ಸಾಮಾಜಿಕ ಮಾಧ್ಯಮ, ಒಟಿಟಿಗೆ ಕೇಂದ್ರದ ಮೂಗುದಾರ
Team Udayavani, Feb 26, 2021, 6:15 AM IST
ಫೇಸ್ಬುಕ್, ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಕಂಪೆನಿಗಳು ಮುಖ್ಯ ಅನುಪಾಲನ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ಕುಂದು ಕೊರತೆ ನಿವಾರಣ ಅಧಿಕಾರಿಗಳನ್ನು ಹೊಂದ ಬೇಕೆಂದು ಸರಕಾರ ಬಯಸಿದೆ. ಈ ಎಲ್ಲ ಅಧಿಕಾರಿಗಳು ಭಾರತದ ನಿವಾಸಿಗಳೇ ಆಗಿರಬೇಕು. ಕಾಯಿದೆಗಳು ಮತ್ತು ನಿಯಮಗಳ ಅನುಪಾಲನೆಯನ್ನು ಖಾತರಿಪಡಿಸುವ ಜವಾಬ್ದಾರಿ ಮುಖ್ಯ ಅನುಪಾಲನ ಅಧಿಕಾರಿಯದ್ದಾಗಿರುತ್ತದೆ.
ಸಾಮಾಜಿಕ ಮಾಧ್ಯಮ, ಒಟಿಟಿ ಪ್ಲಾಟ್ಫಾರ್ಮ್ಗಳು ಮತ್ತು ಡಿಜಿಟಲ್ ಸುದ್ದಿ ಮಾಧ್ಯಮಗಳಿಗಾಗಿ ಮಾರ್ಗ ಸೂಚಿಗಳನ್ನು ಕೇಂದ್ರ ಸರಕಾರ ಗುರುವಾರ ಬಿಡುಗಡೆ ಮಾಡಿದೆ. ಇದೀಗ ಜಾರಿಯಾಗಿರುವ “ಮಾಹಿತಿ ತಂತ್ರ ಜ್ಞಾನ ನಿಯಮಗಳು 2021′ ದೇಶದಲ್ಲಿ ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಒಳಗೊಂಡಿದೆ. ಈ ಮೂಲಕ ಸಾಮಾಜಿಕ ಜಾಲತಾಣಕ್ಕೆ ಶಾಪದ ರೀತಿಯಲ್ಲಿ ಅಂಟಿದ್ದ ಹಲವು ತೊಡಕುಗಳನ್ನು ದೂರವಾಗಿಸಿ ಇವುಗಳ ಸಭ್ಯ ಬಳಕೆಗೆ ನಾಂದಿ ಹಾಡಲು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಮುಂದಾಗಿದೆ. ಟೀಕೆ ಮತ್ತು ಭಿನ್ನಾಭಿಪ್ರಾಯಗಳು ಸಹಜವಾಗಿದ್ದು ಇವುಗಳನ್ನು ಅಭಿವ್ಯಕ್ತಗೊಳಿಸಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ. ಹಾಗೆಂದ ಮಾತ್ರಕ್ಕೆ ಇದು ಅತಿರೇಕಕ್ಕೆ ಹೋಗದಿರದಂತೆ ಕಡಿವಾಣ ಹಾಕಲು ಸರಕಾರ ಈ ನಿಯಮಾವಳಿಗಳನ್ನು ರೂಪಿಸಿದೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದ ದೂರು, ಅಹವಾಲುಗಳಿಗೆ ಸ್ಪಂದಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡಲು ನಿರ್ಧರಿ ಸಿರುವ ಸರಕಾರ ಅದಕ್ಕಾಗಿ ಹಲವಾರು ನಿಯಮಗಳನ್ನು ಜಾರಿಗೊಳಿಸಿದೆ.
ಯಾಕೆ ಈ ನಿಯಮ?
