ಕೈಯಲ್ಲಿ ಇರುವ ಮಾವಿನ ಹಣ್ಣು ಸವಿಯೋಣ!
Team Udayavani, May 12, 2021, 1:58 AM IST
ನಮ್ಮ ತಿಳಿವಳಿಕೆ, ಜ್ಞಾನ ಹೆಚ್ಚುತ್ತ ಹೋದ ಹಾಗೆ ಬದುಕಿನ ಗೊಂದಲಗಳು ಕಡಿಮೆ ಯಾಗಬೇಕು, ಜೀವನ ಸರಳವಾಗ ಬೇಕು ಎನ್ನುವುದು ಒಂದು ಆದರ್ಶ. ಆದರೆ ಸಾಮಾನ್ಯವಾಗಿ ಹಾಗೆ ಆಗುವು ದಿಲ್ಲ. ಜ್ಞಾನ, ಮಾಹಿತಿಗಳು ಹೆಚ್ಚು ಹೆಚ್ಚು ತಲೆಯೊಳಗೆ ತುಂಬಿದಂತೆ ನಾವು ಜಟಿಲವಾಗುತ್ತ ಹೋಗುತ್ತೇವೆ. ಆಯ್ಕೆ ಗಳು ನೂರಾರು ಎದುರಾಗುತ್ತವೆ – ಯಾವುದನ್ನು ಆರಿಸಿಕೊಳ್ಳಬೇಕು ಎಂದು ತಡಕಾಡುತ್ತೇವೆ. ನಮ್ಮ ಹಿರಿಯರು ಹೇಗೆ ಬದುಕಿದ್ದರು ಎನ್ನುವುದನ್ನು ನೆನಪು ಮಾಡಿಕೊಂಡರೆ ಇದು ಸ್ಪಷ್ಟವಾಗುತ್ತದೆ. ಅವರಿದ್ದ ಕಾಲಕ್ಕೆ ಆಯ್ಕೆ ಗಳು ಕೆಲವೇ ಇದ್ದವು – ಹಾಗಾಗಿ ಅವರ ಬದುಕು ಬಹಳ ಸರಳ
ವಾಗಿತ್ತು. ನಿಸರ್ಗಕ್ಕೆ ಹೆಚ್ಚು ಹತ್ತಿರ ವಾಗಿತ್ತು. ಆದರೆ ನಮ್ಮ ಪಾಡು ಇದಕ್ಕೆ ತದ್ವಿರುದ್ಧ.
ಇಲ್ಲೊಂದು ಕಥೆಯಿದೆ.
ಮನು ಎಂಬೊಬ್ಬ ಯುವಕನಿದ್ದ. ಸಣ್ಣ ವಯಸ್ಸಾದರೂ ದೇವರಲ್ಲಿ ಅಪಾರ ಭಕ್ತಿ ಹೊಂದಿದ್ದವನು. ಒಂದು ಬಾರಿ ತೀರ್ಥಕ್ಷೇತ್ರ ಯಾತ್ರೆ ಗೆಂದು ಹೊರಟ. ಬೃಂದಾವನದ ಬಳಿಗೆ ಬಂದು ಯಮುನೆಯನ್ನು ದಾಟಬೇಕು ಎನ್ನು ವಷ್ಟರಲ್ಲಿ ವಿದ್ವಾಂಸರ ಗುಂಪೊಂದು ಏರಿದ ಧ್ವನಿಯಲ್ಲಿ ವಿದ್ವತ್ ವಾದದಲ್ಲಿ ತೊಡಗಿರುವುದು ಕಾಣಿಸಿತು.
ಮನುವಿಗೆ ಕುತೂಹಲವಾಯಿತು. ಆತ ಅವರ ಬಳಿ ಸಾಗಿ ಕೇಳುತ್ತ ನಿಂತ.
ನಾವೆಲ್ಲ ಎಲ್ಲಿಂದ ಬಂದೆವು, ಜಗತ್ತಿನ ಹುಟ್ಟು ಯಾವಾಗ ಆಯಿತು, ಸಮಯ ಆರಂಭವಾದದ್ದು ಯಾವಾಗ ಎನ್ನು ವುದು ಅವರ ಚರ್ಚೆಯ ವಿಷಯ. ಪ್ರತಿ ಯೊಬ್ಬರೂ ತನ್ನ ವಾದವೇ ಸರಿ ಎಂದು ಪುರಾಣ, ವೇದ, ಉಪನಿಷತ್ತುಗಳನ್ನು ಉದ್ಧರಿಸಿ ವಾದದಲ್ಲಿ ತೊಡಗಿದ್ದರು.
ಅಷ್ಟರಲ್ಲಿ ಅವರು ಕುಳಿತಿದ್ದ ಮಾವಿನ ಮರದ ಮೇಲಿನಿಂದ ಒಂದು ರತ್ನಪಕ್ಷಿ ಕೂಗುತ್ತ ಹಾರಿಹೋಯಿತು. ಅದರ ಬೆನ್ನಿಗೇ ಒಂದು ಮಾವಿನ ಹಣ್ಣು ಧಡ್ಡನೆ ವಿದ್ವಾಂಸರ ಗುಂಪಿನ ನಡುವೆ ಬಿತ್ತು.
