Temperature: ತಾಪಮಾನ ಹೆಚ್ಚಳ: ಕೃಷಿ ಕಾರ್ಮಿಕರು, ರೈತರಿಗೆ ಸಲಹೆಗಳು
Team Udayavani, May 19, 2023, 5:41 PM IST
ಗಂಗಾವತಿ: ಕೊಪ್ಪಳ ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಳವಾಗುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ 39 ರಿಂದ 410ಸೆ. ಉಷ್ಣಾಂಶ ಕಂಡುಬಂದಿದೆ.ಆದ್ದರಿಂದ ಕೃಷಿ ಕೂಲಿಕಾರರು ಮತ್ತು ರೈತಬಾಂಧವರು ಮತ್ತು ಸಾರ್ವಜನಿಕರು ಬೇಸಿಗೆಯಲ್ಲಿ ಕೆಲವು ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ಅಳವಡಿಸಿಕೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ರಾಘವೇಂದ್ರಎಲಿಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಪಮಾನ ಹೆಚ್ಚಾಗುತ್ತಿದ್ದು ರೈತರು ಕೃಷಿ ಚಟುವಟಿಕೆಗಳನ್ನು ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ಕೈಗೊಳ್ಳಬೇಕು. ನೀರಾವರಿ ಆಶ್ರಯವಿದ್ದಲ್ಲಿ ತೋಟಗಾರಿಕೆ ಬೆಳೆಗಳಿಗೆ ತಪ್ಪದೇ ರಕ್ಷಣಾತ್ಮಕ ನೀರಾವರಿಯನ್ನು ಒದಗಿಸಬೇಕು ಮತ್ತುಅದರಜೊತೆಗೆ ಗಿಡಗಳ ಸುತ್ತ ನೆರಳಿನ ಪರದೆಯನ್ನು ಸುತ್ತುವುದರಿಂದ ಬಿಸಿಲಿನ ಪ್ರಭಾವವನ್ನುಕಡಿಮೆ ಮಾಡಬಹುದು.
ಹಿಂಗಾರು ಬೆಳೆ ಕಟಾವಿನ ನಂತರ ಬೇಸಿಗೆಯಲ್ಲಿ ಮಾಗಿ ಉಳುಮೆ ಮಾಡುವುದರಿಂದಕೋಶಾವಸ್ಥೆಯಲ್ಲಿರುವ ಕೀಟಗಳು ಮತ್ತು ಭೂಮಿಯಿಂದಉದ್ಭವಿಸುವ ಶಿಲೀಂಧ್ರಗಳು ನಾಶಗೊಳ್ಳುತ್ತವೆ. ಮಾವಿನ ಬೆಳೆಯಲ್ಲಿ ಹಣ್ಣು ನೊಣದ ನಿಯಂತ್ರಣಕ್ಕಾಗಿ ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ 10 ಮೋಹಕ ಬಲೆಗಳನ್ನು ತೂಗುಹಾಕಬೇಕು. ಬೇಸಿಗೆಯಲ್ಲಿ ಎಮ್ಮೆಗಳನ್ನು ಹೊಂಡದಲ್ಲಿಈಜಾಡಲು ಬಿಡುವುದರಿಂದ ಬಿಸಿಲಿನ ತಾಪಕಡಿಮೆಯಾಗಿ, ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವುದಲ್ಲದೇ, ಕ್ರಮವಾಗಿ ಬೆದೆಗೆ ಬರಲು ಸಹಾಯಕಾರಿಯಾಗುತ್ತದೆ. ಶುದ್ಧವಾದ ನೀರು ಸದಾಕಾಲ ದನ ಹಸು ಕರುಗಳಿಗೆ, ಕುರಿಗಳಿಗೆ, ಮೇಕೆಗಳಿಗೆ ಮತ್ತು ಕೋಳಿಗಳಿಗೆ ಕುಡಿಯಲು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನಕೇಂದ್ರ, ಗಂಗಾವತಿಯ ಹವಾಮಾನ ವಿಜ್ಞಾನಿಯಾದ ಡಾ.ಫಕೀರಪ್ಪಅರಭಾಂವಿ (ಮೊ. ನಂ.: 8123922495) ಇವರನ್ನು ಸಂಪರ್ಕಿಸಲು ಸೂಚಿಸಿದ್ದಾರೆ.