ಬಂಟಕಲ್ ತಾಂತ್ರಿಕ ಕಾಲೇಜು ತಾಂತ್ರಿಕ- ಸಾಂಸ್ಕೃತಿಕ ಸ್ಪರ್ಧೆ ಅನಂತೋತ್ಸವ 2023
Team Udayavani, Mar 18, 2023, 2:27 PM IST
ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ 2023ನೇ ಸಾಲಿನ ವಾರ್ಷಿಕ ಸಮಾರಂಭಗಳು ಮಾ.23 ರಿಂದ 26ರವರೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಹೇಳಿದರು.
ಅವರು ಮಾ. 18ರಂದು ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ವಿದ್ಯಾರ್ಥಿಗಳ ಆಶಯದಂತೆ ಮಾ.17 ನಿಧನರಾದ ವಿದ್ಯಾಸಂಸ್ಥೆಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕ, ಕಾರ್ಯಕ್ರಮಗಳ ರೂವಾರಿ ಅನಂತೇಶ್ ರಾವ್ ಅವರ ನೆನಪಿಗಾಗಿ ವರ್ಣೋತ್ಸವ 2023ರ ಬದಲಾಗಿ ಅನಂತೋತ್ಸವ 2023 ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮಾ.23ರಂದು ವಿದ್ಯಾರ್ಥಿಗಳಿಗಾಗಿ ತಾಂತ್ರಿಕ-ಸಾಂಸ್ಕೃತಿಕ ಸ್ಪರ್ಧೆ ಅನಂತೋತ್ಸವ 2023 ಆಯೋಜಿಸಲಾಗಿದ್ದು, ಉದ್ಘಾಟನೆ ಬೆಳಿಗ್ಗೆ 9.30ಕ್ಕೆ ನಡೆಯಲಿದೆ. ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ರಾಹುಲ್ ಕೋಟ್ಯಾನ್ ಮತ್ತು ನಿಖೀಲ್ ಆಚಾರ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ದ.ಕ.ಮತ್ತು ಉಡುಪಿ ಜಿಲ್ಲೆಯ ವಿವಿಧ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದು,ವಿವಿಧ ತಾಂತ್ರಿಕ ಸ್ಪರ್ಧೆಗಳ ಜತೆಗೆ ನೃತ್ಯ, ಗಾಯನ, ಫೋಟೋಗ್ರಫಿ, ಚಿತ್ರಕಲೆ, ಮುಖವರ್ಣ ಸ್ಪರ್ಧೆ ನಡೆಯಲಿದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಜಗದೀಶ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ವಿದ್ಯಾರ್ಥಿಗಳಿಂದ ಮನೋಂರಜನಾ ಕಾರ್ಯಕ್ರಮ ನಡೆಯಲಿದೆ.
ಮಾ. 24ರಂದು ಮಧ್ಯಾಹ್ನ 3.00ಗಂಟೆಗೆ ಕಾಲೇಜು ವಾರ್ಷಿಕೋತ್ಸವ ನಡೆಯಲಿದೆ. ಉಪಯೋಕಾಯುಕ್ತ ಕೆ.ಎನ್ ಫಣೀಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸೋಸಲೆ ವ್ಯಾಸರಾಜ ಮಠದ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮಾ.25ರಂದು ಆಟೋ ಎಕ್ಸ್ಪೋ ವಾಹನ ಪ್ರದರ್ಶನ ನಡೆಯಲಿದ್ದು, ಸಂಜೆ ಕಾಲೇಜಿನ ಯಕ್ಷಗಾನ ಸಂಘ ಯಕ್ಷಸಿಂಚನದ ವಿದ್ಯಾರ್ಥಿಗಳಿಂದ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ಮಹಿಷವಧೆ ಹಾಗೂ ಸಮಸಪ್ತಕರ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮಾ.26ರಂದು ಕಾಲೇಜು ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದೆ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಉಪಕುಲಪತಿ ಡಾ| ಎಸ್. ವಿದ್ಯಾಶಂಕರ್ ಮತ್ತು ಮಂಗಳೂರಿನ ಯುನಿಕೋರ್ಟ್ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಶೆಣೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ ಹಳೆ ವಿದ್ಯಾರ್ಥಿಗಳ ಸಮಾವೇಶ ನಡೆಯಲಿದೆ. ಸಂಜೆ 7 ರಿಂದ ದೇಶದ ಪ್ರತಿಷ್ಠಿತ ಮ್ಯೂಸಿಕಲ್ ಬ್ಯಾಂಡ್ ಸಂಸ್ಥೆ ಅಗಮ್ ತಂಡದವರಿಂದ ಅನಂತೇಶ್ ರಾವ್ ಸ್ಮರಣಾರ್ಥ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಲಿದೆ. ಕಾಲೇಜಿನಲ್ಲಿ ಶೈಕ್ಷಣಿಕ ವರ್ಷದಿಂದ ಎಂಬಿಎ ಕೋರ್ಸ್ನ್ನು ಪ್ರಾರಂಭಿಸುತ್ತಿದ್ದು, ವಿದ್ಯಾಸಂಸ್ಥೆಯ ಅಭಿವೃದ್ಧಿಯ ಮತ್ತೂಂದು ಮೈಲಿಗಲ್ಲು ಆಗಲಿದೆ.ಅದರ ಸಲುವಾಗಿ ಕಾಲೇಜಿನಲ್ಲಿ ಎ. 6-7ರಂದು ಆಡಳಿತ ಅಭಿವೃದ್ಧಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಕಾರ್ಯಕ್ರಮಗಳಿಗೆ ಶ್ರೀ ಸೋದೆ ವಾದಿರಾಜ ಮಠದ ಶ್ರೀಪಾದರು ಉಪಸ್ಥಿತರಿದ್ದು ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ಡಾ. ತಿರುಮಲೇಶ್ವರ ಭಟ್, ಉಪ ಪ್ರಾಂಶುಪಾಲ ಡಾ| ಗಣೇಶ್ ಐತಾಳ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಸಿ.ಕೆ. ಮಂಜುನಾಥ್, ಕಾರ್ಯಕ್ರಮ ಸಂಯೋಜಕರಾದ ಸಚಿನ್ ಪ್ರಭು ಮತ್ತು ರವಿಪ್ರಭಾ ಪತ್ರಿಕಾಗೋಷ್ಠಿಯಲ್ಲಿದ್ದರು.