ಇಂದು ನಾವು ಬಹುತ್ವ ಬಿಟ್ಟು ಏಕತ್ವ ಕಾಣಲು ಹೊರಟಿದ್ದೇವೆ; ಷ.ಶೆಟ್ಟರ್
Team Udayavani, Nov 16, 2018, 4:37 PM IST
ಮೂಡುಬಿದಿರೆ:ಒಂದು ಕನ್ನಡ ಭಾಷೆಯಲ್ಲಿ ಏಕತೆ ಮಾತ್ರವಿಲ್ಲ, ಅದು ನಮ್ಮ ಬಹುತ್ವದ ಭಾಷೆ, ನಮ್ಮ ಸಂಸ್ಕೃತಿಯನ್ನು ಬಿಂಬಿಸಿದೆ. ಒಂದು ಕನ್ನಡ ಬಹುತ್ವದ ಕನ್ನಡ. ನಾವೆಲ್ಲ ಮಾತನಾಡುವ ಭಾಷೆ ಕನ್ನಡ ಆದರೆ ಆಯಾ ಪ್ರಾಂತ್ಯಕ್ಕೆ, ಪ್ರದೇಶಕ್ಕೆ ಭಿನ್ನ, ಭಿನ್ನವಾಗಿದೆ. ಹೀಗೆ ಕನ್ನಡ ಭಾಷೆ ಭಿನ್ನ, ಭಿನ್ನ ಪ್ರದೇಶದ ಒಂದು ಕನ್ನಡವಾಗಿ ಬಹುತ್ವದಲ್ಲಿ ಅನಾವರಣಗೊಂಡಿದೆ ಎಂದು ಖ್ಯಾತ ಸಂಶೋಧಕ ಡಾ.ಷ.ಶೆಟ್ಟರ್ ಹೇಳಿದರು.
ಅವರು ಶುಕ್ರವಾರ ಮೂಡುಬಿದಿರೆ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿನ ರತ್ನಾಕರವರ್ಣಿ ವೇದಿಕೆಯಲ್ಲಿ ಮೂರು ದಿನಗಳ ಆಳ್ವಾಸ್ ನುಡಿಸಿರಿಗೆ ವಿಧ್ಯುಕ್ತ ಚಾಲನೆ ನೀಡಿ ಮಾತನಾಡಿದರು.
ಇಲ್ಲಿ ನಡೆಯುತ್ತಿರುವ ನುಡಿಸಿರಿಯ ಜೀವಾಳವೇ ಅಕ್ಷರ ಸಂಸ್ಕೃತಿ. ಕನ್ನಡ ಭಾಷೆ ಕಲೆ, ಸಂಗೀತ, ಸಂಸ್ಕೃತಿಗೆ ಕೊಡುವ ಬಹುತ್ವವನ್ನು ಪ್ರತಿಪಾದಿಸುತ್ತದೆ.ಇಂದು ನಾವು ಹೊಸ ಸಾಹಿತ್ಯದ ಚರಿತ್ರೆ ಸೃಷ್ಟಿಸಬೇಕಾಗಿದೆ ಎಂದರು.
