ಪೊಲೀಸರ ಮೇಲೆ ಹಲ್ಲೆ : ಆರೋಪಿ ಕಾಲಿಗೆ ಗುಂಡು
Team Udayavani, Apr 30, 2019, 4:24 PM IST
ಬೆಂಗಳೂರು : ತನ್ನನ್ನು ಹಿಡಿಯಲು ಬಂದ ಪೊಲೀಸರ ಮೇಲೆ ಡ್ರಾಗರ್ ನಿಂದ ದಾಳಿ ನಡೆಸಿದ ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಸೆರೆ ಹಿಡಿದಿರುವ ಘಟನೆ ನಗರದ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಇಂದು ಬೆಳಿಗ್ಗಿನ ಜಾವ 4 ಗಂಟೆ ಸುಮಾರಿಗೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮನ್ಸೂರ್ ಖಾನ್ ಎಂಬ ಆರೋಪಿಯನ್ನು ಹಿಡಿಯಲೆಂದು ಪಿ.ಎಸ್.ಐ. ರಾಜೇಂದ್ರ ಅವರು ತಮ್ಮ ಸಿಬ್ಬಂದಿಯವರೊಂದಿಗೆ ಕಾಟನ್ ಪೇಟೆ ರೈಲ್ವೇ ನಿಲ್ದಾಣದ ಹಿಂಭಾಗದ ರಸ್ತೆಯ ಪಕ್ಕದಲ್ಲಿರುವ ಕಟ್ಟಡದ ಬಳಿ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಮನ್ಸೂರ್ ಖಾನ್ ಪೊಲೀಸ್ ಸಿಬ್ಬಂದಿ ಜಯಚಂದ್ರರ ಮೇಲೆ ತನ್ನ ಬಳಿಯಿದ್ದ ಡ್ರಾಗರ್ ನಿಂದ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಪಿ.ಎಸ್.ಐ. ರಾಜೇಂದ್ರ ಅವರು ಆರೋಪಿಯ ಮೇಲೆ ಒಂದು ಸುತ್ತು ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗುಂಡೇಟಿನಿಂದ ಕಾಲಿನ ಭಾಗಕ್ಕೆ ಗಾಯಗೊಂಡಿರುವ ಆರೋಪಿ ಮನ್ಸೂರ್ ಇದೀಗ ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಮನ್ಸೂರ್ ಖಾನ್ ಮೇಲೆ ಶಸ್ತ್ರಾಸ್ತ್ರ ದರೋಡೆ, ಕೊಲೆ ಯತ್ನ ಮತ್ತು ಅಪಹರಣ ಸೇರಿದಂತೆ ಏಳಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಈ ಘಟನೆಗೆ ಸಂಬಂಧಿಸಿದಂತೆ ಕಾಟನ್ ಪೇಟೆ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307, 353 ಅಡಿಯಲ್ಲಿ ಪ್ರಕರಣ ದಾಖಲುಗೊಂಡಿದೆ.