ಕುರ್ಕಾಲು ಹೊಳೆಗೆ ಧುಮುಕಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರ ತಂಡ
Team Udayavani, Aug 6, 2021, 6:37 PM IST
ಕಾಪು: ಕುರ್ಕಾಲು ಹೊಳೆಗೆ ಧುಮುಕಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಈಶ್ವರ್ ಮಲ್ಪೆ ಹಾಗೂ ಸತ್ಯದ ತುಳುವೆರ್ ತಂಡದ ಸದಸ್ಯರು ಪ್ರಾಣಭಯ ಮರೆತು ರಕ್ಷಿಸಿದ ಘಟನೆ ಶುಕ್ರವಾರ ಮುಂಜಾನೆ ಮಣಿಪುರದಲ್ಲಿ ನಡೆದಿದೆ.
ಉಡುಪಿ ಕುಕ್ಕಿಕಟ್ಟೆ ನಿವಾಸಿ ಬಾಲಕೃಷ್ಣ ಭಟ್ ರಕ್ಷಿಸಲ್ಪಟ್ಟ ವ್ಯಕ್ತಿಯಾಗಿದ್ದು, ಸುಮಾರು 5 ಗಂಟೆಗಳ ಕಾಲ ಅಪಾಯದ ಸುಳಿಗೆ ಸಿಲುಕಿದ್ದ ಅವರನ್ನು ರಕ್ಷಿಸಿ, ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿ ರಥಬೀದಿಯಲ್ಲಿ ಶಾರದಾ ವೆಜ್ ಹೊಟೇಲ್ ನ್ನು ನಡೆಸುತ್ತಿರುವ ಅವರು, ವ್ಯಾಪಾರದಲ್ಲಿನ ನಷ್ಟ ಮತ್ತು ಮಗಳ ಮದುವೆಯ ಚಿಂತೆಯಿಂದ ಕೊರಗಿ ಆತ್ಮಹತ್ಯೆ ಗೆ ಯತ್ನಿಸಿದ್ದರು ಎನ್ನಲಾಗಿದೆ.
ಗುರುವಾರ ಮಧ್ಯರಾತ್ರಿ 11 ಗಂಟೆಗೆ ಮಣಿಪುರ ಹೊಳೆ ಬಳಿಗೆ ಬಂದು, ಸ್ಕೂಟಿಯನ್ನು ಸೇತುವೆ ಪಕ್ಕದಲ್ಲಿ ಇರಿಸಿ, ಅವರು ಸೇತುವೆಯಿಂದ ಕೆಳಕ್ಕೆ ಧುಮುಕಿದ್ದರು. ಹೊಳೆಯಲ್ಲಿ ಕೊಚ್ಚಿ ಹೋಗುವ ಭೀತಿಯಲ್ಲಿದ್ದ ಅವರು, ನೀರಿನಲ್ಲಿ ಕೊಚ್ಚಿ ಹೋಗುವ ವೇಳೆ ಪವಾಢ ಸದೃಶ ರೀತಿಯಲ್ಲಿ ದಂಡೆಯನ್ನು ಹಿಡಿದು ನಿಂತುಕೊಂಡಿದ್ದರು.
ಇದನ್ನೂ ಓದಿ :ಆಸ್ತಿ ಗಳಿಕೆ ವಿಚಾರವಾಗಿ ಐಟಿ ಬದಲು ಇಡಿ ತನಿಖೆ ಆಶ್ಚರ್ಯ ಮೂಡಿಸಿದೆ: ಡಿಕೆಶಿ
ಶುಕ್ರವಾರ ಮುಂಜಾನೆ 4.30 ರ ವೇಳೆಗೆ ಮಣಿಪಾಲದಿಂದ ಕೆಲಸ ಮುಗಿಸಿ ಬರುತ್ತಿದ್ದ ಯುವಕನೋರ್ವ ರಸ್ತೆ ಬದಿಯಲ್ಲಿ ಬಿದ್ದಿದ್ದ ಸ್ಕೂಟಿಯನ್ನು ನೋಡಿ, ಸಂಶಯದ ಮೇರೆಗೆ ಸ್ಥಳಕ್ಕೆ ಹೋಗಿ ಪರಶೀಲಿಸಿದಾಗ ಹೊಳೆಯಲ್ಲಿ ವ್ಯಕ್ತಿಯೋರ್ವರು ಬೊಬ್ಬೆ ಹೊಡೆಯುವ ಸದ್ದು ಕೇಳಿದ್ದರು.
ತತ್ ಕ್ಷಣ ಅದನ್ನು ಗಮನಿಸಿದ ಯುವಕರು ಬಳಿಕ ಸತ್ಯದ ತುಳುವೆರ್ ತಂಡದ ಮುಖ್ಯಸ್ಥ ಪ್ರವೀಣ್ ಕುರ್ಕಾಲು ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅವರು, ಮಲ್ಪೆಯ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಮಾಹಿತಿ ನಡೆಸಿ, ಅವರ ಮೂಲಕ ಅಪಾಯಕ್ಕೆ ಸಿಲುಕಿದ್ದ ಬಾಲಕೃಷ್ಣ ಭಟ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಳಿ – ಮಳೆ ಸಹಿತವಾದ ಗಂಭೀರ ಪ್ರತಿಕೂಲದ ವಾತಾವರಣದ ನಡುವೆಯೂ ಮುಳುಗು ತಜ್ಞ ಈಶ್ವರ್ ಮಲ್ಪೆ, ಪ್ರವೀಣ್ ಕುರ್ಕಾಲ್ ನೇತೃತ್ವದಲ್ಲಿ ಸತ್ಯದ ತುಳುವೆರ್, ಹಾಗು ಮೇನ್ನಲ ಯುವಕರು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಬೇಕಿದ್ದ ವ್ಯಕ್ತಿಯನ್ನು ರಕ್ಷಿಸುವ ಮೂಲಕ ಶ್ಲಾಘನೆಗೆ ಕಾರಣರಾಗಿದ್ದಾರೆ.