ವಿದ್ವಾಂಸರಿಗೆ ಆಶ್ಚರ್ಯವೋ ಆಶ್ಚರ್ಯ. ಅದರ ಬೆನ್ನಿಗೆ ವಾದಕ್ಕೆ ಇನ್ನೊಂದು ವಸ್ತು ಸಿಕ್ಕಿತು. ಓರ್ವ ವಿದ್ವಾಂಸರು, “ಎಂಥ ಕಾಕತಾಳೀಯ! ಹಕ್ಕಿ ಹಾರಿದ್ದು, ಹಣ್ಣು ಬಿದ್ದದ್ದು ಒಟ್ಟೊ ಟ್ಟಿಗೇ ಆಯಿತಲ್ಲ’ ಎಂದು ಹೇಳಿದರು. ಇನ್ನೊಬ್ಬರಿಗೆ ಅದು ಸಮ್ಮತ ಎನಿಸಲಿಲ್ಲ. ಅವರು, “ಎಲ್ಲ ಘಟನೆಗಳೂ ಇನ್ನೊಂದಕ್ಕೆ ಪ್ರತಿಕ್ರಿಯೆಯಾಗಿ ಘಟಿಸುತ್ತವೆ. ಹಕ್ಕಿ ಮಾವಿನ ಹಣ್ಣಿನ ಮೇಲೆ ಕುಳಿತು ಕೊಳ್ಳಲು ಪ್ರಯತ್ನಿಸಿದ್ದರಿಂದ ಅದು ಬಿತ್ತು’ ಎಂದರು. ಇನ್ನೊಬ್ಬರು, “ಇವೆಲ್ಲವೂ ಊಹೆ ಮಾತ್ರ. ಮಾವಿನ ಫಲ ಸಾಕಷ್ಟು ಮಾಗಿ ದ್ದರಿಂದ ನೆಲಕ್ಕೆ ಬಿತ್ತು’ ಎಂದರು.
ಪ್ರತಿಯೊಬ್ಬರೂ .
ತನ್ನ ವಾದವೇ ಸರಿ ಎಂದರು. ಇದನ್ನೆಲ್ಲ . ಕೇಳುತ್ತ ಆಶ್ಚರ್ಯ ಚಕಿತನಾದ ಮನು ಮೆಲ್ಲನೆ ಅವರ ಬಳಿಗೆ ಬಂದ. “ಅಯ್ನಾ ನಾನು ನಿಮ್ಮೆದುರು ಸಣ್ಣವನು. ಆದರೂ ನನ್ನದೊಂದು ಮಾತು ಕೇಳುವಿರಾ’ ಎಂದ.
ವಿದ್ವಾಂಸರು ಒಪ್ಪಿದರು. ಮನು, “ದೇವರ ಚಿತ್ತವಿಲ್ಲದೆ ತೃಣವೂ ಚಲಿಸುವು ದಿಲ್ಲ ಎನ್ನುವುದನ್ನು ಒಪ್ಪುವಿರಾ’ ಎಂದು ಕೇಳಿದ. ಹೌದೆಂದರು ವಿದ್ವಾಂಸರು. “ಈ ಮಾವಿನ ಹಣ್ಣು ಬಿದ್ದದ್ದು, ಹಕ್ಕಿ ಹಾರಿ ದ್ದಕ್ಕೂ ಅದೇ ಕಾರಣ. ಈಗ ಅದು ಯಾಕೆ ಬಿದ್ದದ್ದು ಎಂದು ಚರ್ಚೆ ಮಾಡಿ ಸಮಯ ವ್ಯಯಿಸದೆ ಈ ಹಣ್ಣನ್ನು ತಿನ್ನೋಣ’ ಎಂದ. ಬಳಿಕ ನದಿಗಿಳಿದು ಮಾವಿನ ಹಣ್ಣನ್ನು ತೊಳೆದ. ಬಳಿಕ ಅದನ್ನು ಕತ್ತರಿಸಿ ದೇವರನ್ನು ಸ್ಮರಿಸಿದ. ಅಅನಂತರ ದೇವರ ಪ್ರಸಾದ ಎಂದು ಎಲ್ಲರಿಗೂ ಹಣ್ಣಿನ ಹೋಳುಗಳನ್ನು ಹಂಚಿ ತಾನೂ ಸವಿದ.
ಕಳೆದುಹೋದುದು ನಮ್ಮ ಕೈಯ ಲ್ಲಿರಲಿಲ್ಲ. ಭವಿಷ್ಯ ಕೂಡ ನಾವು ಬಯಸಿದಂತೆ ಒದಗಿಬರುವುದಿಲ್ಲ. ಕೈಯಲ್ಲಿರುವ ವರ್ತಮಾನದ ಕಡೆಗೆ ನಾವು ಹೆಚ್ಚು ಗಮನ ಕೊಡಬೇಕು. ನಾವು ಕೂಡ ಆಗಿ ಹೋದುದರ ಬಗ್ಗೆ ಹೆಚ್ಚು ಚಿಂತಿಸದೆ ಈಗ ಕೈಯಲ್ಲಿರುವ ಮಾವಿನ ಹಣ್ಣನ್ನು ಸವಿಯೋಣ.ಎಲ್ಲವೂ ಜಗನ್ನಿಯಾಮಕನ ಚಿತ್ತ ಎಂದುಕೊಂಡು ಸರಳವಾಗಿ, ಧನಾತ್ಮಕವಾದ ಒಳ್ಳೆಯ ಬದುಕನ್ನು ಬದುಕೋಣ.
(ಸಾರ ಸಂಗ್ರಹ)