ಸಬ್ರಿಜಿಸ್ಟ್ರಾರ್ ಕಚೇರಿಗಳು ಇನ್ನು ಸ್ಮಾರ್ಟ್
Team Udayavani, Mar 29, 2023, 5:40 PM IST
ಉಡುಪಿ: ಮಂಡ್ಯ, ಚಿಂಚೋಳಿ, ಬೆಳಗಾವಿ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾತ್ರ ಪ್ರಾಯೋಗಿಕವಾಗಿ ಅನುಷ್ಠಾನಗೊಂಡ ಕಾವೇರಿ ತಂತ್ರಾಂಶ-2 ಜೂನ್ನಿಂದ ರಾಜ್ಯಾದ್ಯಂತ ಆರಂಭಗೊಳ್ಳಲಿದೆ. ಉಡುಪಿ ಜಿಲ್ಲೆಯಲ್ಲಿಯೂ ಈ ಬಗ್ಗೆ ಸಬ್ರಿಜಿಸ್ಟ್ರಾರ್ ಕಚೇರಿಯ ಸಿಬಂದಿಗೆ ತರಬೇತಿ ನೀಡಲಾಗುತ್ತಿದೆ. ಈ ತಂತ್ರಾಂಶದ ಮೂಲಕ ಯಾರು ಕೂಡ ನೋಂದಣಿ ಮಾಡಿಸಿ ಮುಂಗಡವಾಗಿ ಕಾದಿರಿಸಬಹುದಾಗಿದೆ.
ಮೊದಲಿಗೆ ನಮ್ಮ ದಾಖಲೆಗಳನ್ನು ಆ ಸಾಫ್ಟ್ವೇರ್ಗೆ ಅಪ್ಲೋಡ್ ಮಾಡಿ ಬಳಿಕ ನಮ್ಮ ವ್ಯಾಪ್ತಿಯ ಸಬ್ರಿಜಿಸ್ಟ್ರಾರ್ಗೆ ಕಳುಹಿಸಬೇಕು. ಅವರು ಪರಿಶೀಲನೆ ನಡೆಸಿದ ಬಳಿಕ ಬದಲಾವಣೆಗಳಿದ್ದರೆ ಅಥವಾ ಒಪ್ಪಿಗೆಯಾದರೆ ಸೂಚಿಸುತ್ತಾರೆ. ಅನಂತರ ನಮಗೆ ಬೇಕಿರುವ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಿ ಭೇಟಿಯಾಗಬಹುದು. ಏಕಕಾಲದಲ್ಲಿ ಹಲವು ಮಂದಿ ಒಂದೇ ಸಮಯ ನಿಗದಿಪಡಿಸಿದರೆ ಅದರಲ್ಲಿ ಗೊತ್ತುಪಡಿಸಿದ ಸಮಯಕ್ಕೆ ನಾವು ಹೋಗಬೇಕಾಗುತ್ತದೆ. 10ರಿಂದ 15 ನಿಮಿಷದ ಅವಧಿಯಲ್ಲಿ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತದೆ.
ಸಿಬಂದಿಗೆ ತರಬೇತಿ
ಕಾವೇರಿ -2 ತಂತ್ರಾಂಶದಿಂದ ಶೇ.30ರಷ್ಟುಕೆಲಸಕಾರ್ಯಗಳು ವೇಗ ಪಡೆಯಲು ಸಾಧ್ಯವಾಗಲಿದೆ. ಈಗಾಗಲೇ ಜಿಲ್ಲೆಯಲ್ಲಿ ಸಿಬಂದಿಗಳಿಗೆ ಈ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಜೂನ್ನಲ್ಲಿ ಎಲ್ಲ ಕಡೆಗಳಲ್ಲಿಯೂ ಅಳವಡಿಕೆ ಕಾರ್ಯ ನಡೆಯಲಿದೆ.
-ಶ್ರೀಧರ್, ಜಿಲ್ಲಾ ನೋಂದಣಾಧಿಕಾರಿ
ಉಪಯೋಗವೇನು?
