

Team Udayavani, Jul 19, 2024, 12:08 AM IST
ಮಾಹೆ: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸಾಧನೆಗೈದ ಪ್ರೊ| ಮಾರ್ತಾಂಡ ವರ್ಮ ಶಂಕರನ್ ವಲಿಯತ್ತಾನ್ ಅವರು ವೈದ್ಯ ಜಗತ್ತಿಗೆ ಸಲ್ಲಿಸಿದ್ದ ಕೊಡುಗೆ ಅಪಾರ ಎಂದು ಮಾಹೆ ಸಹ ಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ಹೇಳಿದರು.
ಮಾಹೆ ವತಿಯಿಂದ ಗುರುವಾರ ಜರಗಿದ ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಹಾನ್ಖ್ಯಾತಿಯ ವಿಜ್ಞಾನಿಯೂ ಆಗಿದ್ದ ಅವರು ಸರಳ ಜೀವನ ಶೈಲಿಯ ಮೂಲಕ ಎಲ್ಲರಿಗೂ ಮಾದರಿ, ಮಾರ್ಗದರ್ಶಕರಾಗಿ ಬದುಕಿದ್ದವರು. ಮಾಹೆಯ ಮೊದಲ ಕುಲಪತಿಯಾಗುವ ಮೂಲಕ ಸಂಸ್ಥೆಯ ಯಶಸ್ಸಿನ ತಳವನ್ನು ಭದ್ರವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ದೂರದೃಷ್ಟಿತ್ವ, ಅಭಿವೃದ್ಧಿಶೀಲ ಚಿಂತನೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿದ್ದ ಅವರ ವಿಶಾಲ ಚಿಂತನೆ ಮಾಹೆ ಬೆಳವಣಿಗೆಯಲ್ಲಿ ಅತ್ಯಮೂಲ್ಯ ಕೊಡುಗೆಗಳಾಗಿವೆ ಎಂದು ತಿಳಿಸಿ ಸಂತಾಪ ಸೂಚಿಸಿದರು.
ಕುಲಪತಿ ಲೆ| ಜ| ಡಾ| ಎಂ. ಡಿ. ವೆಂಕಟೇಶ್ ಮಾತನಾಡಿ, ಪ್ರೊ| ವಲಿಯತ್ತಾನ್ ಅವರು ವೈದ್ಯ ಜಗತ್ತಿಗೆ ನೀಡಿದ ಕೊಡುಗೆ ಅನನ್ಯವಾಗಿದೆ.
ಮೌಲ್ಯಯುತ ಜೀವನದ ಆದರ್ಶ ಅವರ ವೈದ್ಯ ವಿಜ್ಞಾನ ಪಾಂಡಿತ್ಯ ಈ ಸಮಾಜಕ್ಕೆ ದೊರೆತ ಭಾಗ್ಯ ಎಂದು ಸಂತಾಪ ನುಡಿಗಳನ್ನಾಡಿದರು.
ವಿಶ್ರಾಂತ ಕುಲಪತಿಗಳಾದ ಡಾ| ಪಿ. ಎಲ್. ಎನ್. ಜಿ. ರಾವ್, ಡಾ| ಕೆ. ರಾಮ ನಾರಾಯಣ್ ಸಂತಾಪ ಸೂಚಿಸಿ ಮಾತನಾಡಿದರು. ಕುಲಸಚಿವ ಡಾ| ಗಿರಿಧರ್ ಕಿಣಿ ನಿರೂಪಿಸಿದರು. ಸಹ ಕುಲಪತಿ ಡಾ| ಶರತ್ ಕುಮಾರ್ ರಾವ್, ಕೆಎಂಸಿ ಡೀನ್ ಡಾ| ಪದ್ಮರಾಜ್ ಹೆಗ್ಡೆ ಮೊದಲಾದವರು ಭಾಗವಹಿಸಿದ್ದರು.
ಪ್ರೊ| ವಲಿಯತ್ತಾನ್ ಅವರ ಪುತ್ರ ಡಾ| ಮನೀಷ್ ಮಾತನಾಡಿದರು. ಮಾಹೆ ವಿವಿಧ ವಿಭಾಗದ ಮುಖ್ಯಸ್ಥರು, ಸಿಬಂದಿ ಭಾಗವಹಿಸಿದ್ದರು. ಪ್ರೊ| ವಲಿಯತ್ತಾನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನ ಪ್ರಾರ್ಥನೆ ನೆರವೇರಿಸಲಾಯಿತು.
ಗುರುವಾರ ಬೆಳಗ್ಗೆ ಬೀಡಿನಗುಡ್ಡೆಯಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿ ಮಾಹೆ ಹಿರಿಯ ಅಧಿಕಾರಿಗಳು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಮಾಹೆ ಟ್ರಸ್ಟ್ ಅಧ್ಯಕ್ಷ ಡಾ| ರಂಜನ್ ಪೈ, ಟ್ರಸ್ಟಿ ವಸಂತಿ ಪೈ, ಮಣಿಪಾಲ್ ಮೀಡಿಯ ನೆಟವರ್ಕ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಯು. ಪೈ ಸಂತಾಪ ಸೂಚಿಸಿದ್ದಾರೆ.
Ad
You seem to have an Ad Blocker on.
To continue reading, please turn it off or whitelist Udayavani.