Karkala: ಅಪ್ಪನ ಬೆವರ ಹನಿಗೆ ಮಗಳ ಸಾಧನೆ ಫಲ; ಕೂಲಿ ಕಾರ್ಮಿಕನ ಮಗಳಿಗೆ 622 ಅಂಕ
Team Udayavani, May 9, 2023, 10:08 AM IST
ಕಾರ್ಕಳ: ತಂದೆ-ತಾಯಿ ದೂರದ ಬಾಗಲಕೋಟೆಯಲ್ಲಿದ್ದಾರೆ. ತಂದೆ ಹೊಟೇಲ್ ಒಂದರಲ್ಲಿ ಕೂಲಿ ಕಾರ್ಮಿಕರಾಗಿದ್ದರೆ, ತಾಯಿ ಗೃಹಿಣಿ. ಇವರ ಪುತ್ರಿ ಧನ್ಯಾ ನಾಯ್ಕ ಈಗ ಎಸೆಸೆಲ್ಸಿಯಲ್ಲಿ 622 ಅಂಕ ಪಡೆದು ಸಾಧನೆ ಮಾಡಿದ್ದಾರೆ.
“ಅಪ್ಪ ಅಲ್ಲಿ ಕೂಲಿ ಮಾಡಿ ಓದಿಸಲು ಕಷ್ಟಪಟ್ಟರು. ಇಲ್ಲಿ ಚಿಕ್ಕಮ್ಮ ಅಕ್ಕರೆಯಿಂದ ಸಾಕಿದರು. ಅವರ ಬೆವರ ಹನಿಗೆ ಕಷ್ಟಪಟ್ಟು ಓದಿಸಿದ್ದರಿಂದ, ಚಿಕ್ಕಮ್ಮ ನನ್ನ ಚೆನ್ನಾಗಿ ನೋಡಿಕೊಂಡಿದ್ದರಿಂದ ಅವರ ಬೆವರ ಹನಿಗೆ ಪ್ರತಿಫಲವಾಗಿ ಈ ಅಂಕ ಪಡೆಯಲು ಸಾಧ್ಯವಾಯಿತು’ ಎಂದು ಭಾವುಕರಾದರು ಧನ್ಯಾ. ಇವರು ಕುಕ್ಕುಜೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ.
ಮೂಲತಃ ಹೆಬ್ರಿ ತಾಲೂಕಿನ ಮುಂಡೊಳ್ಳಿಯ ನರಸಿಂಹ ನಾಯ್ಕ ಮತ್ತು ಸುಲೋಚನಾ ದಂಪತಿ ಮರಾಠಿ (ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಸೇರಿದವರು. 18 ವರ್ಷದ ಹಿಂದೆ ಕೂಲಿ ಅರಸುತ್ತ ಹೊರ ಊರಿಗೆ ಹೋದವರು ಪ್ರಸ್ತುತ ಬಾಗಲಕೋಟೆಯಲ್ಲಿ ನೆಲೆಸಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದು ಹಿರಿಯವಳೇ ಧನ್ಯಾ. ಪ್ರಾಥಮಿಕ ಶಿಕ್ಷಣವನ್ನು ಬಾಗಲಕೋಟೆಯಲ್ಲಿ ಪಡೆದು ಕಾರ್ಕಳದಲ್ಲಿ ಉತ್ತಮ ಶಿಕ್ಷಣಕ್ಕೆಂದು ಬಂದು ಕುಕ್ಕುಜೆ ಶಾಲೆ ಸೇರಿದರು.
ತಮ್ಮ ಚಿಕ್ಕಮ್ಮನ ಮನೆ ಹರಿಖಂಡಿಗೆಯಲ್ಲಿದ್ದು ಕಲಿಯತೊಡಗಿದ ಧನ್ಯಾ, ತಂದೆ-ತಾಯಿಯ ಕಷ್ಟ ಆರಿತು ಛಲದಿಂದ ಶ್ರಮಪಟ್ಟು ಅಧ್ಯಯನ ಮಾಡಿದ ಫಲವೀಗ ಫಲಿತಾಂಶದಲ್ಲಿ ಗೋಚರಿಸಿದೆ. ಮಗಳ ನೋಡಲೆಂದು ಬಂದಿದ್ದ ತಂದೆ-ತಾಯಿ ಫಲಿತಾಂಶ ಪ್ರಕಟಗೊಂಡ ಅರ್ಧ ತಾಸಿನ ಹಿಂದೆಯಷ್ಟೆ ವಾಪಸ್ ಬಾಗಲಕೋಟೆಯತ್ತ ಹೊರಟರು. ಪ್ರಯಾಣದಲ್ಲಿ ಇರುವಾಗಲೇ ಧನ್ಯಾ ಕರೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಎಳವೆಯಲ್ಲಿಯೇ ಬಡತನದಿಂದ ಬೆಳೆದವಳು ನಾನು. ತಂದೆ ಹೊಟೇಲಿನಲ್ಲಿ ಅಡುಗೆ ಕೆಲಸ ಮಾಡುತ್ತ ಬೆಂಕಿಯಲ್ಲಿ ಬೇಯುವುದನ್ನು ಕಂಡಾಗ ನಾನೂ ಏನಾದರೂ ಸಾಧಿಸಬೇಕು. ಚಿಕ್ಕಮ್ಮ ಸುಜಾತಾ ಮನೆಮಗಳಂತೆ ನೋಡಿಕೊಳ್ಳುತ್ತಿದ್ದಾರೆ. ಅವರ ಆರೈಕೆ ಮತ್ತು ಆಶೀರ್ವಾದ ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ ಎನ್ನಲು ಧನ್ಯಾ ಮರೆಯುವುದಿಲ್ಲ.
ಪಠ್ಯೇತರ ಚಟುವಟಿಕೆಯಲ್ಲಿಯೂ ಮುಂದಿರುವ ಧನ್ಯಾ, ರಂಗೋಲಿ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಮೆಹಂದಿ ಹಾಕುವ ಕಲೆಯೂ ಇವರಿಗೆ ಕರಗತ.
ಎಂಬಿಬಿಎಸ್ ಕಲಿತು ಡಾಕ್ಟರ್ ಆಗುವೆ
ಪಿಯುಸಿಯಲ್ಲಿ ಒಳ್ಳೆಯ ಅಂಕ ಪಡೆದು ನೀಟ್ ಪರೀಕ್ಷೆ ಪಡೆದು ಎಂಬಿಬಿಎಸ್ ಕಲಿತು ಡಾಕ್ಟರ್ ಆಗುವೆ. ಬಡವರ ಸೇವೆ ಮಾಡುವೆ. ಅಪ್ಪ ಅಮ್ಮ ನನಗಾಗಿ ಹರಿಸಿದ ಬೆವರಿಗೆ ಪ್ರತಿಫಲವನ್ನು ವೈದ್ಯಳಾಗುವ ಮೂಲಕ ಈಡೇರಿಸಿ ಕೊಡುವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!