತ್ಸೆ ಸಾಕಷ್ಟು ಸಮಯ ಹಿಡಿಯುತ್ತದಾದರೂ ಸರಿಯಾದ ಮನೋಧರ್ಮ, ಧನಾತ್ಮಕ ಚಿಂತನೆ ಮತ್ತು ಕೌಟುಂಬಿಕ ಬೆಂಬಲ ಹಾಗೂ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಯ ಮೂಲಕ ಈ ಕಾಯಿಲೆಯ ವಿರುದ್ಧ ಜಯ ಸಾಧಿಸಬಹುದಾಗಿದೆ.
–ಡಾ| ಜಾನ್ ಸನ್ನಿ,
ಅಸಿಸ್ಟೆಂಟ್ ಪ್ರೊಫೆಸರ್,
ರೇಡಿಯೇಶನ್ ಓಂಕಾಲಜಿ ವಿಭಾಗ,
ಕೆಎಂಸಿ, ಮಂಗಳೂರು
-ಡಾ| ರಬಿಯಾ ಸುಸಾನ್ ಅಂಗೀರಸ್,
ಪೋಸ್ಟ್ ಗ್ರ್ಯಾಜುಯೇಟ್ ರೆಸಿಡೆಂಟ್
ರೇಡಿಯೇಶನ್ ಓಂಕಾಲಜಿ ವಿಭಾಗ,
ಕೆಎಂಸಿ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸರು, ರೇಡಿಯೇಶನ್ ಓಂಕಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು)