6 ತಿಂಗಳಾದರೂ ರಸ್ತೆಗಿಲ್ಲ ಕಾಯಕಲ್ಪ: ಹದಗೆಟ್ಟ ರಸ್ತೆಯಲ್ಲಿ ಸಂಚಾರ ದುಸ್ತರ
Team Udayavani, Sep 25, 2020, 4:57 PM IST
ಬನಹಟ್ಟಿ: ರಬಕವಿ ವಿದ್ಯಾನಗರ ಬಡಾವಣೆ ಬಸವ ನಗರ 10 ಮತ್ತು 11ನೇ ಕ್ರಾಸ್ ಎರಡೂ ರಸ್ತೆಗಳು ಹಾಳಾಗಿ 6 ತಿಂಗಳಾದರೂ ನಗರಸಭೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಮಹಾದೇವ ಕೋಟ್ಯಾಳ ಆರೋಪಿಸಿದ್ದಾರೆ.
ಇದೇ ಬಡಾವಣೆಯಲ್ಲಿ ಶಿವದಾಸಿ ಮಯ್ಯ ಬೃಹತ್ ಸಮುದಾಯ ಭವನ, ಸಿದ್ದರಾಮೇಶ್ವರ ಕಾಲೊನಿಯಲ್ಲಿ ಅನೇಕ ಹೊಸ ಕಟ್ಟಡಗಳನ್ನು ಕಟ್ಟಿಕೊಂಡ ಇಲ್ಲಿನ ನಿವಾಸಿಗರಿಗೆ ಸರಿಯಾದ ರಸ್ತೆ ಇಲ್ಲದ ಕಾರಣ ಪಟ್ಟಣಕ್ಕೆ ಸಂಚರಿಸಲು ತೊಂದರೆಯಾಗುತ್ತಿದೆ.
ಈ ಕುರಿತು ಶಾಸಕ ಸಿದ್ದು ಸವದಿ, ನಗರಸಭೆ ಪೌರಾಯುಕ್ತರಿಗೆ ಹಲವು ಬಾರಿ ಗಮನಕ್ಕೆ ತರಲಾಗಿದೆ. ಸ್ಥಳಕ್ಕೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರೂ ರಸ್ತೆ ದುರಸ್ತಿ ನಡೆಯುತ್ತಿಲ್ಲ.
ಮಳೆ ನೀರು ಹರಿದು ಹೋಗದೆ ರಸ್ತೆ ಬದಿಯಲ್ಲಿ ಸಾರ್ವಜನಿಕರೆ ನಿರ್ಮಿಸಿದ ಚರಂಡಿಯಲ್ಲಿ ನೀರು ನಿಲ್ಲುತ್ತದೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರೋಗಗಳ ತಾಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.