ತಿರುವನಂತಪುರದಲ್ಲಿ ದುರ್ಘಟನೆ: ಕಡಲಿನಲ್ಲಿ ಮುಳುಗಿ ಎಂಜಿನಿಯರ್ ಸಾವು
Team Udayavani, Feb 13, 2023, 12:42 AM IST
ಕಾಸರಗೋಡು: ತಿರುವನಂತಪುರ ವರ್ಕಲ ಓಡಯಂ ಸಮುದ್ರದಲ್ಲಿ ಶನಿವಾರ ಬೆಳಗ್ಗೆ ಸ್ನಾನ ಮಾಡುತ್ತಿದ್ದಾಗ ಬೃಹತ್ ತೆರೆಗೆ ಕೊಚ್ಚಿ ಹೋಗಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಮೂಲತಃ ಉಕ್ಕಿನಡ್ಕದ ಸಮೀಪದ ಸರ್ಪಂಗಳ ನಿವಾಸಿ ಎಂ. ಸದಾಶಿವ (34) ಅವರು ಸಾವಿಗೀಡಾಗಿದ್ದಾರೆ.
ವರ್ಕಲದಿಂದ ಬೆಂಗಳೂರಿಗೆ ಶನಿವಾರ ಮಧ್ಯಾಹ್ನ ವಾಪಸಾಗ ಲಿದ್ದರು. ಬೆಳಗ್ಗೆ ಸುಮಾರು 9.45ಕ್ಕೆ ಪತ್ನಿ ಸ್ನೇಹ ಸರಸ್ವತಿ ಅವರ ಜತೆಯಲ್ಲಿ ಸಮುದ್ರ ಸ್ನಾನಕ್ಕೆ ತೆರಳಿದ್ದರು. ಇದೇ ವೇಳೆ ಬೃಹತ್ ತೆರೆಯಲ್ಲಿ ಕೊಚ್ಚಿ ಹೋಗಿದ್ದು, ಕೂಡಲೇ ಸಮುದ್ರ ಕಿನಾರೆಯಲ್ಲಿದ್ದ ಸ್ಥಳೀಯರು ಹಾಗು ಲೈಫ್ ಗಾರ್ಡ್ ಸೇರಿ ಸಮುದ್ರದಿಂದ ದಡಕ್ಕೆ ತಂದು ವರ್ಕಲದ ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಪಾರಿಪ್ಪಳ್ಳಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಹಜರು ಬಳಿಕ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಗಿದೆ.
ಅಯಿರೂರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುವಾರ ವರ್ಕಲದ ರೆಸಾರ್ಟ್ ಒಂದರಲ್ಲಿ ತಂಗಿದ್ದರು. ಮೃತರು ಬೆಂಗಳೂರಿನ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿದ್ದು, ಅವರ ಪತ್ನಿ ಸ್ನೇಹ ಸರಸ್ವತಿ ಕೂಡ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿದ್ದಾರೆ. ಕಳೆದ ಐದಾರು ವರ್ಷಗಳಿಂದ ಅವರು ಬೆಂಗಳೂರಿನಲ್ಲಿದ್ದಾರೆ. ಮೃತರು ಸರ್ಪಂಗಳ ನಿವಾಸಿ ನಿವೃತ್ತ ಪೋಸ್ಟ್ ಮಾಸ್ಟರ್ ಮಹಾಲಿಂಗೇಶ್ವರ ಶರ್ಮ – ಪೋಸ್ಟ್ ಮಾಸ್ಟರ್ ಶಾಂತಾ ಕುಮಾರಿ ದಂಪತಿಯ ಪುತ್ರರಾಗಿದ್ದಾರೆ. ಎಂ. ಸದಾಶಿವ ಅವರು ಪತ್ನಿ ಸ್ನೇಹ ಸರಸ್ವತಿ ಅವರ ಜತೆಯಲ್ಲಿ ವರ್ಕಲಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಮೃತರು, ತಂದೆ, ತಾಯಿ, ಸಹೋದರರನ್ನು ಅಗಲಿದ್ದಾರೆ.