ನೂತನ ತಂತ್ರಾಂಶದಿಂದ ಸಬ್ ರಿಜಿಸ್ಟರ್ ಕಚೇರಿಗಳ ಮುಂದೆ ಆಸ್ತಿ ನೋಂದಣಿಗೆ ಅನಗತ್ಯವಾಗಿ ಸರದಿಯಲ್ಲಿ ನಿಲ್ಲಬೇಕೆಂದಿಲ್ಲ. ಮಧ್ಯ ವರ್ತಿಗಳ ಹಾವಳಿಯನ್ನೂ ತಪ್ಪಿಸಬಹುದಾಗಿದೆ. ಆಸ್ತಿ ನೋಂದಣಿ ಪ್ರಕ್ರಿಯೆ ಸರಳ ಮತ್ತು ಸುಸೂತ್ರವಾಗಲಿದೆ. ಮುಖ್ಯವಾಗಿ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ, ನಕಲಿ ದಾಖಲೆಗಳ ಮೂಲಕ ವಂಚನೆ ಮತ್ತಿತರ ಅಕ್ರಮಗಳಿಂದ ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಮುಕ್ತಗೊಳಿಸುವ ಆಶಯ ಈ ತಂತ್ರಾಂಶದ್ದು.
ಮನೆಯಿಂದಲೇ ನೋಂದಣಿ ಕಾರ್ಯ
ಆಸ್ತಿ ನೋಂದಣಿ, ಕ್ರಯ, ಕರಾರು, ದಾನ, ಒಪ್ಪಂದ ಮತ್ತು ಉಯಿಲು (ವಿಲ್) ಸೇರಿ ನಾನಾ ಸೇವೆಗಳನ್ನು ಸಾರ್ವಜನಿಕರು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಿನವಿಡೀ ಕಾಯುವ ತಾಪತ್ರಯ ಇರುವುದಿಲ್ಲ. ಮಧ್ಯವರ್ತಿಗಳನ್ನು ಅವಲಂಬಿಸಬೇಕಿಲ್ಲ. ಕಾವೇರಿ -2 ವೆಬ್ಸೈಟ್ನಲ್ಲಿ ಲಾಗಿನ್ ಆಗಿ ಮನೆಯಿಂದಲೇ ಆಸ್ತಿ ನೋಂದಣಿ ಮತ್ತಿತರ ಸೇವೆ ಪಡೆಯಬಹುದಾಗಿದೆ.
ಸುಲಭ ನೋಂದಣಿ
ಭೂಮಿ, ಇ-ಆಸ್ತಿ, ಇ-ಸ್ವತ್ತು ಎಲ್ಲದಕ್ಕೂ ಕಾವೇರಿ-2 ತಂತ್ರಾಂಶ ಲಿಂಕ್ ಆಗಿರಲಿದೆ. ಆಸ್ತಿ ನೋಂದಣಿಗೆ ಸಲ್ಲಿಕೆಯಾದ ದಾಖಲೆಗಳ ಪರಿಶೀಲನೆ ನಡೆಯಲಿದೆ. ನಕಲಿ ದಾಖಲೆ ಸೃಷ್ಟಿಸಿ ನೋಂದಣಿಗೆ ಯತ್ನಿಸಿದರೆ ಸುಲಭದಲ್ಲಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಭದ್ರತೆ ಜತೆಗೆ ನೋಂದಣಿ ಕೆಲಸವು ಸುಲಭವಾಗಲಿದೆ.
ಎಸ್ಎಂಎಸ್ ಮೂಲಕ ಮಾಹಿತಿ
ನೋಂದಣಿ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ನಾಗರಿಕರ ಮೊಬೈಲೆಗೆ ಎಸ್ಎಂಎಸ್ ಮೂಲಕ ಮಾಹಿತಿ ರವಾನಿಸಲಾಗುತ್ತದೆ. ಆಸ್ತಿ ನೋಂದಣಿ ಸಂಬಂಧಿತ ಎಲ್ಲ ಸಮಸ್ಯೆ, ಅನಾನುಕೂಲಗಳಿಗೆ ಈ ತಂತ್ರಾಂಶದ ಮೂಲಕ ಶಾಶ್ವತ ಪರಿಹಾರ ಸಿಗಲಿದೆ ಎನ್ನುತ್ತಾರೆ ತಂತ್ರಾಂಶದ ಎಂಜಿನಿಯರ್.
~ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…