ಇರುವುದನ್ನು ಹಂಚಿಕೊಳ್ಳುವ ಶ್ರೀಮಂತಿಕೆ
Team Udayavani, Mar 31, 2021, 7:05 AM IST
ಇರುವುದನ್ನು ಇನ್ನೊಬ್ಬರ ಜತೆಗೆ ಹಂಚಿ ಕೊಳ್ಳುವ ಕಲೆಯನ್ನು ಕಲಿಯುವಾತ ಅತೀ ಶ್ರೀಮಂತ ಎನಿಸಿಕೊಳ್ಳುತ್ತಾನೆ. ಆತ ಕಡುಬಡವನೇ ಆಗಿರಬಹುದು; ಆದರೆ ಆತನ ಒಳಗು ಹೊಂದಿರುವ ಈ ಸಿರಿವಂತಿಕೆ ಅರಸರೂ ಅಸೂಯೆ ಪಡುವಂತೆ ಮಾಡುತ್ತದೆ.
ಇದು ಮನೋಜ್ಞವಾದ ಸೂಫಿ ಕತೆ.
ಒಬ್ಬ ಕಟ್ಟಿಗೆ ಮಾರಾಟಗಾರ ಇದ್ದ. ಕಡು ಬಡವ. ಹಗಲಿಡೀ ಕಾಡಿನಲ್ಲಿ ಸೌದೆ ಕಡಿದು ಸಂಗ್ರಹಿಸಿ ಸಂತೆಗೆ ಒಯ್ದು ಮಾರಾಟ ಮಾಡಿದರೆ ಅವನ ಜೀವನ. ಕಾಡಿನಲ್ಲಿಯೇ ಗುಡಿ ಸಲು ಕಟ್ಟಿಕೊಂಡಿದ್ದ.
ಬಡವನ ಗುಡಿಸಲು ಸಣ್ಣದು. ಅದರಲ್ಲೂ ಈ ಸೌದೆ ಮಾರಾಟಗಾರನ ಗುಡಿಸಲು ಎಷ್ಟು ಸಣ್ಣದು ಎಂದರೆ ಅದ ರೊಳಗಿದ್ದದ್ದು ಅವನು ಮತ್ತು ಅವನ ಹೆಂಡತಿ ಮಲಗುವಷ್ಟೇ ಜಾಗ. ಆದರೂ ಅವರು ಸುಖ ಸಂತೋಷಗಳಿಂದ ಇದ್ದರು.
ಒಂದು ರಾತ್ರಿ ಅವರಿಬ್ಬರು ಗಾಢ ನಿದ್ದೆಯಲ್ಲಿರುವಾಗ ಯಾರೋ ಬಾಗಿಲು ತಟ್ಟಿದ ಸದ್ದಾಯಿತು. ಸೌದೆಯಾತನ ಹೆಂಡತಿ ಬಾಗಿಲ ಬಳಿಯೇ ನಿದ್ರಿಸಿದ್ದಳು. “ಬಾಗಿಲು ತೆರೆ. ಭಾರೀ ಮಳೆ ಬರುತ್ತಿದೆ. ಯಾರೋ ಕಾಡಿನಲ್ಲಿ ದಾರಿ ತಪ್ಪಿ ಇಲ್ಲಿಗೆ ಬಂದಿರಬೇಕು. ಈ ಕಾರಿರುಳಿನಲ್ಲಿ ಹೊರಗೆ ಅರಣ್ಯದಲ್ಲಿ ಕಾಲ ಕಳೆಯು ವುದು ಅಪಾಯಕಾರಿ. ಬಾಗಿಲು ತೆರೆ’ – ಸೌದೆಯವನು ಹೆಂಡತಿಗೆ ಹೇಳಿದ.
ಆದರೆ ಹೆಂಡತಿ ಹಿಂಜರಿದಳು. “ಆದರೆ ಇಲ್ಲಿ ಜಾಗವೇ ಇಲ್ಲವಲ್ಲ’.
ಬಡ ಸೌದೆಯಾತ ನಕ್ಕುಬಿಟ್ಟ, “ಬೇಕಾದಷ್ಟು ಸ್ಥಳ ಇರುವುದಕ್ಕೆ ಇದೇನೂ ರಾಜನ ಅರಮನೆ ಅಲ್ಲ. ಇದು ಕಡು ಬಡವನ ಗುಡಿಸಲು. ಹಾಗಾಗಿ ಹೊಂದಿ ಕೊಳ್ಳಬೇಕಷ್ಟೆ. ನಾವಿಬ್ಬರು ಕಾಲು ಚಾಚಿ ಮಲಗುವಷ್ಟು ಸ್ಥಳ ಇದೆ ಎಂದಾದರೆ ಇನ್ನೊಬ್ಬ ಒಳಬಂದಾಗ ಕುಳಿತು ಕೊಂಡರಾಯಿತು. ಜಾಗ ಸೃಷ್ಟಿಸೋಣ, ಬಾಗಿಲು ತೆರೆ’ ಎಂದು ಹೇಳಿದ.
ಗುಡಿಸಲಿನ ಬಾಗಿಲು ತೆರೆಯಿತು. ಅಲ್ಲೊಬ್ಬ ಮಳೆಯಲ್ಲಿ ನೆನೆಯುತ್ತ ನಿಂತಿದ್ದ. ಒಳಗೆ ಬಂದು ಕೃತಜ್ಞತೆ ಸೂಚಿಸಿದ. ಬಳಿಕ ಮೂವರೂ ಕುಳಿತು ಕೊಂಡು ಪಟ್ಟಾಂಗ ಹೊಡೆಯುತ್ತ ಕಾಲಯಾಪನೆ ಮಾಡಿದರು. ಇರುಳು ಏರುತ್ತಿತ್ತು. ಅಷ್ಟರಲ್ಲಿ ಇನ್ನೊಮ್ಮೆ ಬಾಗಿಲು ಸದ್ದಾಯಿತು.
