ಜಗತ್ತೇ ಯೋಗ ಒಪ್ಪಿಕೊಂಡಿದ್ದು ನಮಗೆ ಹೆಮ್ಮೆ: ಕಾಗೇರಿ
Team Udayavani, Jun 21, 2022, 2:10 PM IST
ಶಿರಸಿ: ಜಗತ್ತೇ ಇಂದು ಯೋಗವನ್ನು ಒಪ್ಪಿಕೊಂಡಿದೆ. ಭಾರತೀಯರಾದ ನಮಗೆಲ್ಲ ಇದು ಹೆಮ್ಮೆಯ ವಿಷಯ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಮಂಗಳವಾರ ನಗರದ ಲಯನ್ಸ್ ಭವನದಲ್ಲಿ ಜಿಲ್ಲಾ ಯೋಗ ಫೆಡರೇಶನ್, ವಿವಿಧ ಸಂಘಟನೆಗಳ ಸಹಕಾರದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಟ್ಟದ 8ನೇ ಯೋ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸ್ವತಃ ಪ್ರಧಾನಿಯವರೇ ಯೋಗ ದಿನಾಚರಣೆ ವೇಳೆ ರಾಜ್ಯದಲ್ಲಿದ್ದಾರೆ. ಯೋಗ ಸಿದ್ಧವಾಗಿರುವ ಸೂತ್ರ, ಇಂತಹ ಕೊಡುಗೆ ನಮ್ಮ ಹೆಮ್ಮೆ. ವಯಕ್ತಿಕವಾಗಿ ಯೋಗ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಪ್ರತಿ ನಿತ್ಯ ಯೋಗ ಮಾಡುವ ಮೂಲಕ ನಮ್ಮನ್ನೇ ನಾವು ಪ್ರಬಲಗೊಳಿಸಿಕೊಳ್ಳಬೇಕು ಎಂದ ಅವರು, ಭಾರತ ಜಗತ್ತಿನ ಗುರು ಆಗಿರಲು ಕಾರಣ ಜ್ಞಾನ. ಈ ಜ್ಞಾನದ ದಾಹ ನಮ್ಮಲ್ಲಿ ಹೆಚ್ಚಬೇಕು. ಜ್ಞಾನ ಸಂಪಾದನೆಗೆ ಯೋಗವನ್ನು ಮಾರ್ಗವಾಗಿಸಿಕೊಳ್ಳಬೇಕು. ಯೋಗ ಸೂತ್ರದ ಅಡಿಯಲ್ಲಿ ಸೃಷ್ಠಿ ಸತ್ಯ ಅರಿಯಲು ಮುಂದುವರೆಯಬೇಕು ಎಂದು ಇಂದು ಸಂಕಲ್ಪ ಮಾಡಿಕೊಳ್ಳಬೇಕು ಎಂದರು.
ಸಹಾಯಕ ಆಯುಕ್ತ ಆರ್.ದೇವರಾಜು, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಅನಿಲ್ ಕರಿ, ಶ್ರೀಕಾಂತ ಹೆಗಡೆ ಮತ್ತಿತರರು ವೇದಿಕೆಯಲ್ಲಿದ್ದರು.