Ganesh Chauthi: ಗಣೇಶಚೌತಿಗೆ ಎರಡು ದಿನದ ಗೊಂದಲ
Team Udayavani, Sep 15, 2023, 12:04 AM IST
ಈ ಬಾರಿ ಗೌರಿ-ಗಣೇಶ ಹಬ್ಬದ ಆಚರಣೆ ಸಂಬಂಧ ಗೊಂದಲ ಸೃಷ್ಟಿಯಾಗಿದೆ. ಕೆಲವು ಪಂಚಾಂಗದ ಕ್ಯಾಲೆಂಡರ್ನಲ್ಲಿ ಸೋಮವಾರ(ಸೆ.18) ಎಂದು ಇದ್ದರೆ, ಇನ್ನಿತರೆ ಕ್ಯಾಲೆಂಡರ್ನಲ್ಲಿ ಮಂಗಳವಾರ (ಸೆ.19) ತೋರಿಸಲಾಗಿದೆ. ಇದರಿಂದಾಗಿ ಹಬ್ಬದ ರಜೆ ಯಾವ ದಿನಾಂಕದಂದು ನೀಡಬೇಕು ಎಂಬ ಕುರಿತು ಸರ್ಕಾರದ ಮಟ್ಟದಲ್ಲಿಯೂ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಯಾವ ದಿನ ಗಣೇಶನ ಪ್ರತಿಷ್ಠಾಪನೆ ಮತ್ತು ಪೂಜೆ ಸೂಕ್ತ ಎಂಬುದರ ಕುರಿತು ಪ್ರಾಜ್ಞರು ಇಲ್ಲಿ ವಿವರಿಸಿದ್ದಾರೆ.
ಸೋಮವಾರ ಒಳ್ಳೆಯದು
ಬೆಂಗಳೂರು: ಮಾಸಗಳು ಚಂದ್ರನ ಸಂಚಾರವನ್ನು ಅವಲಂಬಿಸಿರುತ್ತವೆ. ಅದೇ ರೀತಿ ಸೆ.18ರಂದು ತದಿಗೆ (ತೃತೀಯ) ಬಂದಿದ್ದು, ಸೆ.19ರಂದು ಚತುರ್ಥಿ ಬಂದಿದೆ. ಆದರೆ, ತದಿಗೆಯುಕ್ತ ಚತುರ್ಥಿ ಸೋಮವಾರ(ಸೆ.18)ದಂದು ಇದ್ದು, ಪಂಚಮಿಯುಕ್ತ ಚತುರ್ಥಿ ಮಂಗಳವಾರ ಬಂದಿದೆ. ತದಿಗೆಯುಕ್ತ ಚತುರ್ಥಿಯು ಯಾವಾಗಲೂ ಗಣೇಶನ ಪ್ರತಿಷ್ಠಾಪನೆಗೆ ಸೂಕ್ತ. ಆದ್ದರಿಂದ ಸೋಮವಾರ
ಗಣೇಶನನ್ನು ಕೂರಿಸಿ ಪೂಜಿಸಬಹುದು ಎಂದು ಜ್ಯೋತಿಷಿ ವಿಠಲ್ ಭಟ್ ಕೆಕ್ಕಾರು ತಿಳಿಸುತ್ತಾರೆ.ಅಕ್ಷಾಂಶ-ರೇಖಾಂಶಗಳ ಅನುಗುಣವಾಗಿ ಸೂರ್ಯ ಸಿದ್ಧಾಂತ ಮತ್ತು ದೃಖ್ ಸಿದ್ಧಾಂತಗಳ ಲೆಕ್ಕಾಚಾರಗಳ ಪ್ರಕಾರ ಈ ಗೊಂದಲ ಸೃಷ್ಟಿಯಾಗುತ್ತದೆ.
