ಪಿರಿಯಾಪಟ್ಟಣ ಚುನಾವಣ ರಣಕಣ : ಶಾಸಕ ಕೆ.ಮಹದೇವ್ v/s ಕೆ. ವೆಂಕಟೇಶ್
ಮಾಜಿ ಪ್ರಧಾನಿ ದೇವಗೌಡರ ಬೆನ್ನಿಗೆ ಎರಡೆರಡು ಬಾರಿ ಚೂರಿ ಹಾಕಿದ್ದು ಯಾರು?
Team Udayavani, Feb 24, 2023, 7:32 PM IST
ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಕಾಂಗ್ರೆಸ್ ಶಾಸಕ ಕೆ. ವೆಂಕಟೇಶ್ (ಒಳಚಿತ್ರದಲ್ಲಿ ಜೆಡಿಎಸ್ ಶಾಸಕ ಕೆ.ಮಹದೇವ್)
ಪಿರಿಯಾಪಟ್ಟಣ : ವಿಧಾನಸಭಾ ಚುನಾವಣೆಗೂ ಮುನ್ನ ಜೆಡಿಎಸ್ ಶಾಸಕ ಕೆ.ಮಹದೇವ್ ಮತ್ತು ಮಾಜಿ ಕಾಂಗ್ರೆಸ್ ಶಾಸಕ ಕೆ. ವೆಂಕಟೇಶ್ ನಡುವೆ ವಾಕ್ಸಮರ ತೀವ್ರ ಗೊಂಡಿದೆ.
ಸದ್ಯದಲ್ಲೇ ದುರಾಡಳಿತಕ್ಕೆ ಜನತೆಯಿಂದ ತಕ್ಕ ಉತ್ತರ
ಶಾಸಕ ಕೆ.ಮಹದೇವ್ ದುರಾಡಳಿತಕ್ಕೆ ತಾಲೂಕಿನ ಮತದಾರರು ಬೇಸತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವ ವಿಶ್ವಾಸವಿದೆ ಎಂದು ಮಾಜಿ ಶಾಸಕ ಕೆ. ವೆಂಕಟೇಶ್ ತಿಳಿಸಿದರು.
ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನನ್ನ 45 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ತಾಲೂಕಿನ ಎಲ್ಲಾ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ, ತಾಲೂಕಿನಲ್ಲಿ ರೈತರ, ಶ್ರೀಸಾಮಾನ್ಯರ ಆಶೊತ್ತರಗಳಿಗೆ ಪೂರಕವಾಗಿ ನಡೆದುಕೊಂಡು ತಾಲೂಕಿಗೆ ಅಗತ್ಯವಿರುವ ಹಲವು ನೀರಾವರಿ ಹಾಗೂ ಶಾಶ್ವತ ಯೋಜನೆಗಳನ್ನು ಜಾರಿಗೊಳಿಸಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಕೆಲಸ ಮಾಡಿದ್ದೇನೆ. ಆದರೆ ಜೆಡಿಎಸ್ ಶಾಸಕ ಕೆ.ಮಹದೇವ್ ತಾಲೂಕಿನ ಅಭಿವೃದ್ಧಿಯನ್ನು ಮರೆತು ಹಣದ ದಂಧೆ ಮಾಡುತ್ತಾ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ, ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ, ಯಾವುದೇ ಒನ್ನ ಸಾಮಾನ್ಯ ವ್ಯಕ್ತಿ ಮನೆ ಬಾಗಿಲಗೆ ಕೂಡುತ್ತಿಲ್ಲ, ಮನೆಯ ಗೇಟಿಗೆ ರಿಮೋಟ್ ಅಳವಡಿಸಿಕೊಂಡು ಬಂದವರನ್ನು ಒಳಗೆ ಕರೆಯಬೇಕೆ ಬೇಡವೇ ಎಂದು ಯೋಚಿಸಿ ಮನೆ ಗೇಟಿನ ಬಾಗಿಲು ತೆರೆಯುವ ಮೂಲಕ ಅವರನ್ನು ತುಚ್ಯವಾಗಿ ಕಾಣುತ್ತಿದ್ದಾರೆ, ಒಬ್ಬ ರೈತ ಕೃಷಿ ಇಲಾಖೆ ಟಾರ್ಪಾಲ್ ಪಡೆಯಬೇಕಾದರೂ ಶಾಸಕರ ಶಿಫಾರಸ್ಸು ಪತ್ರ ಬೇಕು, ಗುತ್ತಿಗೆದಾರರ ರಸ್ತೆ-ಚರಂಡಿ ಮಾಡಬೇಕಾದರೂ 10 ಪರ್ಸೆಂಟ್ ಕಮಿಷನ್ ಕೊಡಬೇಕು ಇನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಎನ್ಆರ್ಇಜಿ ಕೆಲಸಗಳಿಗೆ ಗ್ರಾಪಂ ಅಧ್ಯಕ್ಷರು ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನ ಮಾಡದೆ ತಾನೇ ಈ ಅನುದಾನ ತಂದಿದ್ದು ಎಂದು ಸುಳ್ಳು ಹೇಳಿ ಗ್ರಾಪಂ ಸದಸ್ಯರನ್ನು ರಸ್ತೆ ಕಾಮಗಾರಿಗಳ ಚಾಲನಾ ಕಾರ್ಯಕ್ರಮಗಳಿಗೆ ಆಹ್ವಾನಿಸದೆ ತಾನೇ ಆರೇ-ಗುದ್ದಲಿ ಇಡಿದು ಓಡಾಡುತ್ತಾ ಮತದಾರರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಜನತೆ ಇದೆಲ್ಲದಕ್ಕೂ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಕೃಷ್ಣೇಗೌಡ, ಶೇಖರ್, ಮುತ್ತುರಾಜ್, ಅಣ್ಣೇಗೌಡ, ಎಂ.ಆರ್.ಮುತ್ತುರಾಜ್, ಮಂಜು, ಸ್ವಾಮಿ, ಜವರನಾಯ್ಕ, ತಿಮ್ಮಶೆಟ್ಟಿ, ಯೋಗೀಶ್, ಸೋಮೇಗೌಡ ಸೇರಿದಂತೆ 50 ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಹಾಗೂ ಯುವಕರು ವೆಂಕಟೇಶ್ ರವರ ನಾಯಕತ್ವವನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಮೆಲ್ಲಹಳ್ಳಿ ಪ್ರದೀಪ್, ಸಂತೋಷ್, ರವಿ, ಕೀರ್ತಿಕುಮಾರ್, ಕುಮಾರ್, ಮಹದೇವ್, ಶರತ್ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ್ದು ನಾನಾ, ನೀವಾ ?
ಅಧಿಕಾರದ ದುರಾಸೆಯಿಂದ ಮಾಜಿ ಪ್ರಧಾನಿ ದೇವಗೌಡ ಬೆನ್ನಿಗೆ ಎರಡೆರಡು ಬಾರಿ ಚೂರಿ ಹಾಕಿದ್ದು ಯಾರು ಎಂಬುದನ್ನು ಮಾಜಿ ಶಾಸಕ ಕೆ.ವೆಂಕಟೇಶ್ ನೆನಪು ಮಾಡಿಕೊಳ್ಳಬೇಕು ಎಂದು ಶಾಸಕ ಕೆ.ಮಹದೇವ್ ಆರೋಪಿಸಿದರು.
ತಾಲೂಕಿನ ದೊಡ್ಡಹರವೆ ಗ್ರಾಮದಲ್ಲಿ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಕಳೆದ 2018 ರ ಚುನಾವಣೆಗೂ ಮುನ್ನ ದೇವೇಗೌಡರು ತಮ್ಮ ಹೊಸ್ತಿಲು ತುಳಿಯಲು ಬಿಡುವುದಿಲ್ಲ ಎಂಬುದನ್ನು ತಿಳಿದ ಮಾಜಿ ಶಾಸಕ ಕೆ.ವೆಂಕಟೇಶ್ ಸಾ.ರಾ.ಮಹೇಶ್ ರನ್ನು ದೇವೇಗೌಡರ ಮನೆಗೆ ಕಳುಹಿಸಿ ಮಹದೇವ್ 2 ಬಾರಿ ಸೋತಿದ್ದಾರೆ ಮುಂದಿನ ಈ ಬಾರಿಯೂ ಟಿಕೆಟ್ ಕೊಟ್ಟರೆ ಮತ್ತೆ ಸೋಲುತ್ತಾರೆ. ಹಾಗಾಗಿ ವೆಂಕಟೇಶ್ ರನ್ನು ಜೆಡಿಎಸ್ ಗೆ ಕರೆತಂದು ಟಿಕೆಟ್ ಕೊಡೋಣಾ ಎಂದು ಹೇಳಿ ಕಳುಹಿಸಿದ್ದರು ಆಗ ದೇವೇಗೌಡರು ಮಹದೇವ್ ಗೆ ಮೊದಲು ವಿಷಕೊಟ್ಟು ನಂತರ ವೆಂಕಟೇಶ್ ಪಕ್ಷ ಸೇರ್ಪಡೆ ಮಾಡಿಕೊ, ಸೋಲಲಿ, ಗೆಲ್ಲಲಿ ಮಹದೇವ್ ಗೆ ಟಿಕೆಟ್ ಕೊಡೋಣಾ ನಮ್ಮ ಬೆನ್ನಿಗೆ ಚೂರಿ ಹಾಕಿದ ವೆಂಕಟೇಶ್ ಯಾವುದೇ ಕಾರಣಕ್ಕೂ ನಮಗೆ ಬೇಡಾ ಎಂದು ಉಗಿದು ಕಳುಹಿಸಿದ್ದರು ಎಂದು ಆರೋಪಿಸಿದರು.
