ಸುಳ್ಯ-ಪುತ್ತೂರು: ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಉದುರುತ್ತಿದೆ ಎಳೆ ಅಡಿಕೆ
Team Udayavani, May 26, 2020, 5:35 AM IST
ಸಾಂದರ್ಭಿಕ ಚಿತ್ರ.
ಸುಳ್ಯ: ಒಂದೆಡೆ ಅಡಿಕೆ ಧಾರಣೆ ಏರಿಕೆ ಹಂತದಲ್ಲಿದ್ದರೂ ಬೆಳೆಗಾರರು ಸಂಭ್ರಮಿಸುವ ಸ್ಥಿತಿಯಲ್ಲಿ ಇಲ್ಲ. ಅಡಿಕೆ ತೋಟಗಳಲ್ಲಿ ಎಳೆ ಅಡಿಕೆ ಬೀಳುತ್ತಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ವಾತಾವರಣದ ಉಷ್ಣಾಂಶ ಏರಿರು ವುದರಿಂದ ಹಸಿ ಎಳೆ ಅಡಿಕೆ ಉದುರುತ್ತಿದೆ ಎನ್ನಲಾಗುತ್ತಿದ್ದರೂ, ಪುತ್ತೂರು ಮತ್ತು ಸುಳ್ಯ ತಾಲೂಕಿನ ಕೆಲ ತೋಟಗಳಲ್ಲಿ ಭಾರೀ ಪ್ರಮಾಣದಲ್ಲಿ ಕಾಯಿ ಉದುರುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ವರ್ಷ ಫಸಲು ಕುಸಿತವಾಗುವ ಭೀತಿ ಮೂಡಿದೆ.
ಫಸಲು ನಷ್ಟ
ಬೇಸಗೆಯ ಬಿಸಿಗೆ ಸಾಮಾನ್ಯವಾಗಿ ನಳ್ಳಿ ಉದುರುತ್ತದೆ. ಮಳೆಗಾಲದ ಹೊತ್ತಲ್ಲಿ ನಳ್ಳಿ ಎಳೆ ಅಡಕೆಯಾಗಿ ಮಾರ್ಪಾಡಾಗುತ್ತದೆ. ಈ ಹೊತ್ತಲ್ಲಿ ಉತ್ತಮ ಮಳೆಯಾಗಿ ಉಷ್ಣತೆ ಕಡಿಮೆಯಾದರೆ ಹಸಿ ಕಾಯಿ ಬೆಳವಣಿಗೆ ಹೊಂದಲು ಪೂರಕವಾಗುತ್ತದೆ.
ಆದರೆ ಈ ಬಾರಿ ಅಡಿಕೆ ಬೆಳವಣಿಗೆ ಮೇ ತಿಂಗಳಲ್ಲೇ ಕಂಡಿದ್ದು, ತಿಂಗಳ ಕೊನೆಯಲ್ಲೇ ಎಳೆ ಅಡಿಕೆ ಉದುರುತ್ತಿದೆ. ಔಷಧ ಸಿಂಪಡಣೆ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನುತ್ತಾರೆ ಬೆಳೆಗಾರರು.
ಕೆಲವು ತೋಟಗಳಲ್ಲಂತೂ ದೊಡ್ಡ ಗಾತ್ರದ ಅಡಿಕೆಗಳು ಉದುರುತ್ತಿವೆ. ಬುಡದಲ್ಲಿ ಎಳೆ ಅಡಿಕೆ ತುಂಬಿದ್ದು, ಕೊಂಬೆ ಬರಿದಾಗುತ್ತಿದೆ. ಎರಡು ವರ್ಷದ ಹಿಂದೆ ಪ್ರಾಕೃತಿಕ ವಿಕೋಪದ ಪರಿಣಾಮ ತಾಲೂಕಿನ ಬಹುತೇಕ ತೋಟಗಳಲ್ಲಿಯೂ ಅರ್ಧಕ್ಕಿಂತ ಅಧಿಕ ಬೆಳೆ ನಾಶ ಉಂಟಾಗಿತ್ತು. ಜತೆಗೆ ಕೊಳೆರೋಗ ಬಾಧಿಸಿತ್ತು. ಹಾಗಾಗಿ ಕಳೆದ ವರ್ಷ ನಿರೀಕ್ಷಿತ ಫಸಲು ಸಿಕ್ಕಿಲ್ಲ ಎನ್ನುತ್ತಾರೆ ಅಡಿಕೆ ಬೆಳೆಗಾರ ಸುರೇಶ್ ಸುಳ್ಯ.