ಈ ಬಾರಿ ಶ್ರಾವಣದಲ್ಲಿ ಅಧಿಕ ಮಾಸ ಬಂದಿರುವುದು ಕಾರಣವಾಗಿದೆ. ದೃಕ್ ಸಿದ್ಧಾಂತದ ಪ್ರಕಾರ ಸೋಮವಾರ(ಸೆ.18)ದಂದು ಮಧ್ಯಾಹ್ನ 12.42ವರೆಗೆ ತದಿಗೆ ಬಂದಿದೆ. ಸೂರ್ಯ ಸಿದ್ಧಾಂತದ ಪ್ರಕಾರ ತದಿಗೆ(ತೃತೀಯ) ಸೋಮವಾರ ಬೆಳಗ್ಗೆ 9.56ರವರೆಗೆ ಬಂದಿದ್ದು, ನಂತರ ಚತುರ್ಥಿ ತಿಥಿ ಆಗಮಿಸಿದೆ. ಆದ್ದರಿಂದ ಗೌರಿ ವ್ರತ ಮಾಡುವವರು ಸೋಮವಾರ ಮುಂಜಾನೆ ಮಾಡಬಹುದಾಗಿದೆ. ತದನಂತರ ಚತುರ್ಥಿ ಬಂದಿರುವ ಕಾರಣ ಧರ್ಮಶಾಸ್ತ್ರ ಪ್ರಕಾರ ಸೋಮವಾರವೇ ಗಣೇಶನನ್ನು ಪ್ರತಿಷ್ಠಾಪಿಸಿ ಚತುರ್ಥಿ ವ್ರತ ಮಾಡಬಹುದಾಗಿದೆ ಎಂದು ಹೇಳುತ್ತಾರೆ.
ದೃಕ್ ಪಂಚಾಂಗದ ಪ್ರಕಾರ 19
ದೃಕ್ ಪಂಚಾಂಗ ಹಾಗೂ ಸೂರ್ಯ ಸಿದ್ಧಾಂತ ಪಂಚಾಂಗ ಎಂಬ ಎರಡು ರೀತಿಯ ಪಂಚಾಂಗಗಳಿವೆ. ಅದರಂತೆ ದೃಕ್ ಪಂಚಾಂಗ ಅನುಸರಿಸುವವರ ತಿಥಿ, ಘಳಿಗೆ ಪ್ರಕಾರ ಸೆ.19 ಕ್ಕೆ ಗಣೇಶ ಚತುರ್ಥಿ ಆಚರಿಸುತ್ತಾರೆ. ಬ್ರಹ್ಮಾವರ, ಉಡುಪಿಯಿಂದ ಆಚೆಗಿನ ಬಹುತೇಕ ಕರಾವಳಿ ಭಾಗದವರಿಗೆ ಬರುತ್ತದೆ. ಇನ್ನು ಸೂರ್ಯ ಸಿದ್ಧಾಂತ ಪಂಚಾಂಗವನ್ನು ಅನುಸರಿಸುವವರು ತದಿಗೆ ದಿನವಾದ ಸೆ. 18 ಕ್ಕೆ ಚೌತಿ ಆಚರಿಸುವಂತಾಗಿದೆ. ಕುಂದಾಪುರದ ಕೆಲ ಭಾಗ, ಬೈಂದೂರು ಪ್ರದೇಶ, ಮಲೆನಾಡು ಭಾಗದಲ್ಲಿ ಬರುತ್ತದೆ. ಒಂದು ಸಣ್ಣ ವ್ಯತ್ಯಾಸ ಈ ರೀತಿಯ ಸಂದಿಗ್ಧ ಪರಿಸ್ಥಿತಿಯನ್ನು ತಂದಿದೆ ಎನ್ನುವುದಾಗಿ ಹಾಲಾಡಿಯ ಪಂಚಾಂಗ ಕರ್ತರಾದ ತಟ್ಟುವಟ್ಟು ವಾಸುದೇವ ಜೋಯಿಸರು “ಉದಯವಾಣಿ’ಗೆ ತಿಳಿಸಿದ್ದಾರೆ.
