ಸೇತುವೆ ನಿರ್ಮಾಣಕ್ಕೆ ಸಮತಟ್ಟು ಕಾರ್ಯ ಆರಂಭ
Team Udayavani, Jan 19, 2019, 6:07 AM IST
ಗುರುಪುರ : ಬರೋಬ್ಬರಿ 96 ವರ್ಷಗಳಷ್ಟು ಕಾಲ ಹಳೆಯದಾಗಿರುವ ಗುರುಪುರ ಸೇತುವೆಗೆ ಪರ್ಯಾಯ ವಾಗಿ ನಿರ್ಮಾಣಗೊಳ್ಳಲಿರುವ ನೂತನ ಸೇತುವೆಯ ಜಮೀನು ಸಮತಟ್ಟು ಕಾರ್ಯ ಆರಂಭಗೊಂಡಿದೆ.
ಮಂಗಳೂರು- ಮೂಡಬಿದಿರೆ- ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ಹಾದುಹೋಗಲಿರುವ ರಸ್ತೆಯ ಗುರುಪುರದ ಫಲ್ಗುಣಿ ನದಿಗೆ ಅಡ್ಡಲಾಗಿ ಕುದುರೆಗಾಡಿ ಹಾದುಹೋಗಲೆಂದು ಬ್ರಿಟಿಷರು 1923ರಲ್ಲಿ ಈ ಸೇತುವೆಯನ್ನು ನಿರ್ಮಿಸಿದ್ದರು. ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಬಳಿಕವೂ ಇದೇ ಸೇತುವೆಯಲ್ಲಿ ಸಾವಿರಾರು ವಾಹನಗಳು ಸಂಚಾರ ನಡೆಸುತ್ತಿದ್ದು, ಸಂಪೂರ್ಣವಾಗಿ ಶಿಥಿಲಾವಸ್ಥೆಗೊಂಡಿದೆ.
ಕಳೆದ ಮಳೆಗಾಲದ ವೇಳೆ ಮೂಲರಪಟ್ಣ ಸೇತುವೆ ಕುಸಿದುಬಿದ್ದ ಬಳಿಕ ಗುರುಪುರ ಸೇತುವೆಯ ದೃಢತೆಯ ಬಗ್ಗೆ ಆತಂಕ ಉಂಟಾಗಿತ್ತು. ಪಿಡಬ್ಲ್ಯೂಡಿ ಅಧಿಕಾರಿಗಳ ತಂಡ ಆಗಮಿಸಿ ಸೇತುವೆಯ ಧಾರಣಾ ಸಾಮರ್ಥ್ಯವನ್ನು ಪರೀಕ್ಷೆ ನಡೆಸಿ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ವಾಹನಗಳ ತೂಕ (ಸಾಂದ್ರತೆ)ಕ್ಕೆ ತಕ್ಕಂತೆ ಸೇತುವೆಯು ಧಾರಣೆಯ ಶಕ್ತಿ ಹೊಂದಿಲ್ಲ ಎಂದಿತ್ತು. ಈ ಹಿನ್ನೆಲೆಯಲ್ಲಿ ನೂತನ ಸೇತುವೆಗೆ ಕಾಮಗಾರಿ ನಡೆಸಲಾಗುತ್ತಿದೆ.
ಮಂಗಳೂರಿನಿಂದ ಮೂಡಬಿದಿರೆಗೆ ಸಾಗುವ ಸೇತುವೆಯ ಎಡಭಾಗದಲ್ಲಿ ಈ ನೂತನ ಸೇತುವೆ ನಿರ್ಮಾಣಗೊಳ್ಳಲಿದೆ. ಸೇತುವೆಯ ಎರಡೂ ಭಾಗದಲ್ಲಿ ಮಣ್ಣು ಸಮತಟ್ಟು ನಡೆಸಿ ಪಿಲ್ಲರ್ಗಳಿಗೆ ಗುರುತು ಹಾಕುವ ಕೆಲಸ ನಡೆದಿದೆ. ಹಳೆ ಸೇತುವೆಯು 4.5 ಮೀಟರ್ ಅಗಲವಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ನೂತನ ಸೇತುವೆ 11 ಮೀ. ಅಗಲ ಇರಲಿದೆ.