ಪ್ರಧಾನಿ ಮೋದಿಯನ್ನು ಟೀಕಿಸುವುದೇ ಕಾಂಗ್ರೆಸ್ ಕಾಯಕ
Team Udayavani, Jan 11, 2020, 3:10 AM IST
ಮೈಸೂರು: ಸರ್ಕಾರ ಏನೇ ಮಾಡಿದರೂ ಅದನ್ನು ವಿರೋಧಿ ಸುವುದೇ ಪ್ರತಿಕ್ಷಗಳ ಕೆಲಸ ಎಂದು ಭಾವಿಸಿರುವ ವಿರೋಧ ಪಕ್ಷಗಳು ಸಿಎಎ ಹಾಗೂ ಎನ್ಆರ್ಸಿ ವಿಷಯದಲ್ಲಿ ಸುಳ್ಳು ಹೇಳುತ್ತಿವೆ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಕಿಡಿ ಕಾರಿದ್ದಾರೆ. ಕುವೆಂಪುನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೈರಪ್ಪ, ಮೋದಿಯವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಪ್ರತಿಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದರು. ಭೈರಪ್ಪನವರ ಮಾತಿನ ಸಾರ ಹೀಗಿತ್ತು.
ನರೇಂದ್ರ ಮೋದಿ ದಿಟ್ಟ ಪ್ರಧಾನಿ
* ಕನ್ನಡ ಭಾಷಾ ಮಾಧ್ಯಮ ಕುರಿತು ಚರ್ಚಿಸಲು ನಾನು ಮತ್ತು ಕಂಬಾರರು ಮೋದಿಯನ್ನು ಭೇಟಿ ಮಾಡಿದ್ದೆವು. ನಾನು ಎಷ್ಟು ಸಿದ್ಧನಾಗಿದ್ದೆನೋ ಅದಕ್ಕಿಂತ ಹೆಚ್ಚು ಮಾಹಿತಿ ಅವರಲ್ಲಿತ್ತು. ಅವರು ನಿಜಕ್ಕೂ ಬುದ್ಧಿವಂತರು.
* ಪ್ರಧಾನಿ ನರೇಂದ್ರ ಮೋದಿ ಒಬ್ಬ ಸನ್ಯಾಸಿ. ಮೋದಿ ತಮ್ಮ ಸ್ವಂತಕ್ಕೆ ಏನೂ ಮಾಡೊಲ್ಲ. ಮೋದಿ ಒಬ್ಬ ಸಮರ್ಥ ಹಾಗೂ ಧೈರ್ಯವಂತ ಪ್ರಧಾನಿ. ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವ ಧೈರ್ಯ ತೋರಿದ್ದಾರೆ. ಆದರೆ, ಕಾಂಗ್ರೆಸ್ ಸೇರಿ ಉಳಿದ ವಿರೋಧ ಪಕ್ಷಗಳಿಗೆ ಅವರನ್ನು ಟೀಕೆ ಮಾಡುವುದೇ ಕಾಯಕವಾಗಿದೆ.
* ಮೋದಿಯವರನ್ನು ಕೆಳಗಿಳಿಸಿ ಎನ್ನುತ್ತಾರೆ. ಆದರೆ, ಅವರ ಸ್ಥಾನಕ್ಕೆ ಬೇರೆ ಪರ್ಯಾಯ ನಾಯಕ ಯಾರು?. ಇವರ ನಂತರ ದೇಶಕ್ಕೆ ಪ್ರಧಾನಿ ಯಾರು?
* ವಿಶ್ವದ ಅನೇಕ ದೇಶಗಳಲ್ಲಿ ಮುಸ್ಲಿಮರಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ ಇದೆ. ಭಾರತದಲ್ಲೂ ಇದೆ ಆಗಬೇಕು ಅಂದ್ರೆ ಹೇಗೆ?. ಮೋದಿಯವರು ಮುಸ್ಲಿಂ ರಾಷ್ಟ್ರಗಳ ಜತೆ ಒಳ್ಳೆಯ ಬಾಂಧವ್ಯ ಬೆಳೆಸಿದ್ದಾರೆ. ಹಾಗಿದ್ದ ಮೇಲೆ “ಮೋದಿ ಚೋರ್’ ಎಂದು ವಿದೇಶಗಳಲ್ಲಿ ಪ್ರಚಾರ ಮಾಡಿದರೆ ಹೇಗೆ?. ಅಮೆರಿಕ ಸೇರಿ ಎಲ್ಲಾ ದೇಶಗಳಲ್ಲಿ ಮೆರಿಟ್ ಇದ್ದವರಿಗೆ ಆದ್ಯತೆ ಕೊಟ್ಟಿದ್ದರಿಂದ ಹೆಚ್ಚು ಭಾರತೀಯರಿದ್ದಾರೆ.
* ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಹಿಂದೂ ಸಮಾಜದ ಒಗ್ಗಟ್ಟನ್ನು ಕಂಡು, ಜಾತಿಗಳಾಗಿ ಒಡೆದು ಹಾಕಿದರು. ಹಿಂದೂಗಳಿಗೆ ಬ್ರೂಟ್ ಮೆಜಾರಿಟಿ ಇದೆ. ನಿಮ್ಮನ್ನು ತುಳಿದುಬಿಡ್ತಾರೆ ಎಂದು ಮುಸಲ್ಮಾನರಲ್ಲಿ ಆತಂಕ ಹುಟ್ಟಿಸಿ, ಮುಸ್ಲಿಂ ಸಮು ದಾಯದರನ್ನು ಓಟ್ ಬ್ಯಾಂಕಾಗಿ ಸೃಷ್ಟಿಮಾಡಿ ಕೊಂಡರು. ಅದೇ ತಂತ್ರವನ್ನು ಸ್ವಾತಂತ್ರಾನಂತರ ನೆಹರೂ ಅನುಸರಿಸಿದರು. ಕಾಂಗ್ರೆಸ್, ಇಂದಿಗೂ ಅದೇ ಐಡಿಯಾಲಜಿಯನ್ನು ಅನುಸರಿಸುತ್ತಿದೆ.
* ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳು ಇಂದು ಒಡೆದು ಆಳುವ ನೀತಿ ಅನುಸರಿಸುತ್ತಿವೆ. ಇದು ಬದಲಾಗಬೇಕು. ಮತದಾನ ಶುದ್ಧವಾಗಬೇಕು.
ಎನ್ಆರ್ಸಿ ಅನಿವಾರ್ಯ
* 23 ವರ್ಷ ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸಿಗರಿಗೆ ಆಸ್ಪದ ನೀಡಿದ್ದರಿಂದ ಸಿಎಎ , ಎನ್ಆರ್ಸಿ ಇಂದು ಅನಿವಾರ್ಯವಾಗಿದೆ. ಈ ಎರಡೂ ಕಾನೂನುಗಳನ್ನು ಈಗಲ್ಲದಿದ್ದರೆ ಮತ್ತೆ ಯಾವಾಗ ಜಾರಿ ಮಾಡಬೇಕು. ಇಷ್ಟು ದಿನ ಆಗದಿರುವುದು ಮುಂದೆ ಆಗುತ್ತದೆಯೇ?
* ಸ್ವಾತಂತ್ರಾನಂತರ ಫಕ್ರುದ್ದೀನ್ ಅಲಿಯವರು ಪಶ್ಚಿಮ ಬಂಗಾಳದ ಮೂಲಕ ಲಕ್ಷಾಂತರ ಬಾಂಗ್ಲಾ ವಲಸಿಗರನ್ನು ತುಂಬಿದರು. ಇದರಿಂದ ಸ್ಥಳೀಯರು ಅಸ್ಸಾಂನಲ್ಲಿ ದೊಡ್ಡ ಚಳವಳಿ ಮಾಡಿದರು. ಅದಕ್ಕಾಗಿಯೇ ತಮಗೆ ವಿಧೇಯರಾಗಿರಲು ಇಂದಿರಾಗಾಂಧಿಯವರು ಅವರಿಗೆ ರಾಷ್ಟ್ರಪತಿ ಹುದ್ದೆ ಕೊಟ್ಟರು.
* ಕೆಲವರು ಜೆಎನ್ಯು ವಿದ್ಯಾರ್ಥಿಗಳನ್ನು ತಮ್ಮ ಸ್ವಾರ್ಥಗಾಗಿ ಬಳಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಯಾವ ವಿವಿಗೂ ಕೊಡದಷ್ಟು ಹಣ ವನ್ನು ಜೆಎನ್ಯುಗೆ ನೀಡಲಾಗುತ್ತಿದೆ. ಇದೆಲ್ಲ ಜನರ ತೆರಿಗೆ ಹಣ. ಮೋದಿ ಇಳಿಸಿ ಅನ್ನೋದು ಡರ್ಟಿ ಪಾಲಿಟಿಕ್ಸ್. ಅದಕ್ಕೂ, ವಿದ್ಯಾರ್ಥಿ ಗಳಿಗೂ ಸಂಬಂಧವಿಲ್ಲ. ವಿದ್ಯಾರ್ಥಿಗಳು ಓದಬೇಕು. ಅಧ್ಯಯನಕ್ಕೆ ಕೊರತೆ ಇರುವುದನ್ನು ಪೂರೈಸಿ ಅಂತಾ ಕೇಳಬೇಕು. ಅದನ್ನು ಬಿಟ್ಟು ರಾಜಕೀಯ ಅಜೆಂಡಾ ಇಟ್ಟುಕೊಂಡು ಹೋರಾಟ ಮಾಡಬಾರದು.
* ಸಾಹಿತಿಗಳಿಗೆ ಯಾವುದೇ ಅಜೆಂಡಾ ಇರಬಾರದು. ಸ್ವತಂತ್ರವಾಗಿ ಯೋಚಿಸಬೇಕು. ನಾನು ಇಂತಹ ಯಾವುದೇ ಗುಂಪಿಗೆ ಸೇರಿದವನಲ್ಲ.
ನಾನು ಚಿಕ್ಕಂದಿನಿಂದ ಬಹಳ ಕಷ್ಟಪಟ್ಟು ಓದಿದ್ದಕ್ಕೆ ಈವತ್ತು ಲೇಖಕನಾಗಲು ಸಾಧ್ಯವಾಯ್ತು. ವಿದ್ಯಾರ್ಥಿಗಳ ಹೋರಾಟ ಎಂದಿಗೂ ಶೈಕ್ಷಣಿಕ ಅಗತ್ಯತೆಗೆ ಮಾತ್ರ ಸೀಮಿತವಾಗಿರಬೇಕು. ಆದರೆ, ಕೆಲವರು ವಿದ್ಯಾರ್ಥಿಗಳನ್ನು ಅಡ್ಡ ದಾರಿಗೆ ಎಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಜೆಎನ್ಯುವನ್ನು ಮುಂದುವರೆಸಬೇಕಾ ಎಂಬ ಬಗ್ಗೆ ಸರ್ಕಾರ ಚಿಂತಿಸಲಿ.
-ಡಾ.ಎಸ್.ಎಲ್. ಭೈರಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?