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅನ್ಯವ್ಯಕ್ತಿಗಳು ಮತ್ತು ಸಂಘಟನೆಗಳ ಹೆಸರಿನಲ್ಲಿ ಖಾತೆಗಳನ್ನು ತೆರೆದು ಅವುಗಳ ಮೂಲಕ ನಕಲಿ ಸುದ್ದಿಗಳನ್ನು ಹರಡಲಾಗುತ್ತಿದೆ. ಈ ಕುರಿತಂತೆ ದೂರುಗಳು ಹೆಚ್ಚಾಗುತ್ತಿದ್ದರೂ ಅವುಗಳ ವಿಲೇವಾರಿ ನಿರೀಕ್ಷಿತ ಮಟ್ಟದಲ್ಲಿ ಆಗುತಿರಲಿಲ್ಲ. ಹೀಗಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಒಟಿಟಿ ಮತ್ತು ಸಾಮಾಜಿಕ ಮಾಧ್ಯಮಗಳ ದುರುಪಯೋಗವನ್ನು ತಡೆಯಲು ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳ ಅತಿರೇಕದ ದುರುಪಯೋಗ, ನಕಲಿ ಸುದ್ದಿಗಳ ಹರಡುವಿಕೆಗೆ ಇದು ತಡೆ ಒಡ್ಡಲಿದೆ.
ಸಮರ್ಪಕ ಬಳಕೆಗೆದಾರರಿಗೆ ತೊಂದರೆ ಇಲ್ಲ?
ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ಕಲಾವಿದರ ಸೃಜನಶೀಲತೆಗೆ ಯಾವುದೇ ಕಡಿವಾಣ ಇಲ್ಲ. ಆದರೆ ಗೌರವ ಯುತ ವಾಗಿ ತಮ್ಮ ಸ್ವಾತಂತ್ರ್ಯವನ್ನು ಬಳಸಿ ಕೊಳ್ಳುವುದು ಎಲ್ಲರ ಜವಾಬ್ದಾರಿ. ಮಾಧ್ಯಮ ಯಾವುದೇ ಇದ್ದರೂ ಅದಕ್ಕೆ ಮಾರ್ಗದರ್ಶಿ ಸೂತ್ರಗಳು ಅತ್ಯಗತ್ಯ. ಇನ್ನು ಒಟಿಟಿ ವೇದಿಕೆಗಳನ್ನು ನ್ಯಾಯದಾನ ಪ್ರಕ್ರಿಯೆಯ ವ್ಯಾಪ್ತಿಯೊಳಗೆ ತರಲಾಗುವುದು ಎಂದು ಸರಕಾರ ತಿಳಿಸಿದೆ.
ಹೊಣೆ ಅಧಿಕಾರಿಯ ಹೆಗಲಿಗೆ?
ಫೇಸ್ಬುಕ್, ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಕಂಪೆನಿಗಳು ಮುಖ್ಯ ಅನುಪಾಲನ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ಕುಂದುಕೊರತೆ ನಿವಾರಣ ಅಧಿಕಾರಿಗಳನ್ನು ಹೊಂದಬೇಕೆಂದು ಸರಕಾರ ಬಯಸಿದೆ. ಈ ಎಲ್ಲ ಅಧಿಕಾರಿಗಳು ಭಾರತದ ನಿವಾಸಿಗಳೇ ಆಗಿರಬೇಕು. ಕಾಯಿದೆಗಳು ಮತ್ತು ನಿಯಮಗಳ ಅನುಪಾಲನೆಯನ್ನು ಖಾತರಿಪಡಿ ಸುವ ಜವಾಬ್ದಾರಿ ಮುಖ್ಯ ಅನು ಪಾಲನ ಅಧಿಕಾರಿಯದ್ದಾಗಿರುತ್ತದೆ. ಕಾನೂನು ಜಾರಿ ಅಧಿಕಾರಿಗಳೊಂದಿಗೆ ಸಮನ್ವಯಗೊಳಿಸುವ ಜವಾಬ್ದಾರಿಯನ್ನು ನೋಡಲ್ ವ್ಯಕ್ತಿಯು ನೋಡಿಕೊಳ್ಳುತ್ತಾನೆ. ಕುಂದುಕೊರತೆ ಅಧಿಕಾರಿ ದೂರು ಪರಿಹಾರ ಕಾರ್ಯವಿಧಾನದ ಅಡಿಯಲ್ಲಿ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಸರಕಾರ ಸೂಚಿಸಿದೆ. ಅಷ್ಟು ಮಾತ್ರವಲ್ಲದೆ ಈ ಎಲ್ಲ ಅಧಿಕಾರಿಗಳ ಹೆಸರನ್ನು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗೆ ತಿಳಿಸುವುದು ಕಡ್ಡಾಯ.
