ಜಿಲ್ಲೆಯ ಖಾಸಗಿ ಬಸ್ ಓಡಾಟ ಸದ್ಯ ಅನುಮಾನ
ಬಹುತೇಕ ಖಾಸಗಿ ಬಸ್ಗಳು ಆರ್ಟಿಒಗೆ ಹಸ್ತಾಂತರ
Team Udayavani, May 12, 2020, 5:49 AM IST
ಸಾಂದರ್ಭಿಕ ಚಿತ್ರ.
ಮಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಿಸಲಾಗಿದ್ದ ಲಾಕ್ಡೌನ್ ಸಡಿಲಿಕೆಯಾಗಿದ್ದರೂ ಜಿಲ್ಲೆಯಲ್ಲಿ ಕಾರ್ಯಾಚರಿಸುವ ಖಾಸಗಿ, ಸಿಟಿ ಬಸ್ಗಳು ಮೇ ಮಾಸಾಂತ್ಯದವರೆಗೆ ಓಡಾಡುವುದು ಅನುಮಾನ.
ಜಿಲ್ಲೆಯಲ್ಲಿ ಓಡಾಟ ನಡೆಸುವ ಸುಮಾರು ಶೇ. 95ರಷ್ಟು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಾರಿಗೆ ಇಲಾಖೆಗೆ ಸರಂಡರ್ ಮಾಡಲಾಗಿದೆ. ಒಂದು ವೇಳೆ ಮೇ ಅಂತ್ಯದ ಒಳಗೆ ಸರಂಡರ್ ಮಾಡಿದ ಬಸ್ಗಳು ಕಾರ್ಯಾಚರಣೆ ನಡೆಸಿದರೆ, ಈ ತಿಂಗಳ ಪೂರ್ತಿ ರಸ್ತೆ ತೆರಿಗೆ ಹಣವನ್ನು ಸರಕಾರಕ್ಕೆ ಕಟ್ಟಬೇಕಾದ ಪರಿಸ್ಥಿತಿ ಬಸ್ ಮಾಲಕರಿಗೆ ಬೀಳುತ್ತದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಎಲ್ಲ ಸಿಟಿ, ಖಾಸಗಿ ಬಸ್ ಸಂಚಾರ ಸ್ಥಗಿತ ಗೊಂಡಿತ್ತು. ಲಾಕ್ಡೌನ್ ಸಡಿಲಗೊಂಡರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಅನುವು ನೀಡಿಲ್ಲ.
ಮಂಗಳೂರಿನಲ್ಲಿ ಸುಮಾರು 360 ಸಿಟಿ ಬಸ್ಗಳು ಸಂಚರಿಸುತ್ತವೆ. ಸುಮಾರು 700 ಸರ್ವಿಸ್ ಬಸ್ಗಳು, ಸುಮಾರು 70ರಷ್ಟು ಒಪ್ಪಂದದ ಮೇರೆಗಿನ ಸಾರಿಗೆ, 150ಕ್ಕೂ ಮಿಕ್ಕಿ ಟೂರಿಸ್ಟ್ ಬಸ್ಗಳು ಸಂಚರಿಸುತ್ತವೆ. ಜಿಲ್ಲೆಯಲ್ಲಿ ಸುಮಾರು ಸಾವಿರಕ್ಕೂ ಮಿಕ್ಕ ಖಾಸಗಿ ಬಸ್ಗಳು ಸಂಚರಿಸುತ್ತವೆ. ಸಿಟಿ ಬಸ್ಗಳಿಗೆ 23,000 ರೂ. ರಸ್ತೆ ತೆರಿಗೆ, ಗ್ರಾಮಾಂತರ ಸಂಚರಿಸುವ ಬಸ್ಗಳಿಗೆ 42,000 ರೂ.ನಷ್ಟು ಸರಕಾರಕ್ಕೆ ತೆರಿಗೆ ಕಟ್ಟಬೇಕು. ಲಾಕ್ಡೌನ್ ಹಿನ್ನೆಲೆಯಲ್ಲಿ ಎ. 15ರಂದು ಕಟ್ಟ ಬೇಕಾದ ರಸ್ತೆ ತೆರಿಗೆಯನ್ನು ಜೂ. 1ಕ್ಕೆ ವಿಸ್ತರಿಸಲಾಗಿದೆ.