18ರಂದು ಪೂರ್ಣ ದಿನ ಚತುರ್ಥಿ ಇದೆ
ಬೆಳಗಾವಿ: ಗಣೇಶ ಚತುರ್ಥಿಯನ್ನು ತಿಥಿ, ನಕ್ಷತ್ರದ ಪ್ರಕಾರ ಇದೇ ಸೆ.18ರಂದು ಆಚರಿಸಲಾಗುತ್ತದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಖ್ಯಾತ ಜ್ಯೋತಿಷಿ ಮತ್ತು ಮಹಾಂತೇಶನಗರ ರಾಯರಮಠದ ಅರ್ಚಕರಾದ ಸಮೀರಾಚಾರ್ಯ ಹೇಳಿದ್ದಾರೆ. ಗಣೇಶ ಚತುರ್ಥಿ ಆಚರಣೆಯಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಸೆ.18ರಂದು ಬೆಳಗ್ಗೆ ಚತುರ್ಥಿ ತಿಥಿ ಬರುತ್ತಿದ್ದು ಪೂರ್ಣ ದಿನ ಇದೇ ತಿಥಿ ಇದೆ. ಸೆ.19ರ ಬೆಳಗ್ಗೆ ಚತುರ್ಥಿ ತಿಥಿ ಬದಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸೆ.18 ರಂದು ಗಣೇಶಚೌತಿ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.
ಎರಡು ದಿನ ಚೌತಿ ಹಬ್ಬ: ಕಾರಣವೇನು ?
ಹೊನ್ನಾವರ: ಎರಡು ಚೌತಿಯ ಗೊಂದಲ ಎಲ್ಲರ ತಲೆ ಹೊಕ್ಕಿದೆ. ಒಂದೊಂದು ಪಂಚಾಂಗ ಒಂದೊಂದು ಲೆಕ್ಕಾಚಾರದಲ್ಲಿ ಚೌತಿ ಬರೆದಿದೆ. ಈ ಹಿನ್ನೆಲೆಯಲ್ಲಿ ಖ್ಯಾತ ಆಗಮಶಾಸ್ತ್ರ ವಿಶಾರದ ವೇ.ಮೂ. ಕಟ್ಟೆ ಶಂಕರ ಭಟ್ಟರು ಎರಡು ಚೌತಿಗೆ ಕಾರಣವನ್ನು ತಿಳಿಸಿದ್ದಾರೆ. “ಪರದಿನೇ ಏವಾಂಶೇನ ಸಾಕಲೆ ನವಾ ಮಧ್ಯಾಹ್ನ ವ್ಯಾಪ್ತಂಭಾವೇ ಸರ್ವಪಕ್ಷೇಷು ಪೂರ್ವಾಗ್ರಾಹ್ಯಾ’- ಅಂದರೆ ಈ ಧರ್ಮಶಾಸ್ತ್ರ ವಾಕ್ಯದಂತೆ ಭಾದ್ರಪದ ಶುದ್ಧ ಚತುರ್ಥಿ ತಿಥಿಯು ಸೂರ್ಯೋದಯದಿಂದ ಮಧ್ಯಾಹ್ನವ್ಯಾಪಿನಿ ಆಗಿದ್ದರೆ “ಅಂಶಿಕವಾಗಿದ್ದರೂ’ ಅದೇ ದಿನ ವರಸಿದ್ಧಿವಿನಾಯಕ ವ್ರತವನ್ನು ಆಚರಿಸಬೇಕು. ಅದಕ್ಕೂ ಕಡಿಮೆ ತಿಥಿಪ್ರಮಾಣ ಇದ್ದಾಗ ಹಿಂದಿನ ದಿನವೇ ಅಂದರೆ ತದಿಗೆಯಂದೇ ಚೌತಿಹಬ್ಬವನ್ನು ಆಚರಿಸಬೇಕು.