ಇವುಗಳಿಗೆ ಜಾಗ ಇಲ್ಲ
ವ್ಯಕ್ತಿಗಳ ಖಾಸಗಿ ಅಂಗಗಳ ಪ್ರದರ್ಶನ ಅಥವಾ ಅಂಥ ಫೋಟೋ, ವೀಡಿಯೋ ಪ್ರಸರಣಕ್ಕೆ ಇನ್ನು ಮುಂದೆ ಅವಕಾಶ ಇಲ್ಲ. ವ್ಯಕ್ತಿಗಳ ಪೂರ್ಣ ಅಥವಾ ಭಾಗಶಃ ನಗ್ನತೆ ಅಥವಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಚಿತ್ರಗಳು ಅಥವಾ ಮಾರ್ಫ್ ಡ್ ಇಮೇಜ್ಗಳು ಇತ್ಯಾದಿಗಳು ಕಂಡು ಬಂದರೆ 24 ಗಂಟೆಗಳ ಒಳಗೆ ಡಿಲೀಟ್ ಆಗಲಿವೆ. ಸಾಮಾಜಿಕ ಮಾಧ್ಯಮಗಳು ಬಳಕೆದಾರರ ಸ್ವಯಂಪ್ರೇರಿತ ಪರಿಶೀಲನೆಗೆ ಮುಕ್ತವಾಗಿರಬೇಕು. ನಕಲಿ ಸುದ್ದಿಯ ಮಾಹಿತಿಯ ಮೊದಲು ಶೇರ್ ಮಾಡಿದವರ ವಿವರವನ್ನು ನ್ಯಾಯಾಲಯ ಅಥವಾ ಸರಕಾರ ಕೇಳಿದರೆ ಸಾಮಾಜಿಕ ಮಾಧ್ಯಮಗಳು ನೀಡಲೇಬೇಕಾಗಿದೆ.
ತನಿಖೆಯ ಅವಧಿ ಎಷ್ಟು?
ಸಾಮಾಜಿಕ ಮಾಧ್ಯಮಗಳು ನೇಮಿಸಿದ ಕುಂದುಕೊರತೆ ನೋಡಲ್ ಅಧಿಕಾರಿಯು ದೂರು ದಾಖಲಾದ 24 ಗಂಟೆಗಳಲ್ಲಿ ಆಕ್ಷೇಪಾರ್ಹ ಅಂಶಗಳನ್ನು ನಿಷ್ಕ್ರಿಯಗೊಳಿಸ ಬೇಕು. ಈ ಅಧಿಕಾರಿ 24 ಗಂಟೆಗಳ ಒಳಗೆ ದೂರು ಸಲ್ಲಿಸ ಬೇಕು. ಅದನ್ನು 15 ದಿನಗಳಲ್ಲಿ ಪರಿಹರಿಸಬೇಕಾಗುತ್ತದೆ.
ಯಾವುದಕ್ಕೆಲ್ಲ ನಿಯಮ ಅನ್ವಯ?
ನ್ಯಾಯಾಲಯ ಅಥವಾ ಸರಕಾರಿ ಸಂಸ್ಥೆ ಆಕ್ಷೇಪಾರ್ಹ, ತುಂಟತನದ ಟ್ವೀಟ್ ಅಥವಾ ಸಂದೇಶದ ಜನಕ ಮತ್ತು ಶೇರ್ ಮಾಡಿದವರ ಬಗ್ಗೆ ಮಾಹಿತಿ ಕೇಳಿದರೆ, ಸಾಮಾಜಿಕ ಮಾಧ್ಯಮಗಳು ಈ ಮಾಹಿತಿಯನ್ನು ಒದಗಿಸಬೇಕಾ ಗುತ್ತದೆ. ಇದು ಸಾಮಾಜಿಕ ವ್ಯವಸ್ಥೆ, ಇತರ ದೇಶಗಳೊಂದಿಗಿನ ಸಂಬಂಧ, ಅತ್ಯಾಚಾರ, ಲೈಂಗಿಕ ಶೋಷಣೆಯ ಹೊರತಾಗಿ ಸಮಗ್ರತೆ, ಏಕತೆ ಮತ್ತು ಭಾರತದ ಭದ್ರತೆ ಮುಂತಾದ ವಿಷಯಗಳಿಗೆ ಮಾತ್ರ ಅನ್ವಯವಾಗುತ್ತದೆ.
ಕಾಲಕಾಲಕ್ಕೆ ವರದಿ ಸಲ್ಲಿಸಬೇಕು
ಈ ಸಂಸ್ಥೆಗಳು ಪ್ರತೀ ತಿಂಗಳು ಎಷ್ಟು ದೂರುಗಳನ್ನು ಸ್ವೀಕರಿಸಿದವು ಮತ್ತು ಅವುಗಳ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವರದಿಯನ್ನು ಸರಕಾರಕ್ಕೆ ಪ್ರತೀ ತಿಂಗಳು ಸಲ್ಲಿಸಬೇಕಾಗುತ್ತದೆ. ಮಾತ್ರವಲ್ಲದೇ ಅಂಥ ದೋಷಪೂರಿತ ಪೋಸ್ಟ್ಗಳ ಹಿಂದಿನ ಕಾರಣವನ್ನೂ ವಿವರಿಸಬೇಕು ಮತ್ತು ಬಳಕೆದಾರನ ಅಹವಾಲನ್ನೂ ಆಲಿಸಬೇಕಾಗುತ್ತದೆ.
ಹಾಗಾದರೆ ಒಟಿಟಿ ಸಂಸ್ಥೆಗಳಿಗೇನು?
ಒಟಿಟಿ ಮತ್ತು ಡಿಜಿಟಲ್ ಸುದ್ದಿ ಮಾಧ್ಯಮಗಳಿಗಾಗಿ 3-ಹಂತದ ಕಾರ್ಯ ವಿಧಾನವನ್ನು ಪ್ರಸ್ತಾವಿಸಲಾಗಿದೆ. ಈ ಮಾರ್ಗಸೂಚಿಯಲ್ಲಿರುವ ನಿಯಮಗಳು ಆನ್ಲೈನ್ ಸುದ್ದಿ ಮತ್ತು ಡಿಜಿಟಲ್ ಮಾಧ್ಯಮ ಘಟಕಗಳಿಂದ ಹಿಡಿದು ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ನಂಥ ಒಟಿಟಿ ಪ್ಲಾಟ್ಫಾರ್ಮ್ ಗಳವರೆಗೆ ಎಲ್ಲರಿಗೂ ಅನ್ವಯಿಸುತ್ತವೆ. ನೋಂದಾಯಿಸಲು ಯಾವುದೇ ಬಾಧ್ಯತೆಯಿಲ್ಲ, ಆದರೆ ಮಾಹಿತಿ ನೀಡಬೇಕು. ಒಟಿಟಿ ಮತ್ತು ಡಿಜಿಟಲ್ ನ್ಯೂಸ್ ಮಾಧ್ಯಮಗಳು ತಮ್ಮ ವಿವರ ಬಹಿರಂಗಪಡಿಸಬೇಕು.
ಕಾನೂನು ಕ್ರಮ
ನೋಡೆಲ್ ಸಂಪರ್ಕ ಅಧಿಕಾರಿ ಸರಕಾರಿ ಸಂಸ್ಥೆಗಳೊಂದಿಗೆ 24 ಗಂಟೆಗಳ ಸಂಪರ್ಕದಲ್ಲಿರಬೇಕು. ಈ ಎಲ್ಲ ಅಧಿಕಾರಿಗಳು ಭಾರತದದವರೇ ಆಗಿರಬೇಕು. ಏಕತೆ, ಭಾರತದ ಸಮಗ್ರತೆ, ಸಾಮಾಜಿಕ ವ್ಯವಸ್ಥೆ, ಅತ್ಯಾಚಾರ, ಲೈಂಗಿಕ ಶೋಷಣೆ, ಮಕ್ಕಳ ಮೇಲಿನ ದೌರ್ಜನ್ಯ ಮುಂತಾದ ವಿಷಯಗಳು ಪ್ರಸಾರವಾಗದಂತೆ ನೋಡಿ ಕೊಳ್ಳುವುದು ಮತ್ತು ಪ್ರಸಾರವಾದರೆ ಅದನ್ನು ತಡೆ ಹಿಡಿಯುವುದು ಇದರ ಕೆಲಸವಾಗಿದೆ. ಭಾರತದ ಸಾರ್ವಭೌಮತೆ, ಸಾಮಾ ಜಿಕ ವ್ಯವಸ್ಥೆ, ಇತರ ದೇಶಗಳೊಂದಿಗಿನ ಸಂಬಂಧಗಳಿಗೆ ಸಂಬಂಧಿಸಿದ ಕಾನೂನಿನಡಿಯಲ್ಲಿ ನ್ಯಾಯಾಲಯ ಅಥವಾ ಸರಕಾರಿ ಸಂಸ್ಥೆ ಯಾವುದೇ ಮಾಹಿತಿಯನ್ನು ಕಾನೂನುಬಾಹಿರ ಅಥವಾ ನಿಷೇಧಿಸಿದರೆ, ಇವುಗಳನ್ನು ತೆಗೆದುಹಾಕಬೇಕಾಗುತ್ತದೆ. ಸದ್ಯದ ಮಾರ್ಗಸೂಚಿ ತಾತ್ಕಾಲಿಕವಾಗಿದ್ದು ಮೂರು ತಿಂಗಳ ಬಳಿಕ ಸಮಗ್ರ ಕಾನೂನು ನಿಯಮಾವಳಿಗಳನ್ನು ರೂಪಿಸಲಾಗುವುದು.
