Police: ರಶೀದಿ ನೀಡಿಲ್ಲ ಎಂಬ ವೀಡಿಯೋ ವೈರಲ್: ಪೊಲೀಸರಿಂದ ಸ್ಪಷ್ಟನೆ
Team Udayavani, Oct 1, 2023, 2:06 AM IST
ಸುಬ್ರಹ್ಮಣ್ಯ: ಕಲ್ಮಕಾರಿನ ಯುವಕನೊಬ್ಬ ತನ್ನಿಂದ ಪೊಲೀಸರು ಹಣ ಪಡೆದು ರಶೀದಿ ನೀಡಿಲ್ಲ ಎಂದು ಆರೋಪಿಸಿದ ವೀಡಿಯೋ ಒಂದು ವೈರಲ್ ಆಗಿತ್ತು. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಬೈಕ್ ಸವಾರ ಕಲ್ಮಕಾರಿನ ಓಂ ಪ್ರಕಾಶ್ ನಿಡುಬೆ ಎಂಬವರ ಮೇಲೆ ಸುಬ್ರಹ್ಮಣ್ಯ ಪೊಲೀಸರು ಪೆಟ್ಟಿ ಕೇಸ್ ಹಾಕಿದ್ದು ದಂಡದ ಹಣ 200 ರೂ. ಅನ್ನು ಪೊಲೀಸರಿಗೆ ಸ್ಥಳದಲ್ಲಿ ನೀಡಿದ್ದು, ರಶೀದಿ ಕೇಳಿದಾಗ ಪೊಲೀಸರು, ಕೋರ್ಟಿನ ನೋಟಿಸ್ ನೀಡಿದ್ದು, ಅನಂತರ ರಶೀದಿ ಸಿಗುವುದಾಗಿ ತಿಳಿಸಿದ್ದರು. ಆದರೆ ಯುವಕ ಘಟನೆಯನ್ನು ಗುಪ್ತವಾಗಿ ವೀಡಿಯೋ ಮಾಡಿ ರಶೀದಿ ನೀಡಿಲ್ಲ ಎಂದು ವೈರಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬೈಕ್ ಚಾಲಕನ ವಿರುದ್ಧ ನಿರ್ಲಕ್ಷ್ಯ ಚಾಲನೆಯ ಕೇಸು ಹಾಕಿದ್ದು, ಯುವಕನಿಂದ ಪಡೆದ ಹಣವನ್ನು ಕೋರ್ಟ್ನಲ್ಲಿ ಪೊಲೀಸರೇ ಕಟ್ಟಲಿದ್ದು, ಬಳಿಕ ಅದರ ರಶೀದಿ ಪಡೆಯಬಹುದು. ಇಲ್ಲಿ ಪೆಟ್ಟಿ ಕೇಸ್ ಹಾಕಿದ ದಾಖಲೆಯ ನಕಲು ಪ್ರತಿಯನ್ನು ಪಾರ್ಟಿಗೆ ನೀಡಿದ್ದು, ಆದರೆ ವೀಡಿಯೋ ಮಾಡಿದ ಯುವಕ ಪೋಲೀಸರ ಮೇಲೆ ತಪ್ಪು ಅಭಿಪ್ರಾಯ ಬರುವಂತೆ, ತನಗೆ ಬೇಕಾದಷ್ಟು ಮಾತ್ರ ವೀಡಿಯೋವನ್ನು ವೈರಲ್ ಮಾಡಿದ್ದಾನೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.