ಈಗಾಗಲೇ ಒಳಗೆ ಬಂದಿದ್ದ ಅತಿಥಿ ಬಾಗಿಲ ಬಳಿಯೇ ಕುಳಿತಿದ್ದ. ಸೌದೆ ಯಾತ, “ಬಾಗಿಲು ತೆರೆ. ಯಾರೋ ದಾರಿ ತಪ್ಪಿ ಬಂದಿರಬೇಕು’ ಎಂದ.
“ನೀನೊಬ್ಬ ವಿಚಿತ್ರ ವ್ಯಕ್ತಿ. ಇಲ್ಲಿ ಈಗಾಗಲೇ ಸ್ಥಳ ಇಲ್ಲ’ ಎಂದ ಹೊಸಬ.
“ನೀನು ಬಾಗಿಲು ತಟ್ಟಿದಾಗ ನನ್ನ ಹೆಂಡತಿ ಹೇಳಿದ್ದನ್ನು ಕೇಳಿದ್ದರೆ ಇಷ್ಟು ಹೊತ್ತಿಗೆ ನೀನು ಕಾಡಿನಲ್ಲಿ ಯಾವು ದಾದರೂ ಪ್ರಾಣಿಗೆ ಆಹಾರ ಆಗುತ್ತಿದ್ದೆ. ಬಾಗಿಲು ತೆರೆ. ಈಗ ನಾವು ಆರಾಮದಲ್ಲಿ ಕುಳಿತಿದ್ದೇವೆ. ಇನ್ನೊಬ್ಬ ಬಂದ ಮೇಲೆ ಕೊಂಚ ಒತ್ತಿಕೊಂಡು ಕುಳಿತರಾಯಿತು, ಬೇಗ ಬಾಗಿಲು ತೆರೆ’ ಎಂದ ಸೌದೆಯಾತ.
ಬಾಗಿಲು ತೆರೆಯಿತು. ಇನ್ನೊಬ್ಬ ಒಳ ಬಂದ. ನಾಲ್ವರೂ ಒತ್ತೂತ್ತಿ ಕುಳಿತರು. ಅಷ್ಟರಲ್ಲಿ ಮತ್ತೆ ಬಾಗಿಲಿನ ಸದ್ದಾಯಿತು. ಆದರೆ ಮನುಷ್ಯರು ತಟ್ಟಿದಂತೆ ಇರಲಿಲ್ಲ. ಎಲ್ಲರೂ ಹೆದರಿ ನಿಶ್ಶಬ್ದರಾದರು.
“ಅದು ಯಾರು ಎಂದು ನನಗೆ ಗೊತ್ತಿದೆ. ಅದು ನನ್ನ ಕತ್ತೆ. ಕಟ್ಟಿಗೆ ಸಂತೆಗೆ ಒಯ್ದುಕೊಡುವ ನನ್ನ ನಿಷ್ಠೆಯ ಸಂಗಾತಿ. ಮಳೆಯಲ್ಲಿ ನೆನೆದಿರಬೇಕು. ಬಾಗಿಲು ತೆರೆಯಿರಿ, ಒಳಕ್ಕೆ ಕರೆದುಕೊಳ್ಳೋಣ’ ಎಂದ ಸೌದೆಯಾತ.
“ಇದು ಅತಿಯಾಯಿತು. ಇಲ್ಲಿ ಜಾಗವೇ ಇಲ್ಲ. ಅದನ್ನೂ ಸೇರಿಸಿಕೊಳ್ಳು ವುದು ಹೇಗೆ!’ ಮೂವರೂ ಚೀರಿದರು.
“ನನ್ನ ಕತ್ತೆಯನ್ನು ನಾನು ಈ ಮಳೆಯಲ್ಲಿ ಹೊರಗೆ ಬಿಡಲಾರೆ. ಅದನ್ನು ಮಧ್ಯೆ ನಿಲ್ಲಿಸಿ ನಾವು ಅದರ ಸುತ್ತ ನಿಂತರಾಯಿತು. ಅದಕ್ಕೊಂದಿಷ್ಟು ಪ್ರೀತಿ, ಬಿಸುಪು ಸಿಕ್ಕ ಹಾಗಾಗುತ್ತದೆ. ಬಾಗಿಲು ತೆರೆಯಿರಿ’ ಎಂದ ಸೌದೆಯಾತ.
ಯಾರೂ ಏನು ಮಾಡುವ ಹಾಗಿರಲಿಲ್ಲ. ಬಾಗಿಲು ತೆರೆಯಿತು. ಕತ್ತೆ ಒಳಬಂತು.
“ನನ್ನ ಕತ್ತೆಯ ಬಗ್ಗೆ ನಿಮಗೇನೂ ಗೊತ್ತಿಲ್ಲ. ಇದೊಂದು ಸಂತನ ಹಾಗೆ. ನೀವು ಏನೇ ಹೇಳಿ, ಆತ ಮೌನವಾಗಿ ಕೇಳಿಸಿಕೊಳ್ಳುತ್ತಾನೆ…’ ಎಂದು ಅಕ್ಕರೆಯಿಂದ ಮೈದಡವುತ್ತ ಹೇಳಿದ ಸೌದೆಯಾತ.
( ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