ಹುಲಿಯೇ ಇರದ ಚಿಕ್ಕಹಡಿಗೇಹಳ್ಳಿಯಲ್ಲಿ ಹುಲಿಯ ಕಳೇಬರ ಪತ್ತೆ! ಗ್ರಾಮಸ್ಥರಲ್ಲಿ ಆತಂಕ
Team Udayavani, Feb 14, 2023, 2:01 PM IST
ಚೇಳೂರು: ಸೇತುವೆಯಡಿ ಮಲಗಿರುವ ರೀತಿಯಲ್ಲಿ ಪತ್ತೆಯಾದ ಹುಲಿ ಕಳೇಬರ ಸುತ್ತಲ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ರಾಷ್ಟ್ರೀಯ ಪ್ರಾಣಿ ಹುಲಿಯ ಮಾಹಿತಿ ಇಲ್ಲದ ತುಮಕೂರು ಜಿಲ್ಲೆಯಲ್ಲಿ ಹುಲಿ ಶವ ಸಿಕ್ಕಿರುವುದು ಅರಣ್ಯ ಇಲಾಖೆಗೂ ಸಹ ಅಚ್ಚರಿ ಹಾಗೂ ಅನುಮಾನ ತಂದ ಘಟನೆ ಹೋಬಳಿ ಚಿಕ್ಕಹಡಿಗೇಹಳ್ಳಿ ಬಳಿ ನಡೆದಿದೆ.
ಬೆಳಿಗ್ಗೆ ನಾಯಿಗಳು ಗಲಾಟೆ ಮಾಡುತ್ತಿದ್ದ ಹಿನ್ನಲೆ ಸ್ಥಳೀಯರು ಗಮನಿಸಿದಾಗ ಮಲಗಿರುವ ಹುಲಿ ಕಂಡಿದೆ. ಗಾಬರಿಯಾದ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ತುಂಬಾ ಸಮಯ ಹುಲಿ ಹಾಗೆಯೇ ಇರುವುದನ್ನು ಕಂಡು ಸತ್ತಿರುವ ಶಂಕೆ ವ್ಯಕ್ತಪಡಿಸಿ ಆ ಸ್ಥಳವನ್ನು ಸುತ್ತವರೆದ ಅರಣ್ಯ ಇಲಾಖೆ ಸಿಬ್ಬಂದಿಗಳು ಮೇಲಾಧಿಕಾರಿಗಳ ಬರುವಿಕೆಗೆ ಕಾದಿದ್ದರು.
ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಮಾತನಾಡಿ, ಹುಲಿಯ ಶವ ಪತ್ತೆ ನಮಗೂ ಅಚ್ಚರಿ ತಂದಿದೆ. ಹುಲಿಯೇ ಇಲ್ಲದ ಈ ಪ್ರದೇಶದಲ್ಲಿ ಹುಲಿ ಕಳೇಬರ ಅನುಮಾನ ಉಂಟು ಮಾಡಿದೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ ಮೇಲಾಧಿಕಾರಿಗಳ ಬಂದ ಬಳಿಕ ಸೂಕ್ತ ತನಿಖೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸುಮಾರು 700 ಎಕರೆ ಅರಣ್ಯ ಪ್ರದೇಶದ ಇಲ್ಲಿ ಚಿರತೆ, ಕರಡಿ ಕಂಡ ಬಗ್ಗೆ ಸ್ಥಳೀಯರು ಹೇಳುತ್ತಾರೆ. ಹುಲಿ ಪ್ರತ್ಯಕ್ಷ ಬಗ್ಗೆ ಗ್ರಾಮಸ್ಥರಿಗೆ ಆತಂಕ ಹಾಗೂ ಅಚ್ಚರಿ ಎರಡೂ ಒಟ್ಟಿಗೆ ಆಗಿದೆ.
ಈ ಅರಣ್ಯದಲ್ಲಿ ಮೊದಲಿನಿಂದ ಓಡಾಡುವ ಜನರ ಪ್ರಕಾರ ಹುಲಿಯ ಗುರುತು ಎಂದೂ ಕಂಡಿಲ್ಲ. ಕೆಲವರು ಹೇಳುವ ಪ್ರಕಾರ ಅರಣ್ಯದಲ್ಲಿ ಕೆಲ ರಿಮೂಟ್ ಏರಿಯಾ ಕೂಡಾ ಇದ್ದು, ಕೃಷ್ಣ ಕಲ್ಲು ಗುಡ್ಡ ಎಂಬ ಸ್ಥಳದಲ್ಲಿ ಗುಹೆಗಳು ಹೆಚ್ಚಿವೆ. ಯಾರೂ ಸುಳಿಯದ ಈ ಜಾಗದಲ್ಲಿ ಹುಲಿ ಇತ್ತೇ ಎಂಬ ಅನುಮಾನ ಕೂಡಾ ವ್ಯಕ್ತವಾಯಿತು.
ಈ ಮಿಶ್ರ ಪ್ರತಿಕ್ರಿಯೆಯ ನಡುವೆ ಅರಣ್ಯ ಇಲಾಖೆ ಹುಲಿಯು ನಮ್ಮ ಜಿಲ್ಲೆಯಲ್ಲಿಲ್ಲ. ದಟ್ಟ ಅಡವಿಯ ಸ್ಥಳ ಹೊರತಾಗಿ ಇಂತಹ ಗುಡ್ಡಗಳು ಕುರುಚಲು ಅರಣ್ಯದಲ್ಲಿ ಹುಲಿ ಪತ್ತೆ ಅನುಮಾನ ಮೂಡಿಸಿದೆ.
ಸ್ಥಳಕ್ಕೆ ಉನ್ನತ ಅಧಿಕಾರಿಗಳ ಭೇಟಿಯ ನಂತರ ಮುಂದಿನ ತನಿಖೆಯಿಂದ ಹುಲಿ ಸಾವಿಗೆ ಕಾರಣ ತಿಳಿಯಲಿದೆ.