Police: ಪುನೀತ್ ಕೆರೆಹಳ್ಳಿ ಬಿಡುಗಡೆ
Team Udayavani, Sep 17, 2023, 11:21 PM IST
ಬೆಂಗಳೂರು: ಕೊಲೆ, ಬೆದರಿಕೆ, ಅಕ್ರಮ ಚಟುವಟಿಕೆ ಸಹಿತ ಕೆಲವು ಅಪರಾಧ ಪ್ರಕರಣಗಳ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣವನ್ನು ರಾಜ್ಯ ಸರಕಾರ ರದ್ದುಪಡಿಸಿದ್ದು, ಶನಿವಾರವೇ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.
10 ವರ್ಷಗಳಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರು ನಗರ ಸಹಿತ ವಿವಿಧ ಠಾಣೆಗಳಲ್ಲಿ 10 ಅಪರಾಧ ಪ್ರಕರಣಗಳು ದಾಖಲಾಗಿವೆ. ಪದೇಪದೆ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಆರೋಪದಡಿ ಕಳೆದ ಆಗಸ್ಟ್ನಲ್ಲಿ ಪುನೀತ್ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿತ್ತು. ಅದನ್ನು ಪುನೀತ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಕೋರ್ಟ್ ಸೂಚನೆ ಮೇರೆಗೆ ಈ ಕುರಿತ ವಿಚಾರಣೆಗೆ ರಾಜ್ಯ ಸರಕಾರ ಸಲಹಾ ಸಮಿತಿ ರಚಿಸಿತ್ತು. ಸಮಿತಿಯು ಪುನೀತ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧನದಲ್ಲಿಡಲು ಸಾಕಷ್ಟು ಕಾರಣ
ಗಳಿಲ್ಲ ಎಂದಿತ್ತು. ಈ ವರದಿ ಆಧರಿಸಿ ಒಳಾಡಳಿತ ಇಲಾಖೆಯ (ಕಾನೂನು ಮತ್ತು ಸುವ್ಯವಸ್ಥೆ) ಅಧೀನ ಕಾರ್ಯದರ್ಶಿಯವರು ಪುನೀತ್ ವಿರುದ್ಧ ಹೊರಡಿಸಿರುವ ಬಂಧನದ ಆದೇಶವನ್ನು ಹಿಂಪಡೆದು ಈ ಪ್ರಕರಣಕ್ಕೆ ಅನ್ವಯವಾಗುವಂತೆ ತತ್ಕ್ಷಣದಿಂದ ಜಾರಿಗೆ ಬರುವಂತೆ ಬಂಧ ಮುಕ್ತಗೊಳಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದಾರೆ.