ಅವಕಾಶ ತೆರೆಯಲಿದೆ ಲಂಕಾ ಪ್ರವಾಸ: ನಾಯಕ ಶಿಖರ್ ಧವನ್ ಅಭಿಪ್ರಾಯ
Team Udayavani, Jun 28, 2021, 7:43 AM IST
ಮುಂಬಯಿ : ಶ್ರೀಲಂಕಾ ಪ್ರವಾಸ ನಮ್ಮೆಲ್ಲರ ಪಾಲಿಗೆ ಅತ್ಯುತ್ತಮ ಅವಕಾಶವೊಂದನ್ನು ತೆರೆದಿಡಲಿದೆ ಎಂಬುದಾಗಿ ನಾಯಕ ಶಿಖರ್ ಧವನ್ ಅಭಿಪ್ರಾಯಪಟ್ಟಿದ್ದಾರೆ.
“ಇದೊಂದು ಅತ್ಯುತ್ತಮ ತಂಡ. ಸಕಾರಾತ್ಮಕ ಮನೋಭಾವ, ಆತ್ಮವಿಶ್ವಾಸವೆಲ್ಲ ಈ ತಂಡದಲ್ಲಿ ತುಂಬಿಕೊಂಡಿದೆ. ಇದು ಉತ್ತಮ ಪ್ರದರ್ಶನಕ್ಕೆ ಕಾರಣವಾಗಲಿದೆ ಎಂಬ ವಿಶ್ವಾಸ ನಮ್ಮದು’ ಎಂಬುದಾಗಿ ಧವನ್ ಅಭಿಪ್ರಾಯಪಟ್ಟರು. ತಂಡ ಶ್ರೀಲಂಕಾಕ್ಕೆ ತೆರಳುವ ಮುನ್ನ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತಾಡುತ್ತಿದ್ದರು.
“ಇದೊಂದು ಹೊಸ ಸವಾಲು. ನಮ್ಮೆಲ್ಲರ ಪಾಲಿಗೆ ಲಭಿಸಿದ ಅತ್ಯುತ್ತಮ ಅವಕಾಶ. ಎಲ್ಲರೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಕಾಯುತ್ತಿದ್ದಾರೆ. ಕಳೆದ 13-14 ದಿನಗಳನ್ನು ಕ್ವಾರಂಟೈನ್ನಲ್ಲೇ ಕಳೆದೆವು. ಎಲ್ಲರೂ ಅಂಗಳಕ್ಕಿಳಿದು ಅಭ್ಯಾಸ ನಡೆಸಲು ಕಾತರರಾಗಿದ್ದಾರೆ. ಸಿದ್ಧತೆಗೆ 10-12 ದಿನಗಳಿವೆ’ ಎಂದು ಧವನ್ ಹೇಳಿದರು.
ಕಲಿಕೆಯ ಅನುಭವ: ದ್ರಾವಿಡ್
“ಇದೊಂದು ಕಿರು ಪ್ರವಾಸ. 3 ಪ್ಲಸ್ 3 ಪಂದ್ಯಗಳಿವೆ. ಅವಕಾಶಕ್ಕಾಗಿ ಬಹಳಷ್ಟು ಮಂದಿ ಯುವ ಆಟಗಾರರು ಕಾದು ಕುಳಿತಿದ್ದಾರೆ. ಆದರೆ ಇವರೆಲ್ಲರಿಗೂ ಆಡುವ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಬಹುಶಃ ಅವಾಸ್ತವಿಕವೆನಿಸಲಿದೆ. ಅಕಸ್ಮಾತ್ ಆಡುವ ಚಾನ್ಸ್ ಸಿಗದೇ ಹೋದರೂ ಈ ಸರಣಿಯಿಂದ ಕಲಿಕೆಯ ಸಾಕಷ್ಟು ಅನುಭವವಂತೂ ಸಿಗಲಿದೆ’ ಎಂಬುದು ಕೋಚ್ ರಾಹುಲ್ ದ್ರಾವಿಡ್ ಅವರ ಹೇಳಿಕೆ. ಆಯ್ಕೆಗಾರರೂ ಜತೆಯಲ್ಲಿರುವುದರಿಂದ ಆಡುವ ಬಳಗದ ಆಯ್ಕೆ ಸುಗಮಗೊಳ್ಳಲಿದೆ ಎಂದು ಅವರು ಆಶಿಸಿದರು.
ಇದನ್ನೂ ಓದಿ :ಪ್ಯಾರಿಸ್ ಆರ್ಚರಿ ವರ್ಲ್ಡ್ ಕಪ್ : ಮಿನುಗಿದ ದೀಪಿಕಾ; ಭಾರತಕ್ಕೆ ಹ್ಯಾಟ್ರಿಕ್ ಬಂಗಾರ
ಟಿ20 ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಭಾರತಕ್ಕೆ ಲಭಿಸಲಿರುವ ಕೊನೆಯ ಅವಕಾಶ ಇದಾಗಿದೆ. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಟಿ20 ತಂಡದ ರೇಸ್ನಲ್ಲಿರುವ ಪ್ರಮುಖರು.
“ತಂಡದಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಎದುರು ನೋಡುತ್ತಿರುವ ಸಾಕಷ್ಟು ಮಂದಿ ಆಟಗಾರರಿದ್ದಾರೆ. ಆದರೆ ಖಾಲಿ ಉಳಿದಿರುವುದು ಒಂದೆರಡು ಸ್ಥಾನ ಮಾತ್ರ. ಹೀಗಾಗಿ ಸರಣಿ ಗೆಲುವೇ ಮೊದಲ ಹಾಗೂ ಎಲ್ಲರ ಗುರಿ’ ಎಂಬುದಾಗಿ ದ್ರಾವಿಡ್ ಹೇಳಿದರು.
ಪ್ರತಿಭಾನ್ವಿತ ಆಟಗಾರರಾದ ಪಡಿಕ್ಕಲ್, ಸೂರ್ಯಕುಮಾರ್ ಯಾದವ್ ಅವರಿಗೆ, ಹಾಗೆಯೇ ಪುನರಾಗಮನದ ನಿರೀಕ್ಷೆಯಲ್ಲಿರುವ ಪೃಥ್ವಿ ಶಾ ಮೊದಲಾದವರಿಗೆ ಇದು ಅತ್ಯಂತ ಮಹತ್ವದ ಸರಣಿ ಎಂಬುದು ದ್ರಾವಿಡ್ ಅಭಿಪ್ರಾಯ.