ದೂರು ಆಲಿಸಲು ಪ್ರತ್ಯೇಕ ಮಂಡಳಿ
ಒಟಿಟಿ ಮತ್ತು ಡಿಜಿಟಲ್ ಸುದ್ದಿಗಳಿಗೆ ಸಂಬಂಧಿಸಿದ ದೂರುಗಳನ್ನು ನಿರ್ವಹಿಸಲು ವ್ಯವಸ್ಥೆಯನ್ನು ಜಾರಿಗೆ ತರಬೇಕು. ಇದು ಸ್ವಯಂ ನಿಯಂತ್ರಣ ಮಂಡಳಿಯಾಗಿರಬೇಕು. ಇದರ ನೇತೃತ್ವವನ್ನು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರು ಅಥವಾ ಅದೇ ಸ್ಥಾನಮಾನದ ಯಾರಾದರೂ ವಹಿಸಲಿದ್ದಾರೆ. ಒಂದು ಪ್ರಕರಣದಲ್ಲಿ ತತ್ಕ್ಷಣ ಕ್ರಮ ಆವಶ್ಯಕವಾಗಿದ್ದರೆ ಸರಕಾರಿ ಮಟ್ಟದಲ್ಲಿ ವ್ಯವಸ್ಥೆಯನ್ನು ರೂಪಿಸಲಾಗುವುದು. ಅದು ಅಂಥ ಪ್ರಕರಣಗಳನ್ನು ನಿಭಾಯಿಸಲಿದೆ.
ಕ್ಯಾಪಿಟಲ್ ಹಿಲ್ಸ್ ಮತ್ತು ಕೆಂಪು ಕೋಟೆ ಗಲಭೆ ಲಿಂಕ್?
ಭಾರತದ ಏಕತೆ ಮತ್ತು ಸಮಗ್ರತೆಯನ್ನು ಗಡಿಯ ಒಳಗೆ ಮತ್ತು ಹೊರಗೆ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಸಾಮಾಜಿಕ ಮಾಧ್ಯಮಗಳು ಇಬ್ಬಗೆ ನೀತಿಯನ್ನು ಅನುಸರಿಸಬಾರದು ಎಂದು ಸಚಿವ ಪ್ರಕಾಶ್ ಜಾವ್ಡೇಕರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅಮೆರಿಕದ ಕ್ಯಾಪಿಟಲ್ ಹಿಲ್ಸ್ ಮೇಲೆ ದಾಳಿ ನಡೆದರೆ, ಸಾಮಾಜಿಕ ಮಾಧ್ಯಮಗಳು ಪೊಲೀಸ್ ಕ್ರಮವನ್ನು ಬೆಂಬಲಿಸುತ್ತವೆ. ಭಾರತದಲ್ಲಿ ಕೆಂಪುಕೋಟೆಯ ಮೇಲೆ ಹಿಂಸಾತ್ಮಕ ದಾಳಿ ನಡೆದರೆ ಇವುಗಳ ಧೋರಣೆ ಭಿನ್ನವಾಗಿರುತ್ತದೆ. ಇಂಥ ಇಬ್ಬಂದಿತನ ಸ್ವೀಕಾರಾರ್ಹವಲ್ಲ ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!