ರಾಜ್ಯ ಸರಕಾರದ ಭ್ರಷ್ಟಾಚಾರ ಭಾಷಣದಲ್ಲಿ ಸಾಬೀತು: ಸಿದ್ದರಾಮಯ್ಯ
Team Udayavani, Feb 11, 2023, 6:40 AM IST
ಬೆಂಗಳೂರು: ರಾಜ್ಯ ಬಿಜೆಪಿ ಸರಕಾರ ಯಾವ ಕೆಲಸವನ್ನೂ ಮಾಡದೆ ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಜನರ ಆರೋಪ ರಾಜ್ಯಪಾಲರ ಭಾಷಣದಿಂದ ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಪಾಲರ ಭಾಷಣ ಕುರಿತು ಹೇಳಿಕೆ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಸರಕಾರವು ರಾಜ್ಯಪಾಲರ ಬಾಯಲ್ಲಿ ಒಂದು ವರ್ಷದ ಸಾಧನೆಗಳ ಬಗ್ಗೆ ಮಾಡಿಸಿರುವ ಭಾಷಣ ಸುಳ್ಳಿನ ಕಂತೆ ಎಂದು ದೂರಿದ್ದಾರೆ.
ರಾಜ್ಯವು ಇಂದು ಮುಖ್ಯವಾಗಿ ನಿರುದ್ಯೋಗ, ಬೆಲೆಯೇರಿಕೆ, ಭ್ರಷ್ಟಾಚಾರ, ಸೌಹಾರ್ದದ ಸಮಸ್ಯೆ, ಅಶಾಂತಿಯ ವಾತಾವರಣ, ಕೃಷಿ ಬಿಕ್ಕಟ್ಟು, ನೇಕಾರರು – ಮೀನುಗಾರರ ಸಮಸ್ಯೆಗಳು ಹಾಗೂ ಸಣ್ಣ ಕೈಗಾರಿಕೆಗಳಿಗೆ ಒತ್ತು ಕೊಡದೆ ಇರುವುದು ಮುಂತಾದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ರಾಜ್ಯಪಾಲರ 82 ಪ್ಯಾರಾಗಳ ಭಾಷಣದಲ್ಲಿ ಈ ಸಮಸ್ಯೆಗಳ ಕುರಿತು ಒಂದೇ ಒಂದು ಮಾತನ್ನೂ ಪ್ರಸ್ತಾವಿಸಿಲ್ಲ ಎಂದು ಟೀಕಿಸಿದ್ದಾರೆ.
ಅಡಿಕೆ, ತೆಂಗು, ಮೆಣಸು ಬೆಳೆಯುವ ಕರಾವಳಿ ಮತ್ತು ಮಲೆನಾಡಿನ ರೈತರು ಹಾಗೂ ರಾಗಿ ಭತ್ತ, ಜೋಳ, ತೊಗರಿ ಮುಂತಾದವುಗಳನ್ನು ಬೆಳೆಯುವ ಉತ್ತರ ಕರ್ನಾಟಕ ಮತ್ತು ಬಯಲು ಸೀಮೆಯ ರೈತರಿಬ್ಬರೂ ಸಂಕಷ್ಟದಲ್ಲಿದ್ದಾರೆ. ಅದರ ಬಗ್ಗೆಯೂ ಪ್ರಸ್ತಾವವಿಲ್ಲ. ಒಟ್ಟಾರೆ ರಾಜ್ಯಪಾಲರ ಭಾಷಣ ತೌಡು ಕುಟ್ಟಿದಂತೆ ಕಾಣಿಸುತ್ತಿದೆ. ಭತ್ತ ಕುಟ್ಟಿದರೆ ಅಕ್ಕಿ ಬರುತ್ತದೆ. ತೌಡು ಕುಟ್ಟಿದರೆ ಬರಿ ಉಬ್ಬಲು ಬರುತ್ತದೆ ಎಂದು ಟೀಕಿಸಿದ್ದಾರೆ.
