ಕರಾವಳಿ-ಮಲೆನಾಡು ಸಹಿತ 12 ಜಿಲ್ಲೆಗಳಲ್ಲಿ ಮಳೆ ಕೊರತೆ
ದಕ್ಷಿಣ ಕನ್ನಡ-ಶೇ. 25, ಉಡುಪಿ-ಶೇ. 4 ಕಡಿಮೆ
Team Udayavani, Jul 9, 2020, 6:39 AM IST
ಮಂಗಳೂರು: ರಾಜ್ಯಕ್ಕೆ ಮುಂಗಾರು ಕಾಲಿಟ್ಟು ಒಂದು ತಿಂಗಳು ಕಳೆಯುತ್ತಿದ್ದು, ಇನ್ನೂ ಬಹುತೇಕ ಕಡೆಗಳಲ್ಲಿ ಮಳೆಗಾಲ ಚುರುಕುಗೊಂಡಿಲ್ಲ. ಇದೇ ಕಾರಣಕ್ಕೆ ರಾಜ್ಯದ 12 ಜಿಲ್ಲೆಗಳಲ್ಲಿ ಸದ್ಯದ ಮಟ್ಟಿಗೆ ಮಳೆ ಕೊರತೆ ಪರಿಸ್ಥಿತಿ ಇದೆ.
ರಾಜ್ಯದ ಕೆಲವು ಭಾಗಗಳಲ್ಲಿ ಮಾತ್ರ ಯಥೇತ್ಛವಾಗಿ ಮಳೆಯಾಗುತ್ತಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಸದ್ಯ ಮಳೆ ಬಿರುಸುಗೊಂಡಿದ್ದರೂ ಈ ಹಿಂದೆ ಕ್ಷೀಣಿಸಿತ್ತು. ಒಟ್ಟಾರೆ ಒಂದು ತಿಂಗಳಿನಲ್ಲಿ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಿತ್ತು. ಮಳೆಗಾಲ ಋತುವಿನಲ್ಲಿ ರಾಜ್ಯದಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಯಥೇತ್ಛವಾಗಿ ಮಳೆಯಾಗುವುದು ವಾಡಿಕೆ. ಆದರೆ ಈ ಬಾರಿ ಕೊರತೆ ಎದುರಾಗಿದೆ. ಜೂ. 1ರಿಂದ ಜು. 7ರ ವರೆಗಿನ ಅಂಕಿ ಅಂಶದಂತೆ ರಾಜ್ಯದಲ್ಲಿ ಅತೀ ಹೆಚ್ಚು ಎಂಬಂತೆ ಚಿಕ್ಕಬಳ್ಳಾಪುರದಲ್ಲಿ ಶೇ. 99ರಷ್ಟು ಮಳೆ ಹೆಚ್ಚಳವಾದರೆ, ಚಿಕ್ಕಮಗಳೂರಿನಲ್ಲಿ ಶೇ. 35ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ.
