Pen drive ನಲ್ಲಿ ಹಾಕಿಕೊಂಡಿರಿ, ಚುನಾವಣೆ ಮುಗಿದ ಮೇಲೆ ಉತ್ತರ!: ಬಿ.ಕೆ.ಹರಿಪ್ರಸಾದ್
ಕುರ್ಚಿಗೆ ನಮ್ಮ ನಿಷ್ಠೆಯಿಲ್ಲ, ನಾನು ಸೇವಾದಳದಿಂದ ಬಂದವನು.... ಮಾರ್ಮಿಕ ಹೇಳಿಕೆ
Team Udayavani, Apr 12, 2024, 7:53 PM IST
ಬೆಳಗಾವಿ: ಈ ಲೋಕಸಭಾ ಚುನಾವಣೆ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ರಾಜ್ಯ ರಾಜಕಾರಣದ ಬಗ್ಗೆ ಏನೇ ಪ್ರಶ್ನೆಗಳಿದ್ದರೂ ಅದನ್ನು ಪೆನ್ ಡ್ರೈವ್ದಲ್ಲಿ ಹಾಕಿ ಇಟ್ಟುಕೊಳ್ಳಿ. ಚುನಾವಣೆ ಮುಗಿದ ಮೇಲೆ ಬಂದು ಅದೆಲ್ಲಕ್ಕೂ ಉತ್ತರ ನೀಡುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಮತ್ತು ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕ ಬಿ.ಕೆ. ಹರಿಪ್ರಸಾದ್ ಮಾರ್ಮಿಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ರಾಜ್ಯ ರಾಜಕಾರಣದ ಚುನಾವಣೆಯಲ್ಲ. ನಾನು ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕ. ಯಾರೂ ನನ್ನನ್ನ ಉಪಯೋಗಿಸಿಕೊಳ್ಳಲು ಆಗುವುದಿಲ್ಲ. ಪಕ್ಷದ ಪರ ಕೆಲಸ ಮಾಡುತ್ತೇನೆ. ನಾನು ಸೇವಾದಳದಿಂದ ಬಂದವನು.ನಾನು ಯಾವಾಗಲೂ ದೆಹಲಿ ನಾಯಕರ ರಾಜಕಾರಣ ಮಾಡುತ್ತ ಬಂದಿದ್ದೇನೆ. ವೈಯಕ್ತಿಕ ರಾಜಕಾರಣ ಬೇರೆ. ಅಂತಹ ಏನೇ ಪ್ರಶ್ನೆಗಳಿದ್ದರೂ ಈಗ ಪೆನ್ಡ್ರೈವ್ ನಲ್ಲಿ ಹಾಕಿಕೊಂಡಿರಿ. ಚುನಾವಣೆ ಮುಗಿದ ಮೇಲೆ ಉತ್ತರ ನೀಡುತ್ತೇನೆ ಎಂದರು.
ರಾಜಕಾರಣದಲ್ಲಿ ಹಲವಾರು ಮುಖವಾಡಗಳನ್ನು ನೋಡಬೇಕಾಗುತ್ತದೆ. ಆದರೆ ನನ್ನ ವೈಯಕ್ತಿಕವಾದ ನಿಷ್ಠೆ ಕಾಂಗ್ರೆಸ್ ಪಕ್ಷ. ವೈಯಕ್ತಿಕವಾದ ನಿಷ್ಠೆ ತ್ರಿವರ್ಣ ಧ್ವಜ, ಸಂವಿಧಾನ. ಕುರ್ಚಿಗೆ ನಮ್ಮ ನಿಷ್ಠೆಯಿಲ್ಲ. ಆದರೆ ಅಖಿಲ ಭಾರತ ಮಟ್ಟದಲ್ಲಿ ನಮ್ಮ ಪಕ್ಷದ ಅಧ್ಯಕ್ಷರಾದವರ ಕುರ್ಚಿಯ ಬಗ್ಗೆ ನಿಷ್ಠೆ ಇದೆ ಎಂದರು.