ರಾಜ್ಯಪಾಲರಿಂದ ಸುಳ್ಳು ಹೇಳಿಸಲಾಗಿದೆ
ಬೆಂಗಳೂರು: ಕಾಂಗ್ರೆಸ್ ಮಾಡಿದ ಅಡುಗೆಯನ್ನು ಜನರಿಗೆ ಬಡಿಸೋಕೆ ಹೋಗಿರುವುದೇ ಬಿಜೆಪಿ ಸಾಧನೆಯಾಗಿದ್ದು, ರಾಜ್ಯಪಾಲರ ಭಾಷಣದಲ್ಲಿ ಹಸಿ ಸುಳ್ಳು ಹೇಳಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ನಾನು 30 ವರ್ಷಗಳಿಂದ ಅನೇಕ ರಾಜ್ಯಪಾಲರ ಭಾಷಣ ಕೇಳಿದ್ದೇನೆ. ಇಂತಹ ಸುಳ್ಳಿನ ಭಾಷಣ ಕೇಳಿರಲಿಲ್ಲ ಎಂದು ಹೇಳಿದ್ದಾರೆ.
ವಿಧಾನಸೌಧದ ಎಲ್ಲ ಗೋಡೆಗಳೂ, ಎಲ್ಲ ಕಚೇರಿಗಳೂ ಲಂಚ ಲಂಚ ಎನ್ನುತ್ತಿವೆ. ಹೀಗಿರುವಾಗ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ರಾಜ್ಯಪಾಲರು ಮಾತನಾಡಬೇಕಿತ್ತಲ್ಲವೇ? ರಾಜ್ಯದಲ್ಲಿ ನಡೆದಿರುವ ನೇಮಕಾತಿ ಹಗರಣ, ಭ್ರಷ್ಟಾಚಾರ, ಯಾವ ಯಾವ ಅಧಿಕಾರಿಗಳು ಜೈಲಿಗೆ ಹೋಗಿದ್ದಾರೆ, ಯಾಕೆ ಹೋದರು ಎಂಬುದನ್ನೂ ಪ್ರಸ್ತಾವಿಸಬೇಕಲ್ಲವೇ ಎಂದು ಪ್ರಶ್ನಿಸಿದರು.
ಉದ್ಯೋಗ ಸೃಷ್ಟಿ ಎಂದು ಹೇಳಿದ್ದಾರೆ. ಆದರೆ, ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ಅಂಕಿ ಅಂಶ ಕೊಟ್ಟಿಲ್ಲ. ಒಂದು ಲಕ್ಷ ಉದ್ಯೋಗ ಎಲ್ಲಿ ಕೊಟ್ಟಿದ್ದಾರೆ ಅಂತ ಹೇಳಬೇಕು. ಯಾವುದೇ ಉದ್ಯೋಗ ಸೃಷ್ಟಿಯಾಗಿಲ್ಲ ಆದರೂ ಸುಳ್ಳು ಹೇಳಲಾಗಿದೆ ಎಂದು ಹೇಳಿದರು.
ಬಿಜೆಪಿ ಸರಕಾರಕ್ಕೆ ಸುಳ್ಳೇ ಮನೆ ದೇವರು ಎಂದು ರಾಜ್ಯಪಾಲರ ಭಾಷಣದ ಮೂಲಕ ಸರಕಾರ ಸ್ಪಷ್ಟಪಡಿಸಿದೆ. ರಾಜ್ಯದ ಅಭಿವೃದ್ಧಿಗಾಗಿ ಕಿವಿ ಹಿಂಡಬೇಕಾದ ರಾಜ್ಯಪಾಲರು ತುತ್ತೂರಿ ಓದಿದಂತಿದೆ. ರಾಜ್ಯದ ಅಭಿವೃದ್ಧಿಗೆ ಸರಕಾರದ ಬಳಿ ಯಾವ ಮುನ್ನೋಟವೂ ಇಲ್ಲ, ದೂರದೃಷ್ಟಿಯೂ ಇಲ್ಲ ಎಂಬುದನ್ನು ರಾಜ್ಯಪಾಲರೇ ಒಪ್ಪಿಕೊಂಡಂತಾಗಿದೆ.
– ಬಿ.ಕೆ.ಹರಿಪ್ರಸಾದ್, ಪರಿಷತ್ ವಿಪಕ್ಷ ನಾಯಕ