ನಾವು ಇಂದು ಬಹುತ್ವ ಬಿಟ್ಟು ಏಕತ್ವ ಕಾಣಲು ಹೊರಟಿದ್ದೇವೆ. ಎಷ್ಟು ಉದಾರವಾದ ಸಮಾಜ ನಮ್ಮಲ್ಲಿ ಇತ್ತು ಎಂದರೆ..ನಮ್ಮ ದೇಶದಲ್ಲಿ ಆಳಿದ ಯಾವ ರಾಜ, ಅರಸನೂ ಕೂಡಾ ಯಾವುದೇ ಕೃತಿಯನ್ನು ಬಹಿಷ್ಕರಿಸಿಲ್ಲ.ಅರೆಸೊತ್ತಿಗೆ ಇದ್ದಾಗಲೂ ಇದು ತಪ್ಪು, ಒಪ್ಪು ಎಂದು ಪುಸ್ತಕವನ್ನು ನಿಷೇಧಿಸಿದ , ಯಾವ ಕವಿಯನ್ನು ಹೊಡೆದು ಕೊಂದ ನಿದರ್ಶನ 2ಸಾವಿರ ವರ್ಷಗಳ ಇತಿಹಾಸದಲ್ಲಿ ಇಲ್ಲ. ವಾಕ್ ಸ್ವಾತಂತ್ರ್ಯ ಇತ್ತು. ಇತ್ತೀಚೆಗೆ ಸೆನ್ಸಾರ್ ಮಂಡಳಿಗಳು ಇದು ತಪ್ಪು, ಸರಿ ಎಂದು ಹೇಳಲು ಸರ್ಕಾರಗಳು ಹೊರಟಿವೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಬಹುತ್ವ ನಮ್ಮ ಸಂಸ್ಕೃತಿಯನ್ನು ನಿರ್ಮಾಣ ಮಾಡಿದೆ. ಕನ್ನಡ ಒಂದೇ ಆಗಿದ್ದರೆ ಅದು ಏಕತ್ವವನ್ನು ನಿರೂಪಿಸುತ್ತದೆ. ಆದರೆ ನಾವು ಏಕತ್ವವನ್ನು, ಬಹುತ್ವವನ್ನು ಸರಿಸಮಾನವಾಗಿ ನೋಡಿಕೊಂಡು ಬಂದವರು.ಭಾಷೆ ಅಷ್ಟೇ ಅಲ್ಲ, ಸಾಹಿತ್ಯ ಅಷ್ಟೇ ಅಲ್ಲ, ಕಲೆ ಅಷ್ಟೇ ಅಲ್ಲ ಸಂಸ್ಕೃತಿ ಮತ್ತು ಸಮಾಜ ಕೂಡಾ ಬಹುತ್ವವನ್ನು ಅನುಸರಿಸಿಕೊಂಡು ಬಂದಿದೆ.
ಕಣ್ಮುಚ್ಚಿ ಇತಿಹಾಸವನ್ನು ನೋಡುವುದಾದರೆ ಕೆಲವು ಇತಿಹಾಸಕಾರರು ಇಲ್ಲಿ ಚಾತುರ್ವಣ ವ್ಯವಸ್ಥೆ ಇತ್ತು ಎಂದು ಪ್ರತಿಪಾದನೆ ಮಾಡಿದ್ದಾರೆ. ಪ್ರಥಮ 600 ವರ್ಷದ ಇತಿಹಾಸದಲ್ಲಿ ನಮ್ಮ ಸಮಾಜ ವರ್ಣವಿಮುಕ್ತವಾಗಿತ್ತು. ಜಾತಿಗಳು ಅಂದು ಮುಖ್ಯವಾಗಿರಲಿಲ್ಲವಾಗಿತ್ತು ಎಂಬುದನ್ನು ಅನೇಕ ಶಾಸನಗಳು ಇದನ್ನು ಋಜುವಾತುಪಡಿಸಿವೆ ಎಂದರು.
ಕ್ಷಮೆಯಾಚಿಸಿದ ಷ.ಶಟ್ಟರ್!
ನಾನು ನನ್ನ 45ವರ್ಷಗಳ ಉಪನ್ಯಾಸಕ ವೃತ್ತಿಯಲ್ಲಿ ನನ್ನ ವಿದ್ಯಾರ್ಥಿಗಳಿಗೆ ಮೋಸ ಮಾಡಿದ್ದೇನೆ ಎಂದು ಎನಿಸುತ್ತಿದೆ. ಅದಕ್ಕಾಗಿ ನಾನು ಇಂದು ಕ್ಷಮೆಯಾಚಿಸುತ್ತಿದ್ದೇನೆ. ಯಾಕೆಂದರೆ ನಾನು ಯಾರೋ ಬರೆದ ಇತಿಹಾಸದ ಪಾಠವನ್ನೇ ಮಾಡಿದ್ದೇನೆ ವಿನಃ, ನಿಜವಾದ ಇತಿಹಾಸ ಬೋಧನೆ ಮಾಡುವ ಗ್ರಂಥಗಳೇ ಇರಲಿಲ್ಲ. ಹೀಗಾಗಿ ನಾನು ಕೂಡಾ ಹಳೆಯ ಇತಿಹಾಸವನ್ನೇ ಬೋಧಿಸಿದ್ದೇನೆ ಎಂದರು.