Rabkavi Banhatti; ನೀರಿನ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಿ: ಶಾಸಕ ಸಿದ್ದು ಸವದಿ
338 ಕೊಳವೆ ಬಾವಿ, 13 ತೆರೆದ ಬಾವಿಗಳು; 85 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ
Team Udayavani, Mar 15, 2024, 6:19 PM IST
ರಬಕವಿ ಬನಹಟ್ಟಿ: ಮುಂದಿನ ಹದಿನೈದು ಇಪ್ಪತ್ತು ದಿನಗಳಲ್ಲಿ ಸಮೀಪದ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಲಿದ್ದು, ನಗರಸಭೆಯ ಅಧಿಕಾರಿಗಳು ಈಗಿನಿಂದಲೇ ನೀರು ಪೂರೈಕೆಯ ಬಗ್ಗೆ ಗಮನ ನೀಡಬೇಕು ಮತ್ತು ನಗರಸಭೆಯ ವ್ಯಾಪ್ತಿಯ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲು ಸನ್ನದ್ಧರಾಗಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಶುಕ್ರವಾರ ಇಲ್ಲಿನ ನಗರಭೆಯ ಸಭಾ ಭವನದಲ್ಲಿ ನೀರಿನ ಸಮಸ್ಯೆ ಕುರಿತು ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿದರು.
ವಾರ್ಡ್ ನಲ್ಲಿರುವ ಸಮಸ್ಯೆಗಳ ಕುರಿತು ಸದಸ್ಯರಿಂದ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ನಗರೋತ್ಥಾನ ಯೋಜನೆ ಅಡಿಯಲ್ಲಿ ನೀರು ಪೂರೈಕೆಗೆ ಸಂಬಂಧಪಟ್ಟಂತೆ ಇರುವ ಟೆಂಡರ್ ಗಳನ್ನು ಆದಷ್ಟು ಬೇಗನೆ ಕರೆದು ಕಾಮಗಾರಿಯನ್ನು ಆರಂಭಿಸುವಂತೆ ಮೇಲಾಧಿಕಾರಿಗಳ ಜೊತೆಗೆ ಚರ್ಚೆ ಮಾಡಲಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡಲು ರೂ. 5೦ ಲಕ್ಷ ಪರಿಹಾರ ಧನವನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಕೇಳಲಾಗುವುದು. ನೀರಿನ ತೊಂದರೆ ಇದ್ದಲ್ಲಿ ನಗರಸಭೆಯ ಅಧಿಕಾರಿಗಳು ಗಮನ ನೀಡಬೇಕು ನಗರಸಭೆಯ ಸದಸ್ಯರು ನೀರಿನ ಸಮಸ್ಯೆಯನ್ನು ಎದುರಿಸುವ ನಿಟ್ಟಿನಲ್ಲಿ ಎಲ್ಲರೂ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಪೌರಾಯುಕ್ತ ಜಗದೀಶ ಈಟಿ ಮಾತನಾಡಿ ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ಈಗಾಗಲೇ 338 ಕೊಳವೆ ಬಾವಿಗಳಿವೆ. ಅದರಲ್ಲಿ 326 ಕಾರ್ಯ ಮಾಡುತ್ತಿವೆ. ಉಳಿದ ಕೊಳವೆ ಬಾವಿಗಳ ದುರಸ್ತಿ ಕಾರ್ಯವನ್ನು ಕೂಡಾ ಕೈಗೊಳ್ಳಲಾಗುವುದು. 13 ತೆರೆದ ಬಾವಿಗಳು ಇದ್ದು, ಅವುಗಳನ್ನು ಕೂಡಾ ಸ್ವಚ್ಛಗೊಳಿಸಿ ನೀರು ಪೂರೈಕೆಗೆ ಬಳಸಿಕೊಳ್ಳಲಾಗುವುದು ಮತ್ತು 85 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ.
ಕೊಳವೆ ಬಾವಿಗಳ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡು ನೀರು ಪೂರೈಸಿದ ಕೊಳವೆ ಬಾವಿಗಳ ಮಾಲೀಕರ ವಿದ್ಯುತ್ ಬಿಲ್ ನ್ನು ನಗರಸಭೆಯಿಂದ ಪಾವತಿಸಲಾಗುವುದು. ನೀರಿನ ಸಮಸ್ಯೆಯನ್ನು ಎದುರಿಸುವ ಸಂದರ್ಭದಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಎಂಜಿನಿಯರ್ ರಾಘವೇಂದ್ರ ಕುಲಕರ್ಣಿ, ವೈಶಾಲಿ ಹಿಪ್ಪರಗಿ, ಸುರೇಶ ಬಾಗೇವಾಡಿ, ಸಂಜಯ ತೆಗ್ಗಿ, ಶ್ರೀಶೈಲ ಬೀಳಗಿ, ಯಲ್ಲಪ್ಪ ಕಟಗಿ, ಬಸವರಾಜ ಗುಡೋಡಗಿ, ಶ್ರೀಶೈಲ ಆಲಗೂರ, ಶಿವಾನಂದ ಬುದ್ನಿ, ಅರುಣ ಬುದ್ನಿ, ವಿಜಯ ಕಲಾಲ, ಗೌರಿ ಮಿಳ್ಳಿ, ಮಾರುತಿ ಗಾಡಿವಡ್ಡರ, ಜಯಶ್ರೀ ಬಾಗೇವಾಡಿ, ದುರ್ಗವ್ವ ಹರಿಜನ ಸೇರಿದಂತೆ ಅನೇಕರು ಇದ್ದರು.