ನನ್ನ ರಾಜಕೀಯ ಜೀವನದಲ್ಲಿ ನೀಚ ಪ್ರವೃತ್ತಿ ಅಳವಡಿಸಿಕೊಂಡಿಲ್ಲ, ನಾನು ಶಾಸಕನಾಗಿ ಬಂದಾಗ ಕೋಟಿಗಟ್ಟಲೇ ಹಣ ತಂದು ನಿಮ್ಮ ಮುಂದೆ ಸುರಿಯುತ್ತೇವೆ, ಮಂತ್ರಿ ಮಾಡುತ್ತೇವೆ ಜೆಡಿಎಸ್ ಬಿಟ್ಟು ಬನ್ನಿ ಎಂದಾಗಲೇ ನಾನು ಹೋಗಲಿಲ್ಲ ಈಗ ಹೋಗುತ್ತೇವೆಯೇ, ವೆಂಕಟೇಶ್ ದೇವೇಗೌಡರ ಬೆಬ್ಬಿಗೆ ಹಾಕಿದ್ದ ಚೂರಿಯನ್ನು ಅವರ ಕುಟುಂಬ ಮರೆತಿಲ್ಲ, ಹೀಗಿರುವಾಗ ದೇವೇಗೌಡರ ಬೆನ್ನಿಗೆ ನಾನು ಚೂರಿ ಹಾಕುತ್ತೇನೆ ಎಂಬ ಅವರ ಬಾಲೀಷಾ ಹೇಳಿಕೆಗೆ ಸೊಪ್ಪು ಹಾಕುವ ಅಗತ್ಯವಿಲ್ಲ, ಇಂಥ ಸುಳ್ಳು ಹೇಳಿಕೆಗಳನ್ನು ನೀಡುವ ಪ್ರವೃತ್ತಿಯನ್ನು ಬಿಡಬೇಕು ಎಂದರು.
ಕಳೆದ ಮೂರು ದಿನಗಳ ಹಿಂದೆ ಮಾಜಿ ಶಾಸಕ ಕೆ.ವೆಂಕಟೇಶ್ ಕಾಂಗ್ರೆಸ್ ಸಮಾರಂಭ ಒಂದರಲ್ಲಿ ಮಾತನಾಡುತ್ತಾ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಕಾಂಗ್ರೆಸ್ ಪಕ್ಷ ಹೆಸರು ಸೂಚಿಸಿದಾಗ ಇದೇ ಮಹದೇವ್ ದೇವೇಗೌಡರಿಗೆ ವಯಸ್ಸಾಗಿದ್ದು ಅರಿಗ್ಯಾಕೆ, ಕುಪೇಂದ್ರ ರೆಡ್ಡಿಗೆ ಕೊಟ್ಟಿದ್ದರೆ ಸ್ವಲ್ಪ ದುಡ್ಡಾದರೂ ಸಿಗುತ್ತಿತ್ತು ಎಂದು ಅಪಹಾಸ್ಯ ಮಾಡಿ ಈಗ ಓಟಿಗಾಗಿ ದೇವೇಗೌಡ-ಕುಮಾರಸ್ವಾಮಿಯ ಪೋಟೋ ಪ್ರದರ್ಶನ ಮಾಡುತ್ತಾ ಅಲೆದಾಡುತ್ತಿದ್ದಾರೆ ಎಂದು ಟೀಕೆ ಮಾಡಿದರು.