Kashmir: ಕಾಶ್ಮೀರವನ್ನು ಬೆಸೆಯುವ ರೈಲ್ವೆ ಯೋಜನೆ ಸದ್ಯದಲ್ಲೇ ಆರಂಭ
Team Udayavani, Nov 24, 2023, 10:19 PM IST
ಶ್ರೀನಗರ: ದೇಶದ ಇತರೆ ಭಾಗಗಳನ್ನು ನೇರವಾಗಿ ಜಮ್ಮು ಮತ್ತು ಕಾಶ್ಮೀರದೊಂದಿಗೆ ಬೆಸೆಯುವ ರೈಲು ಮಾರ್ಗ ಇನ್ನೇನು ಜನವರಿ, ಫೆಬ್ರವರಿಯಿಂದ ಕಾರ್ಯಾರಂಭ ಮಾಡಲಿದೆ. ಯುಎಸ್ಬಿಆರ್ಎಲ್ ಯೋಜನೆಯೆಂದೇ ಕರೆಸಿಕೊಂಡಿರುವ ಈ ಯೋಜನೆಗೆ ಚಾಲನೆ ನೀಡಿದ್ದು 1994-95ರಲ್ಲಿ. ಆಗ ಪ್ರಧಾನಿಯಾಗಿದ್ದದ್ದು ಪಿ.ವಿ.ನರಸಿಂಹ ರಾವ್, ಪ್ರಸ್ತುತ ನರೇಂದ್ರ ಮೋದಿ ಪ್ರಧಾನಿಯಾಗಿರುವ ಈ ಅವಧಿಯಲ್ಲಿ ಮುಕ್ತಾಯ ಕಾಣುತ್ತಿದೆ.
ತಡ ಯಾಕೆ ಆಗಿದ್ದು?
ಒಟ್ಟು 338 ಕಿ.ಮೀ. ದೂರದ ರೈಲ್ವೆ ಮಾರ್ಗ ನಿರ್ಮಾಣದ ಈ ಯೋಜನೆ 94-95ರಲ್ಲೇ ಆರಂಭವಾದರೂ ಮುಕ್ತಾಯ ಬಹಳ ತಡವಾಯಿತು. ಕಾರಣ ಜಮ್ಮುಕಾಶ್ಮೀರ ಸಂಪೂರ್ಣ ಬೆಟ್ಟಗುಡ್ಡಗಳಿಂದಲೇ ಕೂಡಿರುವ, ಸದಾ ಭೂಕಂಪದ ಅಪಾಯವಿರುವ ಪ್ರದೇಶವಾಗಿರುವುದು. ಉಧಾಮಪುರ-ಶ್ರೀನಗರ-ಬಾರಾಮುಲ್ಲ ಮಾರ್ಗವನ್ನು ಬೆಸೆಯುವ ಈ ಯೋಜನೆಯಲ್ಲಿ ಕಟ್ರಾದಿಂದ ಬನಿಹಾಲ್ವರೆಗಿನ 111 ಕಿ.ಮೀ. ಅತ್ಯಂತ ಸವಾಲಿನ ಜಾಗವಾಗಿತ್ತು. ಈಗ ಇದರ ಕಾಮಗಾರಿ ಶೇ.95 ಮುಗಿದಿದೆ. ಬಾಕಿ ಕಾರ್ಯ ಸ್ವಲ್ಪವೇ ಇದ್ದು, ಕೆಲವೇ ದಿನಗಳಲ್ಲಿ ಮುಗಿಯಲಿದೆ.
ಉಪಯೋಗವೇನು?
ಜಮ್ಮುವಿನಿಂದ ಶ್ರೀನಗರದವರೆಗೆ ತಲುಪಲು ಇದುವರೆಗೆ 6 ಗಂಟೆ ಪ್ರಯಾಣಿಸಬೇಕಿತ್ತು. ಇನ್ನು ಮುಂದೆ ಇದು ಕೇವಲ 3.5 ಗಂಟೆಗಳಿಯಲಿದೆ. ಜಮ್ಮುಕಾಶ್ಮೀರ ಇನ್ನು ನೇರವಾಗಿ ದೇಶದ ಇತರೆ ರೈಲು ಮಾರ್ಗಗಳಿಗೆ ಸಂಪರ್ಕಗೊಳ್ಳಲಿದೆ. ಜಮ್ಮುವಿನಿಂದ ದೇಶದ ಇತರೆ ಭಾಗಗಳಿಗೆ, ಇತರೆ ಭಾಗಗಳಿಂದ ಜಮ್ಮುವಿಗೆ ಇನ್ನು ನೇರ ರೈಲ್ವೆ ಸಂಪರ್ಕ ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಜಮ್ಮುಕಾಶ್ಮೀರದ ತೋಟಗಾರಿಕೆ ಬೆಳೆಗಳನ್ನು ಈ ಟ್ರೈನುಗಳ ಮೂಲಕ ದೇಶದ ಇತರೆ ಭಾಗಗಳಿಗೆ ಸಾಗಿಸಬಹುದು. ವ್ಯಾಪಾರೋದ್ಯಮ ವೃದ್ಧಿಸಲಿದೆ.