ವಿಧವೆಗೆ ದೇಗುಲ ಪ್ರವೇಶ ನಿರ್ಬಂಧ: ಹೈಕೋರ್ಟ್ ಗರಂ
Team Udayavani, Aug 5, 2023, 10:22 PM IST
ಚೆನ್ನೈ: ಕಾನೂನು ತಿಳಿದಿರುವ, ಸುಸಂಸ್ಕೃತ ಸಮಾಜದಲ್ಲಿ ವಿಧವೆ ಎಂಬ ಕಾರಣಕ್ಕೆ ಮಹಿಳೆಯನ್ನು ದೇಗುಲಕ್ಕೆ ಪ್ರವೇಶಿಸದಂತೆ ತಡೆಯುವುದು ಸರಿಯಲ್ಲ, ನಾಗರಿಕ ಸಮಾಜದಲ್ಲಿ ಇಂಥ ಅಭ್ಯಾಸ ಇರಲೂಬಾರದು. ಮಹಿಳೆಗೆ ಆಕೆಯದ್ದೇ ಆದ ಗುರುತು, ಗೌರವವಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಪೆರಿಯಕರುಪರಾಯನ್ ಎಂಬ ದೇಗುಲದಲ್ಲಿ ತಮಿಳಿನ ಆದಿ ಮಾಸದ ಪೂಜೆಗೆ ದೇಗುಲಕ್ಕೆ ತೆರಳಲು ತಂಗಮಣಿ ಎಂಬವರು ಇಚ್ಛೆ ವ್ಯಕ್ತಪಡಿಸಿದ್ದರು. ಅದೇ ದೇಗುಲದಲ್ಲಿ ಆಕೆಯ ಪತಿ ಅರ್ಚಕರಾಗಿದ್ದು, ಕೆಲ ಸಮಯದ ಹಿಂದೆ ನಿಧನ ಹೊಂದಿದ್ದರು. ಈ ವಿಚಾರ ತಿಳಿದಿದ್ದ ಹಿನ್ನೆಲೆ ದೇಗುಲ ಆಡಳಿತ ಮಂಡಳಿಯ ಕೆಲ ವ್ಯಕ್ತಿಗಳು ತಂಗಮಣಿ ಅವರು ವಿಧವೆಯಾದ ಕಾರಣ ದೇಗುಲಕ್ಕೆ ಬರಬಾರದು ಎಂದು ಬೆದರಿಸಿದ್ದರು. ಈ ಹಿನ್ನೆಲೆ ತಂಗಮಣಿ ತನಗೂ ತನ್ನ ಮಗನಿಗೂ ದೇಗುಲ ಪ್ರವೇಶಿಸಲು ಪೊಲೀಸರು ಭದ್ರತೆ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ಅವರು ಆಲಿಸಿದ್ದಾರೆ. ಈ ವೇಳೆ ಮೇಲ್ಕಂಡ ಉಲ್ಲೇಖ ಮಾಡಿ, ತಂಗಮಣಿ ಅವರ ಪ್ರವೇಶವನ್ನು ತಡೆಯುವ ಯಾರ ವಿರುದ್ಧ ಬೇಕಿದ್ದರೂ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ನಿರ್ದೇಶಿಸಿದ್ದಾರೆ.