ಕರಾವಳಿ ಭಾಗಕ್ಕೆ ಹೋಲಿಸಿದರೆ ದ.ಕ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಉಡುಪಿ ಜಿಲ್ಲೆಯ ಹೆಬ್ರಿ ಮತ್ತು ಕಾರ್ಕಳ ತಾಲೂಕಿನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಅದೇ ರೀತಿ ದಕ್ಷಿಣ ಒಳನಾಡಿನ ಎರಡು ಜಿಲ್ಲೆಗಳಲ್ಲಿ, ಉತ್ತರ ಒಳನಾಡಿನ 4 ಜಿಲ್ಲೆಗಳಲ್ಲಿ, ಮಲೆನಾಡಿನ ಎಲ್ಲ ಜಿಲ್ಲೆಗಳಲ್ಲಿ ಮತ್ತು ಕರಾವಳಿಯ ಎರಡು ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ರಾಜ್ಯದಲ್ಲಿ ಶೇ. 7ರಷ್ಟು ಮಳೆ ಕೊರತೆ
ಜೂ. 1ರಿಂದ ಜು. 7ರ ವರೆಗೆ ರಾಜ್ಯದಲ್ಲಿ 257 ಮಿ. ಮೀ. ವಾಡಿಕೆ ಮಳೆಯಲ್ಲಿ 238 ಮಿ. ಮೀ. ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಜೂ. 1ರಿಂದ ಜು. 7ರ ವರೆಗೆ 80 ಮೀ. ಮೀ. ವಾಡಿಕೆ ಮಳೆಯಲ್ಲಿ 112 ಮಿ. ಮೀ. ಮಳೆ ಸುರಿದಿದೆ. ಉತ್ತರ ಒಳನಾಡಿನಲ್ಲಿ 124 ಮಿ. ಮೀ. ವಾಡಿಕೆ ಮಳೆಯಲ್ಲಿ 139 ಮಿ. ಮೀ. ಮಳೆಯಾಗಿದೆ. ಮಲೆನಾಡಿನಲ್ಲಿ 501 ಮಿ. ಮೀ. ವಾಡಿಕೆ ಮಳೆಯಲ್ಲಿ 351 ಮಿ.ಮೀ. ಮಳೆಯಾಗಿದೆ. ಕರಾವಳಿ ಭಾಗದಲ್ಲಿ 1,087 ಮಿ.ಮೀ. ವಾಡಿಕೆ ಮಳೆಯಲ್ಲಿ 995 ಮಿ.ಮೀ. ಮಳೆಯಾಗಿದೆ.
ಮಳೆ ಸಾಧ್ಯತೆ
ಕಳೆದ ಕೆಲವು ತಿಂಗಳ ಹಿಂದೆ ಅಪ್ಪಳಿಸಿದ “ಅಂಫಾನ್’ ಮತ್ತು “ನಿಸರ್ಗ’ ಚಂಡಮಾರುತ ನೇರವಾಗಿ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಮೇಲೆ ಪ್ರಭಾವ ಬೀರಿತ್ತು. ಇದೇ ಕಾರಣ ಆ ಪ್ರದೇಶದಲ್ಲಿ ಮಳೆ ಸೃಷ್ಟಿ ಮಾಡುವ ಮೋಡಗಳು ಹೆಚ್ಚಿದ್ದವು. ಸದ್ಯ ಮುಂಗಾರು ಚುರುಕುಗೊಂಡಿದೆ. ಕರಾವಳಿ, ಮಲೆನಾಡು ಸಹಿತ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ.
– ಸುನಿಲ್ ಗವಾಸ್ಕರ್, ಕೆಎಸ್ಎನ್ಡಿಎಂಸಿ ವಿಜ್ಞಾನಿ
ರಾಜ್ಯದ ಎಲ್ಲೆಲ್ಲಿ ಮಳೆ ಕೊರತೆ?
ರಾಜ್ಯದಲ್ಲಿ ಜೂ. 1ರಿಂದ ಜು. 6ರ ವರೆಗೆ ಸುರಿದ ಮಳೆಯ ಲೆಕ್ಕಾಚಾರದ ಪ್ರಕಾರ ದಾವಣಗೆರೆ (ಶೇ. 3), ಮೈಸೂರು (ಶೇ. 25), ಬೆಳಗಾವಿ (ಶೇ. 3), ಗದಗ (ಶೇ. 27), ಹಾವೇರಿ (ಶೇ. 18), ದಾರವಾಡ (ಶೇ. 17), ಶಿವಮೊಗ್ಗ (ಶೇ. 28), ಹಾಸನ (ಶೇ. 24), ಚಿಕ್ಕಮಗಳೂರು (ಶೇ. 35), ಕೊಡಗು (ಶೇ. 33), ದಕ್ಷಿಣ ಕನ್ನಡ (ಶೇ. 25), ಉಡುಪಿ (ಶೇ. 4) ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.