ದೇಶದಲ್ಲಿ ಮೇ 17ರ ವರೆಗೆ ಲಾಕ್ಡೌನ್ ಇದೆ. ಬಳಿಕ ಬಸ್ ಸಂಚಾರದ ಬಗ್ಗೆ ನಿರ್ಧಾರವಾಗಲಿದೆ. ದ.ಕ. ಜಿಲ್ಲೆ ಸದ್ಯ ಕಿತ್ತಳೆ ವಲಯದಲ್ಲಿದ್ದು, ಬಸ್ ಸಂಚಾರಕ್ಕೆ ಅನುಮತಿ ಇಲ್ಲ. ಬಸ್ ಓಡಾಟ ಯಾವಾಗ ಎನ್ನುವುದರ ಬಗ್ಗೆ ಕೆಎಸ್ಸಾರ್ಟಿಸಿಗೆ ಸರಕಾರ ದಿಂದ ಸದ್ಯ ನಿರ್ದೇಶನ ಬಂದಿಲ್ಲ ಎಂದು ಕೆಎಸ್ಸಾ ರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಬಸ್ ಹಸ್ತಾಂತರ?
ಆರ್ಟಿಒಗೆ ಬಸ್ ಹಸ್ತಾಂತರ ಎಂದರೆ, “ಬಸ್ ಆರ್ಟಿಒಗೆ ಒಪ್ಪಿಸಲಾಗಿದ್ದು, ನಿಬಂಧನೆಗಳನ್ನು ಪಾಲಿಸುತ್ತೇವೆ’ ಎಂದು ಬಸ್ ಮಾಲಕರು ಸ್ಟಾಂಪ್ ಪೇಪರ್ನಲ್ಲಿ ಆರ್ಟಿಒಗೆ ಅರ್ಜಿ ನೀಡಬೇಕು. ಬಳಿಕ ರಸ್ತೆ ತೆರಿಗೆಯಿಂದ ವಿನಾಯಿತಿ ಸಿಗುತ್ತದೆ. ಅದರನ್ವಯ ಪ್ರತೀ 15 ದಿನಗಳಿಗೊಮ್ಮೆ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್ ತಪಾಸಣೆ ನಡೆಸುತ್ತಾರೆ.
ಹಸ್ತಾಂತರ
ಜಿಲ್ಲೆಯಲ್ಲಿ ಓಡಾಡುವ ಬಹುತೇಕ ಬಸ್ಗಳು ಸದ್ಯ ಆರ್ಟಿಒಗೆ ಹಸ್ತಾಂತರಿಸಲಾಗಿದೆ. ಇದರಿಂದಾಗಿ ರಸ್ತೆ ತೆರಿಗೆಯಲ್ಲಿ ವಿನಾಯಿತಿ ಸಿಗಲಿದೆ. ಆರ್ಟಿಒ ಅಧಿಕಾರಿಗಳು ಎಲ್ಲ ಬಸ್ಗಳ ಬಗ್ಗೆ ನಿಗಾ ವಹಿಸಲಿದ್ದು, 15 ದಿನಗಳಿಗೊಮ್ಮೆ ತಪಾಸಣೆ ನಡೆಸುತ್ತಾರೆ.
-ಆರ್.ಎಂ. ವರ್ಣೇಕರ್
ಮಂಗಳೂರು ಆರ್ಟಿಒ
ಅನಿಶ್ಚಿತತೆ
ಜಿಲ್ಲೆಯಲ್ಲಿ ಓಡಾಟ ನಡೆಸುವ ಬಹುತೇಕ ಖಾಸಗಿ ಬಸ್ಗಳನ್ನು ಮಾಲಕರು ಸಾರಿಗೆ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಹೀಗೆ ಮಾಡು ವುದರಿಂದ ರಸ್ತೆ ತೆರಿಗೆಯಲ್ಲಿ ವಿನಾಯಿತಿ ಸಿಗಲಿದೆ. ಅರ್ಧ ಭಾಗ ದಲ್ಲಿ ಬಸ್ ಓಡಿಸಿದರೆ ಈ ತಿಂಗಳ ಪೂರ್ತಿ ರಸ್ತೆ ತೆರಿಗೆ ಕಟ್ಟಬೇಕು. ಹೀಗಾಗಿ ತಿಂಗಳ ಅಂತ್ಯದವರೆಗೆ ಬಸ್ ಓಡಾಟ ಕಷ್ಟ.
-ದಿಲ್ರಾಜ್ ಆಳ್ವ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