ಈ ವರ್ಷ “ಸೂರ್ಯಸಿದ್ಧಾಂತಾನುಸಾರೀ ಧಾರ್ಮಿಕ’ ಪಂಚಾಂಗದಂತೆ ಚೌತಿಯ ದಿನ ಚತುರ್ಥಿ ತಿಥಿಯು ಮಧ್ಯಾಹ್ನದ ಮೊದಲೇ ಮುಗಿದು ಹೋಗುವುದರಿಂದ ಹಿಂದಿನ ದಿನ ಸೆ.18ರ ಸೋಮವಾರದಂದೇ ಹಬ್ಬ ಆಚರಿಸಬೇಕಾಗುವುದು. ಇನ್ನು “ದೃಗ್ಸಿದ್ಧಾಂತಾನುಸಾರೀ ಬಗ್ಗೋಣ’ ಪಂಚಾಂಗದಂತೆ ಚತುರ್ಥಿ ತಿಥಿ ದಿನ ಸೂರ್ಯೋದಯದಿಂದ ಮಧ್ಯಾಹ್ನ ನಂತರದವರೆಗೂ ತಿಥಿಪ್ರಮಾಣ ಇರುವುದರಿಂದ ಅದೇ ದಿನ ಅಂದರೆ ಸೆ.19ರ ಮಂಗಳವಾರವೇ ಚೌತಿಹಬ್ಬವನ್ನು ಆಚರಿಸಬೇಕಾಗುವುದು.
ಸೋಮವಾರವೇ ಶುಭ ಮುಹೂರ್ತ
ಗದಗ: ಗಣೇಶ ಚತುರ್ಥಿ ಆಚರಿಸಲು ಯಾವುದೇ ಗೊಂದಲ ಬೇಡ. ಸೆ.18ರಂದು ಗಣೇಶ ಚತುರ್ಥಿ ಆಚರಿಸಲು ಶುಭ ಮುಹೂರ್ತವಿದೆ ಎಂದು ಗದು ಗಿನ ಪಂಚಾಂಗ-ಕ್ಯಾಲೆಂಡರ್ ಖ್ಯಾತಿಯ ಬಸವಯ್ಯಶಾಸ್ತ್ರಿಗಳ ಶಿಷ್ಯರಾದ ಪಂಚಾಂಗ ಬರಹಗಾರ ಗುರುಪಾದಯ್ಯ ಶಾಸ್ತ್ರಿಗಳು ತಿಳಿಸಿದ್ದಾರೆ. ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಅಕ್ಷಾಂಶ, ರೇಖಾಂಶ ಹಾಗೂ ಸೂರ್ಯನ ಉದಯ ಹಾಗೂ ಅಸ್ತವನ್ನು ಆಧಾರವಾಗಿಟ್ಟುಕೊಂಡು ಗಣೇಶ ಚತುರ್ಥಿಯ ದಿನವನ್ನು ನಿರ್ಧರಿಸಲಾಗಿದೆ. ಜತೆಗೆ ಮೈಸೂರಿನ ಒಂಟಿಕೊಪ್ಪಲ್ ಪಂಚಾಂಗವನ್ನು ಆಧರಿಸಲಾಗಿ ಸೆ.18ರಂದೇ ಗಣೇಶ ಪ್ರತಿಷ್ಠಾಪನೆಗೆ ಶುಭ ಮುಹೂರ್ತ ನಿಗದಿ ಮಾಡಲಾಗಿದೆ ಎಂದಿದ್ದಾರೆ.
19ಕ್ಕೆ ಬೆಳಿಗ್ಗೆ ಚತುರ್ಥಿ ಇದೆ
ಕರಾವಳಿ ಭಾಗದಲ್ಲಿ ಆ ದಿನದ ಪ್ರಾತಃಕಾಲ ಇರುವ ತಿಥಿಯನ್ನು ದೇವತಾರಾಧನೆಗೆ ಪರಿಗಣಿಸಲಾಗುತ್ತದೆ. ಅದರಂತೆ ನೋಡಿದರೆ 18ನೇ ತಾರೀಕಿಗೆ ತೃತೀಯಾ ತಿಥಿಯು 15 ಮುಕ್ಕಾಲು ಘಳಿಗೆ ಇರುತ್ತದೆ. 19ರಂದು ಪ್ರಾತಃಕಾಲದಿಂದ 18 ವರೆ ಘಳಿಗೆ ಚತುರ್ಥಿ ತಿಥಿ ಇರುತ್ತದೆ. ಹಾಗಾಗಿ ಆ ದಿನದಂದೇ ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತದೆ.
ಮುಕುಂದ ಭಟ್, ಪುರೋಹಿತರು, ಜ್ಯೋತಿಷಿಗಳು, ಪುತ್ತೂರು